ದೆಹಲಿಯಲ್ಲಿ ಭಾರತ ತಂಡ ಅಫ್ಘಾನಿಸ್ತಾನ ತಂಡವನ್ನು ಎದುರಿಸಲು ಸಜ್ಜಾಗಿದೆ. ರೋಹಿತ್ ಶರ್ಮಾ ಪಡೆಯ ಬಹುತೇಕ ಆಟಗಾರರು ಉತ್ತಮ ಲಯದಲ್ಲಿದ್ದು ಮತ್ತೊಮ್ಮೆ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಆಸಿಸ್ ವಿರುದ್ಧದ ಪಂದ್ಯದಲ್ಲಿ ವೈಫಲ್ಯ ಕಂಡಿದ್ದ ಅಗ್ರ ಕ್ರಮಾಂಕ ಈ ಪಂದ್ಯದಲ್ಲಿ ಮತ್ತೆ ಲಯಕ್ಕೆ ಮರಳು ವಿಶ್ವಾಸದಲ್ಲಿದ್ದಾರೆ.
ಇನ್ನು ಈ ಪಂದ್ಯ ದೆಹಲಿಯಲ್ಲಿ ನಡೆಯುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ. ಆದರೆ ದೆಹಲಿ ಪಿಚ್ ಈಗ ಈ ಹಿಂದಿನಂತಿಲ್ಲ ಎನ್ನುವುದು ಕೂಡ ಕಳೆದ ಪಂದ್ಯದಲ್ಲಿ ಸ್ಪಷ್ಟವಾಗಿದೆ. ಈ ಹಿಂದೆ ಇಲ್ಲಿ ಬ್ಯಾಟರ್ಗಳು ರನ್ಗಳಿಸಲು ಪರದಾಡುತ್ತಿದ್ದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾದಂತಿದೆ. ರನ್ ಮಳೆಯೇ ಹರಿಯುತ್ತಿದ್ದು ಇದು ಭಾರತ ತಂಡಕ್ಕೂ ಸುವಾಲಾಗಿರುವ ಸಾಧ್ಯತೆಯಿದೆ.

ಹಾಗಾದರೆ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದರೆ ಭಾರತ ಎಷ್ಟು ರನ್ಗಳಿಸಬೇಕಾಗಬಹುದು? ಆರಂಭದಲ್ಲಿ ಬೌಲಿಂಗ್ ನಡೆಸಿದರೆ ಎಷ್ಟು ರನ್ಗಳಿಗೆ ಕಟ್ಟಿಹಾಕಬೇಕಾಗಬಹುದು? ಇಲ್ಲಿದೆ ವಿವರ
ಅಕ್ಟೋಬರ್ 11 2022, ಅಂದರೆ ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇದೇ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆದರೆ ಆ ಪಂದ್ಯದಲ್ಲಿ ದಕ್ಷಣ ಆಫ್ರಿಕಾ ತಂಡ ಅಕ್ಷರಶಃ ರನ್ಗಳಿಸಲು ಪರದಾಡಿದ್ದು ಕೇವಲ 99 ರನ್ಗಳಿಗೆ ಆಲೌಟ್ ಆಗಿತ್ತು. ಆ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು. ಆದರೆ ಇದಾಗಿ ವರ್ಷ ಕಳೆಯುವ ಮುನ್ನ ಕಳೆದ ಶನಿವಾರ ದಕ್ಷಿಣ ಆಫ್ರಿಕಾ ರನ್ ಮಳೆಯನ್ನೇ ಹರಿಸಿದ್ದು ವಿಶ್ವಕಪ್ನಲ್ಲಿ ದಾಖಲೆ ಬರೆದಿತ್ತು.
ಕಳೆದ ಶನಿವಾರ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಇದೇ ಮೈದಾನದಲ್ಲಿ ಮುಖಾಮುಖಿಯಾಗಿದ್ದಾಗ ರನ್ ಮಳೆಯನ್ನೇ ಹರಿಸಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೂವರು ಬ್ಯಾಟರ್ಗಳು ಶತಕ ಸಿಡಿಸಿ ದಾಖಲೆ ಬರೆದಿದ್ದು ಈ ಮೂಲಕ ಬರೊಬ್ಬರಿ 428 ರನ್ಗಳನ್ನು ಕಲೆಹಾಕಿತ್ತು. ಮತ್ತೊಂದೆಡೆ ಇದನ್ನು ಬೆನ್ನಟ್ಟಿದ ಶ್ರೀಲಂಕಾ ಕೂಡ 326 ರನ್ಗಳಿಸುವಷ್ಟರ ಮಟ್ಟಿಗೆ ಹೋರಾಟ ನಡೆಸಿ ಶರಣಾಯಿತು. ಈ ಮೂಲಕ ಈ ಪಂದ್ಯದಲಿ ಒಟ್ಟು 754 ರನ್ಗಳು ಹರಿದು ಬಂದಿತ್ತು.
ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧದ ಈ ಪಂದ್ಯವನ್ನು ನೋಡಿದಾಗ ದೆಹಲಿ ಕ್ರೀಡಾಂಗಣದ ಪಿಚ್ ಸಂಪೂರ್ಣವಾಗಿ ಬದಲಾಗಿರುವುದು ಸ್ಪಷ್ಟವಾಗುತ್ತದೆ. ವಿಶ್ವಕಪ್ ಟೂರ್ನಿಗಾಗಿ ನಿರ್ಮಿಸಿರುವ ಹೊಸ ಪಿಚ್ಗಾಗಿ ಇಲ್ಲಿ ಕಪ್ಪು ಮಣ್ಣನ್ನು ಬಳಸಲಾಗಿದೆ. ಇದು ಈ ಹಿಂದಿನ ಪಿಚ್ಗಿಂತ ಸಂಪೂರ್ಣವಾಗಿ ವಿಭಿನ್ನವಾಗಿ ವರ್ತಿಸಲು ಕಾರಣವಾಗಿದೆ. ಹಾಗಾಗಿಯೇ ಬೌಲರ್ಗಳ ಸ್ವರ್ಗ ಎನಿಸಿಕೊಂಡಿದ್ದ ದೆಹಲಿ ಪಿಚ್ ಈಗ ಬ್ಯಾಟರ್ಗಳಿಗೆ ಸ್ವರ್ಗವಾಗಿ ಪರಿಣಮಿಸಿದೆ
ತಜ್ಞರ ವಿಶ್ಲೇಷಣೆಯ ಪ್ರಕಾರ ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಹೈಸ್ಕೋರಿಂಗ್ ಪಂದ್ಯವಾಗುವುದರಲ್ಲಿ ಅನುಮಾನವಿಲ್ಲ ಎನ್ನಲಾಗುತ್ತಿದೆ. ಅದರಲ್ಲೂ ಭಾರತ ಮೊದಲಿಗೆ ಬ್ಯಾಟಿಂಗ್ ನಡೆಸುವ ಅವಕಾಶ ದೊರೆತರೆ ಈ ಮೈದಾನದಲ್ಲಿ ಕನಿಷ್ಠ 400 ರನ್ಗಳ ಗಡಿ ದಾಟುವ ಗುರಿಯನ್ನು ಹೊಂದಬೇಕಾಗುತ್ತದೆ. ಇಲ್ಲವಾದಲ್ಲಿ ಭಾರತೀಯ ಬೌಲರ್ಗಳ ಮೇಲೆ ಒತ್ತಡ ಹೆಚ್ಚಾಗಲಿದೆ. ಪಿಚ್ ಬ್ಯಾಟರ್ಗಳಿಗೆ ಸಂಪೂರ್ಣವಾಗಿ ನೆರವು ನೀಡುವ ಕಾರಣ ಇದರ ಲಾಭವನ್ನು ಪಡೆದುಕೊಳ್ಳಬೇಕಿದೆ. ಇನ್ನು ಅಫ್ಘಾನಿಸ್ತಾನ ತಂಡವನ್ನು ನಿರ್ಲಕ್ಷ್ಯಿಸುವ ಹಾಗೆ ಖಂಡಿತಾ ಇಲ್ಲ. ಅತ್ಯಂತ ಅಪಾಯಕಾರಿ ಬ್ಯಾಟರ್ಗಳು ಅಫ್ಘನ್ ಪಡೆಯಲ್ಲಿದ್ದು ಎಂಥಾ ತಂಡಕ್ಕೂ ಆಘಾತ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಾಗಿ ಈ ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ ಭಾರತ ಕಣಕ್ಕಿಳಿಯಬೇಕಿದೆ.