
ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್ನಲ್ಲಿ ಹಿಂದೆ ಯಾರೂ ಮಾಡಿರದ ಸಾಧನೆಯನ್ನು ಮಾಡಿ ಇಂದಿಗೆ ಸರಿಯಾಗಿ ಹತ್ತು ವರ್ಷವಾಗಿದೆ. ಶ್ರೀಲಂಕಾ ಕ್ರಿಕೆಟ್ನ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್ನಲ್ಲಿ 800 ವಿಕೆಟ್ ಪಡೆದ ಸಾಧನೆಯನ್ನು ಅಂದು ಮಾಡಿದ್ದರು. ಈ ಮೂಲಕ ಕ್ರಿಕೆಟ್ ದಾಖಲೆ ಪುಸ್ತಕದಲ್ಲಿ ಈ ವಿಶೇಷ ಮೈಲಿಗಲ್ಲು ಮುಟ್ಟಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಗಾಲೆ ಕ್ರೀಡಾಂಗಣದಲ್ಲಿ ಭಾರತದ ವಿರುದ್ದದ ಪಂದ್ಯದಲ್ಲಿ ಮುತ್ತಯ್ಯ ಮುರಳೀಧರನ್ ಈ ಸಾದನೆಯನ್ನು ಮಾಡುವಲ್ಲಿ ಯಶಸ್ವಿಯಾದರು. ಅದು ಮುತ್ತಯ್ಯ ಮುರಳೀಧರನ್ ಅವರ ಅಂತಿಮ ಟೆಸ್ಟ್ ಪಂದ್ಯವೂ ಆಗಿತ್ತು. ತನ್ನ ವೃತ್ತಿ ಜೀವನದ ಅಂತಿಮ ಪಂದ್ಯದಲ್ಲಿ ಈ ವಿಶೇಷ ದಾಖಲೆಯನ್ನು ಮುರಳೀಧರನ್ ಬರೆದರು.
ಅದು ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ. ಈ ಟೆಸ್ಟ್ ಪಂದ್ಯಕ್ಕೂ ಮುನ್ನ ಮುತ್ತಯ್ಯ ಮುರಳೀಧರನ್ ಈ ದಾಖಲೆಗಾಗಿ 8 ವಿಕೆಟ್ಗಳಷ್ಟು ಹಿಂದಿದ್ದರು. ಮೊದಲ ಪಂದ್ಯದಲ್ಲೇ ವಿಶೇಷ ಸಾಧನೆಯನ್ನು ಮಾಡಿ ನಿವೃತ್ತಿ ಪಡೆಯಬೇಕು ಎಂದು ಸ್ಪಿನ್ ದಿಗ್ಗಜ ನಿರ್ಧರಿಸಿದ್ದರು. ಅದರಂತೆಯೇ ಅದನ್ನು ಸಾಧಿಸಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯನ್ನು ಪಡೆದುಕೊಂಡರು.
ಇತ್ತೀಚೆಗಷ್ಟೇ ಶ್ರೀಲಂಕಾ ಕ್ರಿಕೆಟ್ ತಂಡದ ಅಂದಿನ ನಾಯಕ ಕುಮಾರ್ ಸಂಗಕ್ಕರ ಈ ಬಗ್ಗೆ ಮಾತನಾಡಿ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದರು. ಮೊದಲ ಪಂದ್ಯದಲ್ಲಿ 8 ವಿಕಟ್ ಪಡೆಯಲು ಅಸಾಧ್ಯವಾಗಬಹುದು ಎಂದು ಮುರಳೀಧರನ್ ಅವರ ತಿರ್ಮಾನವನ್ನು ಬದಲಾಯಿಸಲು ಇಡೀ ತಂಡ ಪ್ರಯತ್ನಿಸಿತ್ತು. ಅದರೆ ಮುರಳೀಧರನ್ ತಮ್ಮ ನಿರ್ಧಾರಕ್ಕೆ ದೃಢವಾಗಿದ್ದರು ಎಂದು ಕುಮಾರ್ ಸಂಗಕ್ಕರ ಹೇಳಿದ್ದರು.
ತನಗೆ ಸವಾಲು ಎಂದರೆ ಇಷ್ಟ. ಅತ್ಯುತ್ತಮ ಆಟಗಾರನಾಗಿದ್ದರೆ ಗಾಲೆ ಕ್ರೀಡಾಂಗಣದಲ್ಲಿ ಯಾವುದೇ ತಂಡದ ವಿರುದ್ಧ ನಾನು 8 ವಿಕೆಟ್ ತೆಗೆಯಬಲ್ಲೆ ಎಂದು ಅಂದು ಕುಮಾರ ಸಂಗಕ್ಕರಗೆ ಪ್ರತಿಕ್ರಿಯಿಸಿದ್ದ ಮುರಳೀಧರ್ ಅಚ್ಚರಿ ಪಡುವಂತೆ ಭಾರತದ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್ ಪಡೆದು ದೊಡ್ಡ ಮೈಲಿಗಲ್ಲನ್ನು ಸ್ಥಾಪಿಸಿ ಬಳಿಕ ನಿವೃತ್ತಿ ಘೋಷಿಸಿದ್ದರು.