
ಕೋಲ್ಕತ್ತಾ, ಮೇ 16: ಮಂಗಳವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ 6 ವಿಕೆಟ್ ಗೆಲುವು ಸಾಧಿಸಿದ ನಂತರವೂ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ಪ್ರವೇಶಿಬಲ್ಲದು ಎಂದು ರಾಜಸ್ಥಾನ್ ನಾಯಕ ಅಜಿಂಕ್ಯ ರಹಾನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತಾ ಎದುರಿನ ಪಂದ್ಯದಲ್ಲಿ ರಾಜಸ್ಥಾನ್ ಆರಂಭಿಕರಾದ ಜಾಸ್ ಬಟ್ಲರ್ ಮತ್ತು ರಾಹುಲ್ ತ್ರಿಪಾಠಿ ತಕ್ಕ ಮಟ್ಟಿನ ರನ್ ಕೊಡುಗೆಯಿಂದ ರಾಜಸ್ಥಾನ್ 20 ಓವರ್ ಗಳಲ್ಲಿ ಎಲ್ಲಾ ವಿಕೆಟ್ 142 ರನ್ ಪೇರಿಸಿತ್ತು. ಆದರೆ ಕೋಲ್ಕತ್ತಾ ಆ ಸಣ್ಣ ಗುರಿಯನ್ನು 18 ಓವರ್ ಗಳಲ್ಲೇ ಮುಗಿಸಿ ವಿಜಯದ ನಗೆ ಬೀರಿತ್ತು.
ಸದ್ಯ ರಾಜಸ್ಥಾನ್ ರಾಯಲ್ಸ್ ಐಪಿಎಲ್ ಅಂಕಪಟ್ಟಿಯಲ್ಲಿ 12 ಅಂಕಗಳನ್ನು ಗಳಿಸಿದೆ. ಮೇ 19ರಂದು ರಾಜಸ್ಥಾನ್ ಮತ್ತು ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲೇನಾದರೂ ರಾಜಸ್ಥಾನ್ ಗೆದ್ದರೆ ಪ್ಲೇ ಆಫ್ ಪ್ರವೇಶ ಸಾಧ್ಯತೆಯೂ ಇದೆ ಎಂದು ರಹಾನೆ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ರಹಾನೆ, 'ನಮ್ಮ ಬಗ್ಗೆ ನಾವು ಈಗಲೂ ನಂಬಿಯಿಟ್ಟುಕೊಂಡಿದ್ದೇವೆ. ಕ್ರಿಕೆಟ್ ನಲ್ಲಿ ಏನೂ ಆಗಬಹುದು. ಇದೊಂಥರಾ ಫನ್ನೀ ಗೇಮ್. ನಮ್ಮ ತಪ್ಪುಗಳಿಂದ ನಾವು ಕಲಿಯುತ್ತಿದ್ದೇವೆ. ಮಂಗಳವಾರ ರಾತ್ರಿ ನಾವು ಗೆಲಲ್ಲುವ ವಿಶ್ವಾಸವನ್ನಿಟ್ಟುಕೊಂಡಿದ್ದೆವು. ಆದರೆ ಇದು ತಂಡದ ಹೋರಾಟ ಎನ್ನುವುದನ್ನು ನಾವು ಕಲಿತುಕೊಳ್ಳಬೇಕಿದೆ' ಎಂದು ರಹಾನೆ ಪಂದ್ಯದ ಬಳಿಕ ತಿಳಿಸಿದರು.