2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಐದನೇ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದೆ.
ಇನ್ನು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡ ಐಪಿಎಲ್ 2021ರ ಪಂದ್ಯಾವಳಿಯ ಅಂತ್ಯದ ವೇಳೆಗೆ ರಾಬಿನ್ ಉತ್ತಪ್ಪಗೆ ಸ್ಥಾನ ನೀಡಲು ತಮ್ಮ ಸ್ಟಾರ್ ಆಟಗಾರ ಸುರೇಶ್ ರೈನಾ ಅವರನ್ನು ಕೈಬಿಡುವ ಮೂಲಕ ಕಠಿಣ ನಿರ್ಧಾರವನ್ನು ತೆಗೆದುಕೊಂಡಿತು.

ಅದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವಾಗಿತ್ತು, ಸಿಎಸ್ಕೆ ತಂಡಕ್ಕೆ ಆಗತಾನೇ ಸೇರಿಕೊಂಡಿದ್ದ ರಾಬಿನ್ ಉತ್ತಪ್ಪಗೆ ಆಡಲು ಅವಕಾಶ ಸಿಕ್ಕಿತು. ಐಪಿಎಲ್ 2021ರ ಮೊದಲು ಅವರನ್ನು ರಾಜಸ್ಥಾನ ರಾಯಲ್ಸ್ ತಂಡದಿಂದ ವ್ಯಾಪಾರ ಮಾಡಲಾಗಿತ್ತು.
2021ರ ಐಪಿಎಲ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಸುರೇಶ್ ರೈನಾ ಗಾಯಗೊಂಡಿರುವುದಾಗಿ ಟಾಸ್ನಲ್ಲಿ ಎಂಎಸ್ ಧೋನಿ ತಿಳಿಸಿದರು. ಆನಂತರ ಎಡಗೈ ಬ್ಯಾಟರ್ ಸುರೇಶ್ ರೈನಾ ಆ ಋತುವಿನ ಉಳಿದ ಭಾಗಕ್ಕೆ ಸಿಎಸ್ಕೆ ತಂಡದ ಆಡುವ 11ರ ಬಳಗಕ್ಕೆ ಹಿಂತಿರುಗಲಿಲ್ಲ.
ಇದೀಗ ರಾಬಿನ್ ಉತ್ತಪ್ಪ ಅವರೊಂದಿಗಿನ ಸಂವಾದದ ಸಮಯದಲ್ಲಿ ಸುರೇಶ್ ರೈನಾ ತಮ್ಮ ಹಳೆಯ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಬಲಗೈ ಬ್ಯಾಟರ್ ರಾಬಿನ್ ಉತ್ತಪ್ಪಗೆ ಅವಕಾಶ ನೀಡುವುದು ಪಂದ್ಯ ಗೆಲ್ಲುವ ತಂತ್ರದ ಭಾಗವಾಗಿತ್ತು ಮತ್ತು ಅದಕ್ಕಾಗಿ ಸಿಎಸ್ಕೆ ನಾಯಕ ಧೋನಿ ತಮ್ಮನ್ನು ಸಂಪರ್ಕಿಸಿದ್ದರು ಎಂದು ಬಹಿರಂಗಪಡಿಸಿದರು.

"ಎಂಎಸ್ ಧೋನಿ ಮತ್ತು ನಾನು ಮಾತನಾಡುವಾಗ, 'ನೀವು ರಾಬಿನ್ ಉತ್ತಪ್ಪ ಅವರನ್ನು ಪ್ರಯತ್ನಿಸಬೇಕು' ಎಂದು ನಾನು ಅವರಿಗೆ ಸೂಚಿಸಿದೆ. ಎಂಎಸ್ ಧೋನಿ ಅವರು ನಿಮ್ಮನ್ನು ಆಡಿಸಲು ನನ್ನಿಂದ ಅನುಮತಿ ಪಡೆದರು ಮತ್ತು ನಾನು ಅವರಿಗೆ 'ನಿಮಗೆ ಫೈನಲ್ ಗೆಲ್ಲಿಸಿಕೊಡುವ ವ್ಯಕ್ತಿ, ನನ್ನನ್ನು ನಂಬಿ' ಎಂದು ಹೇಳಿದೆ," ಎಂದು ಸುರೇಶ್ ರೈನಾ ಜಿಯೋಸಿನಿಮಾದಲ್ಲಿ ರಾಬಿನ್ ಉತ್ತಪ್ಪಗೆ ಹೇಳಿದರು.
ಸುರೇಶ್ ರೈನಾ ಅವರು ಸಿಎಸ್ಕೆ ತಂಡದ ಆಡುವ ಬಳಗದಲ್ಲಿ ತಪ್ಪಿಸಿಕೊಂಡಿರುವುದು "ಧೋನಿ ನಿಘಂಟಿನಲ್ಲಿಲ್ಲ' ಎಂದು ಹೇಳಿದರು. ಆದರೆ ರಾಬಿನ್ ಉತ್ತಪ್ಪ ಸಿಎಸ್ಕೆ ತಂಡದಲ್ಲಿರಲು ಅರ್ಹರು ಎಂದು ಹೇಳುವ ಮೂಲಕ ತಮ್ಮ ನಾಯಕನಿಗೆ ಸುರೇಶ್ ರೈನಾ ಮನವರಿಕೆ ಮಾಡಿದ್ದರು.
"ನಾವು 2008ರಿಂದ ಐಪಿಎಲ್ ಆಡಿದ್ದೇವೆ, ನಾನು ಈ ಋತುವಿನಲ್ಲಿ ಪ್ರಶಸ್ತಿ ಗೆಲ್ಲಲು ಬಯಸುತ್ತೇನೆ. ಈಗ, ನಾನು ಏನು ಮಾಡಬೇಕೆಂದು ನನಗೆ ಹೇಳು ಎಂದು ಎಂಎಸ್ ಧೋನಿ ನನಗೆ ಕೇಳಿದರು".
"ಆಗ ನಾನು, ರಾಬಿನ್ ಉತ್ತಪ್ಪರನ್ನು 3ನೇ ಕ್ರಮಾಂಕದಲ್ಲಿ ಆಡಿಸಿ ಮತ್ತು ಆತ ಫೈನಲ್ ತನಕ ಆಡುವ 11ರ ಬಳಗದಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ. ಸಿಎಸ್ಕೆ ಖಂಡಿತವಾಗಿ ಕಪ್ ಗೆಲ್ಲುತ್ತದೆ. ನಾನು ಆಡಲಿ ಅಥವಾ ಉತ್ತಪ್ಪನೇ ಆಡಲಿ, ಇಬ್ಬರೂ ಒಂದೇ," ಎಂದು ಎಂಎಸ್ ಧೋನಿಗೆ ಹೇಳಿದ್ದನ್ನು ಸುರೇಶ್ ರೈನಾ ತಿಳಿಸಿದರು.
ರಾಬಿನ್ ಉತ್ತಪ್ಪ 2021ರ ಐಪಿಎಲ್ನಲ್ಲಿ ಆಡಿದ 4 ಪಂದ್ಯಗಳಲ್ಲಿ 136.90 ಸ್ಟ್ರೈಕ್ರೇಟ್ನೊಂದಿಗೆ 115 ರನ್ ಗಳಿಸಿದರು. ಫೈನಲ್ ಪಂದ್ಯದಲ್ಲಿ ಸಿಎಸ್ಕೆ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 27 ರನ್ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡಿತ್ತು.