ಚೆನ್ನೈ , ಮೇ 21: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ತಂಡವನ್ನು ಪ್ಲೇ ಆಫ್ ಹಂತಕ್ಕೇರಿಸಿದ ಸಂತಸದಲ್ಲಿದ್ದಾರೆ. ಈ ನಡುವೆ ಧೋನಿ ಅಭಿಮಾನಿಯಾಗಿರುವ ಬಾಡ್ಮಿಂಟನ್ ಲೋಕದ ಭಾರತದ ತಾರೆಯೊಬ್ಬರು ಡಬ್ಬಲ್ ಖುಷಿಯಲ್ಲಿದ್ದಾರೆ.
ವಿಶ್ವದ ನಂ.3 ಬ್ಯಾಡ್ಮಿಂಟನ್ ಆಟಗಾರ ಕೆ.ಶ್ರೀಕಾಂತ್ ಅವರಿಗೆ ಎಂಎಸ್ ಧೋನಿ ಅವರು ತಮ್ಮ ಹಸ್ತಾಕ್ಷರವಿರುವ ಕ್ರಿಕೆಟ್ ಬ್ಯಾಟ್ ವೊಂದನ್ನು ಉಡುಗೊರೆ ರೂಪದಲ್ಲಿ ಕಳಿಸಿಕೊಟ್ಟಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪಡೆದು ನಂತರ ವಿಶ್ವದ ನಂ.1 ಸ್ಥಾನಕ್ಕೇರಿದ್ದ ಶ್ರೀಕಾಂತ್ ಅವರು ಈ ಅನಿರೀಕ್ಷಿತ ಉಡುಗೊರೆ ಪಡೆದು ಸಕತ್ ಥ್ರಿಲ್ ಆಗಿದ್ದಾರೆ. ಜತೆಗೆ ತಮ್ಮ ನೆಚ್ಚಿನ ಚೆನ್ನೈ ತಂಡದ ಯಶಸ್ಸು ಕಂಡು ಖುಷಿಯಾಗಿದ್ದಾರೆ.
ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಅವರು ಶ್ರೀಕಾಂತ್ಗೆ ಧೋನಿ ನೀಡಿದ್ದ ವಿಶೇಷ ಉಡುಗೊರೆಯನ್ನು ತಲುಪಿಸಿದ್ದು ವಿಶೇಷ. ಮತ್ತೊಂದು ಕುತೂಹಲದ ಸಂಗತಿಯೆಂದರೆ, ಎಂಎಸ್ಕೆ ಪ್ರಸಾದ್ ಅವರು ಶ್ರೀಕಾಂತ್ ಅವರ ತಂದೆ (ಕೆವಿಎಸ್ ಕೃಷ್ಣ) ಅಭಿಮಾನಿ. ಅವರ ಬಳಿ ಪ್ರಸಾದ್ ಕ್ರಿಕೆಟ್ ಕಲಿತಿದ್ದರು. ಶ್ರೀಕಾಂತ್ ಅವರು ಧೋನಿ ಅಭಿಮಾನಿಯಾಗಿದ್ದಾರೆ.
ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಗೆಲುವು
''ಒಂದು ದಿನ ಧೋನಿಯಿಂದ ಉಡುಗೊರೆ ಪಡೆಯಲು ಸಾಧ್ಯವೇ ಎಂದು ಶ್ರೀಕಾಂತ್ ಕೇಳಿದರು. ನೀವು ಬ್ಯಾಡ್ಮಿಂಟನ್ ನಲ್ಲಿ ಅಗ್ರಸ್ಥಾನಕ್ಕೇರಿದರೆ ಧೋನಿ ಕೈಯಿಂದ ಉಡುಗೊರೆ ಕೊಡಿಸುವುದಾಗಿ ಹೇಳಿದ್ದೆ. ಇತ್ತೀಚೆಗೆ ಶ್ರೀಕಾಂತ್ ಬ್ಯಾಡ್ಮಿಂಟನ್ನಲ್ಲಿ ನಂ.1ಸ್ಥಾನಕ್ಕೆ ತಲುಪಿದಾಗ ಧೋನಿಗೆ ಶ್ರೀಕಾಂತ್ ವಿಷಯ ತಿಳಿಸಿ ಅವರನ್ನು ಅಭಿನಂದಿಸಲು ಹೇಳಿದೆ.
ಧೋನಿ ಅವರು ಚಿಕ್ಕಂದಿನಲ್ಲಿ ಫುಟ್ಬಾಲ್ ಜತೆಗೆ ಬ್ಯಾಡ್ಮಿಂಟನ್ ಆಟಗಾರರಾಗಿದ್ದರು ಕೂಡಾ. ಹೀಗಾಗಿ, ಬಾಡ್ಮಿಂಟನ್ ಕ್ಷೇತ್ರದ ಪ್ರತಿಭೆಗಳ ಬಗ್ಗೆ ಸದಾ ಆಸಕ್ತಿ ಹೊಂದಿದ್ದಾರೆ.