ಇದೇ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಭಾರತದಲ್ಲಿಯೇ ನಡೆಯಲಿದೆ. ಐಸಿಸಿಯು ಜೂನ್ 27ರಂದು ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಇದೇ ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವಿನ ಏಕದಿನ ವಿಶ್ವಕಪ್ ವೇಳಾಪಟ್ಟಿಯಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯದ ಕುರಿತು ಪಾಕಿಸ್ತಾನ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಭದ್ರತಾ ಕಾರಣದಿಂದಾಗಿ 2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ ಬಿಸಿಸಿಐ ತನ್ನ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವ ನಿರ್ಧಾರದಿಂದ ಈ ಜಗಳ ಪ್ರಾರಂಭವಾಗಿದೆ.
ಪಾಕಿಸ್ತಾನವು 2023ರ ಏಷ್ಯಾ ಕಪ್ ಪಂದ್ಯಾವಳಿಯ ಆತಿಥೇಯ ರಾಷ್ಟ್ರವಾಗಿದ್ದರೂ, ಹೈಬ್ರಿಡ್ ಮಾದರಿಯ ಪಂದ್ಯಾವಳಿ ಆಯೋಜಿಸಲು ನಿರ್ಧರಿಸಿರುವುದರಿಂದ ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ಆಯೋಜಿಸುತ್ತದೆ. ಫೈನಲ್ ಸೇರಿದಂತೆ ಉಳಿದ 9 ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಲಿದೆ.
2023ರ ಏಷ್ಯಾ ಕಪ್ಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂಬ ಹೇಳಿಕೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ ಶಾ ನೀಡಿದ ನಂತರ, ಪಿಸಿಬಿ ಅಧಿಕಾರಿಗಳು ಕೋಪಗೊಂಡಿದ್ದಾರೆ. ರಮಿಜ್ ರಾಜಾ ಅವರಿಂದ ಹಿಡಿದು ನಜಮ್ ಸೇಥಿಯವರೆಗೆ ಪಿಸಿಬಿ ಅಧ್ಯಕ್ಷರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ)ನ ಇತರ ಸದಸ್ಯರನ್ನು ತಮ್ಮ ಪರವಾಗಿ ವಿಫಲ ಪ್ರಯತ್ನ ನಡೆಸಿದರು.
ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲ್ಲ ಎಂಬುದಕ್ಕೆ ಪ್ರತೀಕಾರವಾಗಿ, ಏಷ್ಯಾ ಕಪ್ ಪಂದ್ಯಾವಳಿಯನ್ನು ಸ್ಥಳಾಂತರಿಸಿದರೆ, 2023 ಏಕದಿನ ವಿಶ್ವಕಪ್ನಲ್ಲಿ ತಾವೂ ಸಹ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಪಿಸಿಬಿ ಅಧ್ಯಕ್ಷರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಎಚ್ಚರಿಕೆ ನೀಡಿತ್ತು.
ಸದ್ಯದ ವರದಿಯ ಪ್ರಕಾರ, ಪಾಕಿಸ್ತಾನ ಸರ್ಕಾರ ಕೂಡ ಪಾಕಿಸ್ತಾನ ತಂಡದ ವಿಶ್ವಕಪ್ ಭಾಗವಹಿಸುವಿಕೆಯನ್ನು ಪರಿಶೀಲನೆ ಮತ್ತು ಮೌಲ್ಯಮಾಪನ ಮಾಡುತ್ತಿದೆ ಎಂದು ತಿಳಿಸಿದೆ. ಇದಕ್ಕೆ ಜಾವೇದ್ ಮಿಯಾಂದಾದ್ ಸೇರಿದಂತೆ ಪಾಕಿಸ್ತಾನದ ಕ್ರಿಕೆಟ್ ಸಮುದಾಯವು ಕೋಪಗೊಂಡಿದೆ.
ಐಸಿಸಿ ಮತ್ತು ಬಿಸಿಸಿಐಗೆ ಬಲವಾದ ಸಂದೇಶವನ್ನು ಕಳುಹಿಸಲು ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಪಿಸಿಬಿ ಬಹಿಷ್ಕರಿಸಬೇಕೆಂದು ಪಾಕ್ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಾವೇದ್ ಮಿಯಾಂದಾದ್, "ಭಾರತೀಯ ಕ್ರಿಕೆಟ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು ಮತ್ತು "ಭಾರತವು ನರಕಕ್ಕೆ ಹೋಗಬಹುದು' ಎಂದು ಹೇಳಿದ್ದಾರೆ. ಪಾಕಿಸ್ತಾನ ಪ್ರವಾಸ ಮಾಡಲು ಇದೀಗ ಭಾರತದ ಸರದಿ ಎಂದು ಹೇಳಿದ್ದು, ಆದರೆ ಅವರು ಎಂದಿಗೂ ಅದೇ ರೀತಿ ಪ್ರತಿಕ್ರಿಯಿಸುವುದಿಲ್ಲ," ಎಂದು ಹೇಳಿದ್ದಾರೆ.
"2012ರಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ ಬಂದಿದ್ದು, 2016ರಲ್ಲಿಯೂ ಪ್ರವಾಸ ಮಾಡಿತ್ತು. ಈಗ ಪಾಕಿಸ್ತಾನಕ್ಕೆ ಬರುವುದು ಭಾರತದ ಸರದಿ. ನಾನು ನಿರ್ಧಾರ ತೆಗೆದುಕೊಳ್ಳುವನಾಗಿದ್ದರೆ, ಯಾವುದೇ ಪಂದ್ಯವನ್ನು ಆಡಲು ಭಾರತಕ್ಕೆ ಹೋಗುವುದಿಲ್ಲ, ಅದು 2023ರ ಏಕದಿನ ವಿಶ್ವಕಪ್ ಸೇರಿದಂತೆ," ಎಂದು ಜಾವೇದ್ ಮಿಯಾಂದಾದ್ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.
"ನಾವು ಭಾರತದಲ್ಲಿ ಆಡಲು ಯಾವಾಗಲೂ ಸಿದ್ಧರಿದ್ದೇವೆ. ಆದರೆ ಅವರು ಎಂದಿಗೂ ಅದೇ ರೀತಿ ಪ್ರತಿಕ್ರಿಯಿಸುವುದಿಲ್ಲ. ಪಾಕಿಸ್ತಾನ ಕ್ರಿಕೆಟ್ ದೊಡ್ಡದಾಗಿದೆ, ನಾವು ಗುಣಮಟ್ಟದ ಆಟಗಾರರನ್ನು ಉತ್ಪಾದಿಸುತ್ತಿದ್ದೇವೆ. ಭಾರತ ನರಕಕ್ಕೆ ಹೋಗಬಹುದು. ನಾವು ಭಾರತಕ್ಕೆ ಹೋಗದಿದ್ದರೂ, ನಮಗೆ ಯಾವುದೇ ವ್ಯತ್ಯಾಸ ಉಂಟು ಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ,"ಎಂದು ಜಾವೇದ್ ಮಿಯಾಂದಾದ್ ಬರೆದುಕೊಂಡಿದ್ದಾರೆ.
ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ಬರಲು ಇಷ್ಟವಿಲ್ಲದ ಬಿಸಿಸಿಐ ವಿರುದ್ಧ ಬಲವಾದ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸದಸ್ಯರನ್ನು ಮಾಜಿ ನಾಯಕ ಜಾವೇದ್ ಮಿಯಾಂದಾದ್ ಒತ್ತಾಯಿಸಿದ್ದು, "ನಾನು ಯಾವಾಗಲೂ ಹೇಳುತ್ತೇನೆ, ಒಬ್ಬನೇ ತನ್ನ ನೆರೆಹೊರೆಯವರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಪರಸ್ಪರ ಸಹಕಾರದಿಂದ ಬದುಕುವುದು ಉತ್ತಮ," ಎಂದಿದ್ದಾರೆ.