ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯವನ್ನು ಸೋತ ಪಾಕಿಸ್ತಾನ ತಂಡ ಫೈನಲ್ಗೆ ಪ್ರವೇಶಿಸಲು ವಿಫಲವಾಗಿದ್ದು ಟೂರ್ನಿಯಿಂದ ಹೊರಬಿದ್ದಿದೆ. ಏಷ್ಯಾಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿದಿದ್ದ ಪಾಕಿಸ್ತಾನ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಪಾಕ್ ತಂಡದ ಪರದರ್ಶನದ ಬಗ್ಗೆ ಅಲ್ಲಿನ ಮಾಜಿ ಕ್ರಿಕೆಟಿಗರು ಟೀಕೆಗಳನ್ನು ಮಾಡುತ್ತಿದ್ದಾರೆ.
ಪಾಕಿಸ್ತಾನ ತಂಡ ಎಲ್ಲಿ ಎಡವಿತು ಎನ್ನುವ ವಿಚಾರವಾಗಿ ವಿಮರಶೆಗಳು ಜೋರಾಗಿದ್ದು ತಂಡದ ನಾಯಕ ಆಬರ್ ಅಜಂ ವಿರುದ್ಧವೂ ಸಾಕಷ್ಟು ಟೀಕೆಗಳು ಕೇಳಿಬರತೊಡಗಿದೆ. ಅದರಲ್ಲೂ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಬಾಬರ್ ಅಜಂ ನಾಯಕತ್ವದ ಬಗ್ಗೆ ಹರಿಹಾಯ್ದಿದ್ದು ನೇರವಾಗಿ ತಮ್ಮ ಅಸಮಾಧಾನ ಹಂಚಿಕೊಂಡಿದ್ದಾರೆ.

ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಒಟ್ಟಾರೆ ಪ್ರದರ್ಶನದ ಬಳಿಕ ಮಾತನಾಡಿದ ಶೋಯೆಬ್ ಅಖ್ತರ್ ತಂಡದ ನಾಯಕ ಬಾಬರ್ ಅಜಂ ತಮ್ಮ ನಾಯಕತ್ವದಲ್ಲಿ ಮತ್ತಷ್ಟು ಚುರುಕಾಗಬೇಕು ಎನ್ನುವ ಮಾತನ್ನು ಹೇಳಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಅವರು ಪಾಕಿಸ್ತಾನ ಏಷ್ಯಾಕಪ್ನಿಂದ ಹೊರಬಿದ್ದಿರುವುದು 'ಮುಖಭಂಗ' ಎನ್ನುವ ಮಾತನ್ನು ಕೂಡ ಹೇಳಿದ್ದಾರೆ.
"ಏಷ್ಯಾಕಪ್ನ ಫೈನಲ್ಗೆ ಪ್ರವೇಶಿಸಬೇಕಾದರೆ ಪಾಕಿಸ್ತಾನ ಶ್ರೀಲಂಕಾ ವಿರುದ್ಧ ಗೆಲ್ಲುವುದು ಅಗತ್ಯವಾಗಿತ್ತು. ಆದರೆ ಈವರು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಟೂರ್ನಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡು ಈಗ ಹೊರಬಿದ್ದಿರುವ ಕಾರಣ ಅವರನ್ನು ಸಾಕಷ್ಟು ಟೀಕಿಸಬಹುದು. ದುರದೃಷ್ಟವಶಾತ್ ಏಷ್ಯಾಕಪ್ ಫೈನಲ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೆಣೆಸಾಟ ನೋಡಲು ಸಾಧ್ಯವಿಲ್ಲ. ಈವರೆಗೂ ಏಷ್ಯಾಕಪ್ ಫೈನಲ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿಲ್ಲ. ಇದು ಉತ್ತಮವಾದ ಅವಕಾಶವಾಗಿತ್ತು. ಆದರೆ ಶ್ರೀಲಂಕಾ ಅರ್ಹವಾಗಿಯೇ ಫೈನಲ್ಗೆ ಪ್ರವೇಶಿಸಿದೆ. ಅವರು ಇಲ್ಲಿ ಉತ್ತಮವಾದ ತಂಡ" ಎಂದಿದ್ದಾರೆ ಶೋಯೆನ್ ಅಖ್ತರ್.
"ಇದು ನಮಗೆ ಬಹಳ ಮುಖಭಂಗವಾಗುವಂತಾ ಸೋಲು. ಸತ್ಯ ಏನೆಂದರೆ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ಇದು ಉತ್ತಮವಾದ ಸುದ್ದಿಯಲ್ಲ. ಈ ವಿಚಾರವಾಗಿ ಸಾಕಷ್ಟು ಯೋಚಿಸುವ ಅಗತ್ಯವಿದೆ. ನಾಯಕತ್ವದಲ್ಲಿ ಸಾಕಷ್ಟು ಚುರುಕುತನವನ್ನು ಕಾಣಬೇಕಿದೆ. ನಾನು ಬಹಳ ಬೇಸರಗೊಂಡಿದ್ದೇನೆ. ಇದಕ್ಕಿಂತ ಹೆಚ್ಚಿನದ್ದೇನೂ ಹೇಳಲು ಬಾಕಿಯಿಲ್ಲ" ಎಂದಿದ್ದಾರೆ ಶೋಯೆಬ್ ಅಖ್ತರ್.
ಮಳೆಯಿಂದ ಅಡಚಣೆಗೊಳಗಾದ ಪಂದ್ಯವನ್ನು 42 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 7 ವಿಕೆಟ್ ಕಳೆದುಕೊಂಡು 252 ರನ್ಗಳನ್ನು ಕಲೆಹಾಕಿತು. ಹೀಗಾಗಿ ಶ್ರೀಲಂಕಾ ಮುಂದೆ ಸವಾಲಿನ ಮೊತ್ತವನ್ನು ನಿಗದಿಪಡಿಸುವಲ್ಲಿ ಪಾಕಿಸ್ತಾನ ಪಡೆ ಯಶಸ್ವಿಯಾಗಿತ್ತು. ಆರಂಭದಲ್ಲಿ ಬ್ಯಾಟಿಂಗ್ನಲ್ಲಿ ಭಾತರೀ ಹಿನ್ನಡೆ ಅನುಭವಿಸಿದ್ದರೂ ಮೊಹಮ್ಮದ್ ರಿಜ್ವಾನ್ ಹಾಗೂ ಇಫ್ತಿಕಾರ್ ಅಹ್ಮದ್ ಅವರ ಅಮೋಘ ಆಟ ಪಾಕ್ ಬ್ಯಾಟಿಂಗ್ಗೆ ಭಾರೀ ದೊಡ್ಡ ಚೇತರಿಕೆ ನೀಡುವಲ್ಲಿ ಯಶಸ್ವಿಯಾಗಿತ್ತು.
ಇದನ್ನು ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಕುಸಾಲ್ ಮೆಂಡಿಸ್, ಸುದೀರ ಸಮರವಿಕ್ರಮ ಚರಿತ್ ಅಸಲಂಕಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಭರ್ಜರಿಯಾಗಿ ಗುರಿ ಬೆನ್ನಟ್ಟಲು ಕಾರಣವಾದರು. ಕುಸಾಲ್ ಮೆಂಡಿಸ್ 91 ರನ್ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರೆ ಸಮರವಿಕ್ರಮ 48 ರನ್ಗಳನ್ನು ಕಲೆಹಾಕಿದರು. ಈ ಜೋಡಿ ನೀಡಿದ 100 ರನ್ಗಳ ಜೊತೆಯಾಟ ಲಂಕಾ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಇನ್ನು ಚರಿತ ಅಸಲಂಕಾ ಕೊನೆಯವರೆಗೂ ನಿಂತು ತಂಡವನ್ನು ಗೆಲುವಿನ ದಡ ಸೇರಿಸಿದ್ದಲ್ಲದೆ ಶ್ರೀಲಂಕಾ ಫೈನಲ್ಗೆ ಪ್ರವೇಶಿಸಲು ಕಾರಣವಾದರು.