
ಆಕೆ ಯಾವುದೇ ಚಂದುಳ್ಳಿ ಚಲುವೆಗಿಂತ ಕಡಿಮೆ ಇಲ್ಲ, ಅಲ್ಲದೇ ಈಗಷ್ಟೇ ಆಕೆ ಬಿ.ಕಾಂ ಮೊದಲ ವರ್ಷದ ವಿದ್ಯಾರ್ಥಿನಿ. ಕಳೆದ ತಿಂಗಳು ನಡೆದ ಶ್ರವಣದೋಷ ಉಳ್ಳವರ ಒಲಿಂಪಿಕ್ಸ್ನಲ್ಲಿ ಆಕೆ ಭಾಗವಹಿಸಿ ನಾಲ್ಕನೇ ಸ್ಥಾನ ಕೂಡಾ ಗಿಟ್ಟಿಸಿದ್ದಾಳೆ. ಆದರೆ ಅವಳ ಸಾಧನೆಗೆ ಶ್ರವಣದೋಷ ಯಾವತ್ತೂ ಅಡ್ಡಿ ಬಂದಿಲ್ಲ. ಯಾರು ಆಕೆ ಅನ್ನೋದು ಮುಂದೆ ಓದಿ.
ಧಾರವಾಡದ ಸರ್ಕಾರಿ ಕಾಲೇಜಿನಲ್ಲಿ ಬಿಕಾಂ ಮಾಡುತ್ತಿರುವ ಇವಳ ಹೆಸರು ನಿಧಿ ಸುಲಾಖೆ, ಟೆಕ್ವಾಂಡೋ ಚಾಂಪಿಯನ್. ನೋಡೋಕೆ ಅಷ್ಟೇ ಚೆನ್ನಾಗಿ ಇರುವ ಇವಳು ಶ್ರವಣದೋಷ ಉಳ್ಳವಳು. ಆದರೆ ಈ ಸಮಸ್ಯೆ ಇವಳ ಸಾಧನೆಗೆ ಯಾವತ್ತೂ ಅಡ್ಡಿ ಬಂದಿಲ್ಲ. ಅಲ್ಲದೇ ನನಗೆ ಕಿವಿ ಕೇಳಿಸಲ್ಲ ಎಂಬ ಭಾವನೆ ಕೂಡಾ ಇವಳಿಗೆ ಇಲ್ಲ. ಸಾಧನೆ ಮಾಡಬೇಕು ಎಂಬ ಛಲ ಮಾತ್ರ ಇವಳಲ್ಲಿದೆ.

ಧಾರವಾಡ ದಾನೇಶ್ವರಿನಗರದ ನಿಧಿ ಸುಲಾಖೆ, ಹುಟ್ಟಿದಾಗಿನಿಂದ ಶ್ರವಣದೋಷದ ಸಮಸ್ಯೆ ಎದುರಿಸುತ್ತಿದ್ದಾಳೆ. ಇವರ ಪೋಷಕರಿಗೆ ಈ ಮಗು ಬಗ್ಗೆ ಸಾಕಷ್ಟು ಜನ ಏನೆನೋ ಮಾತನಾಡಿದ್ದರು. ತಂದೆ ಮಾತ್ರ ಮಗಳ ಸಾಧನೆಗೆ ಎಂದೂ ಅಡ್ಡಿಪಡಿಸಲಿಲ್ಲ, ಛಲ ಬಿಡಲಿಲ್ಲ. ಆಕೆಗೆ ಅಥ್ಲೆಟಿಕ್ನಲ್ಲಿ ಮುಂದೆ ತರಬೇಕು ಎಂದು ಕೋಚಿಂಗ್ ಕೊಡಿಸಿದರು. ಅದೇ ರೀತಿ ಆಕೆ ನೂರು ಹಾಗೂ ಎರಡು ನೂರು ಮೀಟರ್ ಓಟದಲ್ಲಿ ಪ್ರಶಸ್ತಿ ತಂದಳು.
ಅಲ್ಲದೇ ಜಾವೆಲಿನ್ ಥ್ರೋದಲ್ಲಿ ಕೂಡಾ ನಿಧಿ ಸುಲಾಖೆ ಎತ್ತಿದ ಕೈ. ಇವಳು ತನ್ನ ಸೇಫ್ಟಿ ತಾನೇ ಮಾಡಿಕೊಳ್ಳಲಿ ಎಂದು ತಂದೆ ಇವಳಿಗೆ ಟೇಕ್ವಾಂಡೋ ತರಬೇತಿಗೆ ಸೇರಿಸಿದರು. ಆದರೆ ಕಳೆದ ತಿಂಗಳು ಬ್ರೆಜಿಲ್ನಲ್ಲಿ ಶ್ರವಣದೋಷ ಉಳ್ಳವರ ಒಲಿಂಪಿಕ್ಸ್ನಲ್ಲಿ ನಿಧಿ ಸುಲಾಖೆ 67 ಕೆಜಿ ವಿಭಾಗದಲ್ಲಿ ಭಾಗವಹಿಸಿದ್ದಳು. ಭಾರತದಿಂದ ಈ ವಿಭಾಗದಲ್ಲಿ ಭಾಗವಹಿಸಿ ನಾಲ್ಕನೇ ಸ್ಥಾನ ಗಿಟ್ಟಿಸಿದ್ದಾಳೆ.
ಬ್ರೆಜಿಲ್ನಲ್ಲಿ ನಡೆದ ಈ ಮಾರ್ಷಲ್ ಆರ್ಟ್ನ ಟೇಕ್ವಾಂಡೋದಲ್ಲಿ ನಿಧಿ ಸುಲಾಖೆ ಭಾರತಕ್ಕೆ ನಾಲ್ಕನೇ ಸ್ಥಾನ ತಂದು ಕೊಟ್ಟಿದ್ದಾಳೆ. ಅಲ್ಲಿ ಮೊದಲ ಸ್ಥಾನದಲ್ಲಿ ಟರ್ಕಿ, ಮೆಕ್ಸಿಕೋ ಎರಡನೇ ಸ್ಥಾನದಲ್ಲಿ ಬಂದಿದೆ. ಒಟ್ಟು 70 ರಾಷ್ಟ್ರಗಳು ಈ ಕ್ರೀಡೆಯಲ್ಲಿ ಭಾಗವಹಿಸಿದ್ದವು. ಇವಳ ಈ ಸಾಧನೆಗೆ ಸರ್ಕಾರಿ ಕಾಲೇಜ್ ಕೂಡಾ ಹೆಮ್ಮೆಪಟ್ಟಿದೆ.

ಅಲ್ಲದೇ ಈ ಹಿಂದೆ ನಿಧಿ ಸುಲಾಖೆ ಮಾಡಿದ ಎಲ್ಲ ಸಾಧನೆಗಳನ್ನು ಕೂಡಾ ಇವರ ಗಮನಕ್ಕೆ ಇತ್ತು. ಇದೇ ಕ್ರೀಡಾ ಕೋಟಾದಲ್ಲಿ ನಿಧಿ ಸರ್ಕಾರಿ ಕಾಲೇಜ್ನಲ್ಲಿ ಪ್ರವೇಶ ಕೂಡ ಪಡೆದಿದ್ದಾಳೆ. ಇನ್ನು ಇವಳಿಗೆ ಸರ್ಕಾರದಿಂದ ಸಹಾಯ ಸಿಕ್ಕರೆ, ಆಕೆ ಉಚಿತ ಕೋಚಿಂಗ್ ಪಡೆದು ಇನ್ನೂ ದೊಡ್ಡ ಸಾಧನೆ ಮಾಡಬಲ್ಲಳು ಅಂತಿದ್ದಾರೆ ಅವಳ ಶಿಕ್ಷಕರು.
ಒಟ್ಟಿನಲ್ಲಿ ತಂದೆ ಕನಸನ್ನು ನನಸು ಮಾಡಲು ಈ ನಿಧಿಗೆ ಯಾವುದೇ ಶ್ರವಣದೋಷ ಅಡ್ಡಿ ಬಂದಿಲ್ಲ. ಅಲ್ಲದೇ ಇಡೀ ಜಗತ್ತಿನಲ್ಲಿ ನಮ್ಮ ಭಾರತ ಏನೂ ಕಡಿಮೆ ಇಲ್ಲ ಎಂಬುದು ಕೂಡಾ ತೋರಿಸಿಕೊಟ್ಟಿದ್ದಾಳೆ.