
ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಕ್ರಿಕೆಟ್ನಿಂದ ನಿವೃತ್ತಿಯ ನಂತರವು ತಮ್ಮ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೆ ಶೋಯೆಬ್ ಅಖ್ತರ್ ಸುದ್ದಿಯಲ್ಲಿದ್ದಾರೆ. ಈ ಬಾರಿ ಅಖ್ತರ್ ತಂಡದಲ್ಲಿದ್ದ ಧರ್ಮಾಧಾರಿತ ತಾರತಮ್ಯದ ಬಗ್ಗೆ ಹೇಳಿಕೊಂಡಿದ್ದಾರೆ.
ಪಾಕಿಸ್ತಾನ ತಂಡದಲ್ಲಿ ಆಟಗಾರರು ಸ್ಪಿನ್ನರ್ ದಾನೀಶ್ ಕನೇರಿಯಾ ಅವರನ್ನು ಅತ್ಯಂತ ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು. ಇದಕ್ಕೆ ಕಾರಣ ದಾನೀಶ್ ಕನೇರಿಯಾ ಅವರು ಧಾರ್ಮಿಕವಾಗಿ ಹಿಂದೂವಾಗಿದ್ದರು ಎಂಬ ಮಾತನ್ನು ಹೇಳಿದ್ದಾರೆ. ತಂಡದ ಆಟಗಾರರು ದಾನೀಶ್ ಕನೇರಿಯಾ ಅವರು ಹಿಂದೂ ಎಂಬ ಕಾರಣಕ್ಕೆ ಅವರ ಜೊತೆ ಸೂಕ್ತವಾಗಿ ವ್ಯವಹರಿಸುತ್ತಿರಲಿಲ್ಲ. ಮಾತ್ರವಲ್ಲದೆ ಊಟದ ಜೊತೆಗೆ ಅವರೊಂದಿಗೆ ಟೇಬಲ್ ಹಂಚಿಕೊಳ್ಳುತ್ತಿರಲಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಶೋಯೆಬ್ ಅಖ್ತರ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಶೋಯೆಬ್ ಅಖ್ತರ್ ಅವರ ಈ ಹೇಳಿಕೆಗೆ ಸ್ವತಃ ದಾನೀಶ್ ಕನೇರಿಯಾ ಕೂಡ ಪ್ರತಿಕ್ರಿಯಿಸಿದ್ದಾರೆ. ಶೋಯೇಬ್ ಅಖ್ತರ್ ಹೇಳಿದ್ದು ನಿಜ ಎಂದು ಹೇಳಿರುವ ಕನೇರಿಯಾ ತನಗೆ ತಂಡದಲ್ಲಿ ಯಾರೆಲ್ಲಾ ಈ ರೀತಿಯಾಗಿ ತಾರತಮ್ಯ ಮಾಡಿತ್ತಿದ್ದು ಎನ್ನುವುದನ್ನು ಹೆಸರಿನ ಸಹಿತ ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುವುದಾಗಿ ಹೇಳಿದ್ದಾರೆ.
ಟಿವಿ ಸಂದರ್ಶನದಲ್ಲಿ ಮಾತನಾಡಿರುವ ಶೋಯೆಬ್ 'ಇತರ ಆಟಗಾರರೊಂದಿಗೆ ದಾನಿಶ್ ಕನೆರಿಯಾ ಊಟ ಮಾಡಿದಲ್ಲಿ, ನಮ್ಮ ಟೇಬಲ್ ನಲ್ಲಿ ಊಟ ತೆಗೆದುಕೊಂಡಲ್ಲಿ, ಆಗಿನ ತಂಡದ ನಾಯಕನೇ ದಾನಿಶ್ ವಿರುದ್ಧ ಕಣ್ಣು ಕೆಂಪಗೆ ಮಾಡುತ್ತಿದ್ದ' ಎಂದು ಪಾಕ್ ತಂಡದಲ್ಲಿ ಹಿಂದು ಆಟಗಾರನನ್ನು ನಡೆಸಿಕೊಳ್ಳುತ್ತಿದ್ದ ರೀತಿಯ ಬಗ್ಗೆ ಹೇಳಿದ್ದಾರೆ. 'ದಾನಿಶ್ ಕನೆರಿಯಾ ಪಾಕಿಸ್ತಾನಕ್ಕಾಗಿ ಹಲವಾರು ಮ್ಯಾಚ್ಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. 2005 ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆಲ್ಲಲು ಆತನೇ ಕಾರಣ, ಪಾಕ್ ಕ್ರಿಕೆಟ್ಗೆ ಆತ ನೀಡಿದ ಕೊಡುಗೆಯನ್ನು ಯಾರೂ ಗುರುತಿಸಲಿಲ್ಲ' ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
ಧಾರ್ಮಿಕವಾಗಿ, ಪ್ರಾದೇಶಿಕವಾಗಿ ತಾರತಮ್ಯ ಆಗುತ್ತಿರುವುದು ನನ್ನ ಗಮನಕ್ಕೆ ಬಂದಾಗ ನನಗೆ ಸಾಕಷ್ಟು ಸಿಟ್ಟು ಬರುತ್ತಿತ್ತು. ನಾನು ಅದನ್ನು ಖಂಡಿಸಿದ್ದೆ ಎಂದು ಶೋಯೆಬ್ ಅಖ್ತರ್ ಹೇಳಿಕೊಂಡಿದ್ದಾರೆ. ದಾನೀಶ್ ಕನೇರಿಯಾ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿರುವ ಎರಡನೇ ಆಟಗಾರನಾಗಿದ್ದಾರೆ.