ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧಗಳು ಈಗ ಸರಿಯಿಲ್ಲ. ವಿವಾದಗಳು ದಿನಕಳೆದಂತೆ ಹೆಚ್ಚಾಗುತ್ತಲೇ ಇವೆ. ಎರಡೂ ದೇಶಗಳ ಪರಿಸ್ಥಿತಿಯ ನೇರ ಪರಿಣಾಮ ಕ್ರೀಡೆಯ ಮೇಲೆ ಬಿದ್ದಿದೆ. ದಶಕಗಳಿಂದ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ. ಉಭಯ ತಂಡಗಳು ಐಸಿಸಿ ಹಾಗೂ ಏಷ್ಯನ್ ಕೌನ್ಸಿಲ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತಿವೆ. ಪಾಕ್ ಮೆಗಾ ಟೂರ್ನಿಗಳ ಮುಂಚೆ ಬಣ್ಣ ಹಚ್ಚಿಕೊಂಡು ನಾಟಕ ಮಾಡಲು ಆರಂಭಿಸುತ್ತದೆ.
ಕಳೆದ ಒಂದು ವರ್ಷದಲ್ಲಿ ಉಭಯ ತಂಡಗಳು ಮೆಗಾ ಟೂರ್ನಿಗಳಲ್ಲಿ ಕಾದಾಟ ನಡೆಸಿವೆ. ಈ ಎರಡೂ ತಂಡಗಳು ಮೈದಾನಕ್ಕೆ ಇಳಿದಾಗಲೆಲ್ಲಾ ಹೈವೋಲ್ಟೇಜ್ ಫೈಟ್ ಮೈದಾನದಲ್ಲಿ ಕಂಡು ಬರುತ್ತಿತ್ತು. ಆದರೆ ಮೈದಾನದ ಹೊರಗಿನ ಜಿದ್ದು ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದೆ. ಪಾಕಿಸ್ತಾನದಲ್ಲಿ ಆಯೋಜಿಸಲಾಗಿದ್ದ ಚಾಂಪಿಯನ್ಸ್ ಟ್ರೋಫಿ ಭಾರತ ಪ್ರಯಾಣ ಬೆಳೆಸದಿರಲು ನಿರ್ಧರಿಸಿತು. ಇದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನಿರಾಸೆ ಆಯಿತು. ಪಾಕ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುಂದೇ ದೂರು ನೀಡಿತು.

ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಸಹ ಪಾಕ್ ಪ್ರವಾಸ ಬೆಳೆಸದಿರುವ ನಿರ್ಧಾರ ಸರ್ಕಾರದ್ದಾಗಿದೆ ಎಂದು ಸ್ಪಷ್ಟ ಪಡಿಸಿತ್ತು. ಹೀಗಾಗಿ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಡಲು ಒಪ್ಪಿರುವುದಾಗಿಯೂ ಸೂಚಿಸಿತ್ತು. ಆಗ ಐಸಿಸಿ, ಬಿಸಿಸಿಐ ಹಾಗೂ ಪಿಸಿಬಿ ಒಂದು ಸೂತ್ರಕ್ಕೆ ಸಹಿ ಹಾಕುತ್ತವೆ. ಎರಡೂ ದೇಶಗಳು ಆತಿಥ್ಯ ನೀಡಲಿರುವ ಐಸಿಸಿ ಟೂರ್ನಿಗಳನ್ನು ತಟಸ್ಥ ಸ್ಥಳದಲ್ಲಿ ಆಡಿಸಲು ಅನುಮತಿ ನೀಡಲಾಯಿತು. ಅಂತೆಯೇ ಭಾರತ, ಚಾಂಪಿಯನ್ಸ್ ಟ್ರೋಫಿಯ ಎಲ್ಲ ಪಂದ್ಯಗಳನ್ನು ದುಬೈನಲ್ಲಿಯೇ ಆಡಿತು. ಇಲ್ಲಿಂದ ಪಿಸಿಬಿ, ಬಿಸಿಸಿಐ ಮೇಲೆ ಕತ್ತಿ ಮಸಿಯುತ್ತಲೇ ಸಾಗಿತು.
ಕಳೆದ ಬಾರಿಯ ಏಪ್ರಿಲ್ನಲ್ಲಿ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳು ನಡೆದಿದ್ದವು. ಆಗ ಪಾಕ್ ಭಾರತೀಯ ಗಡಿಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿತು. ಆಗ ಐಪಿಎಲ್ನಲ್ಲಿ ಮುಂದೂಡಲಾಗಿತ್ತು.
ಭಾರತ ಈ ಬಾರಿ ಏಷ್ಯಾ ಕಪ್ ಟಿ20 ಟೂರ್ನಿಯನ್ನು ಆಯೋಜಿಸಿತ್ತು. ಪಾಕ್ ಭಾರತಕ್ಕೆ ಪ್ರವಾಸ ಬೆಳೆಸುವುದಿರುವುದರಿಂದ ಈ ಟೂರ್ನಿಯನ್ನು ದುಬೈನಲ್ಲಿ ಆಡಿಸಲಾಯಿತು. ಈ ವೇಳೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೂರು ಬಾರಿ ಮುಖಾಮುಖಿಯಾದವು. ಈ ಟೂರ್ನಿಯ ವೇಳೆಯೂ ಪಾಕ್ ರಂಪಾಟ ಬಟಾಬಯಲು ಆಗಿತ್ತು. ಟೀಮ್ ಇಂಡಿಯಾ ವಿರುದ್ಧದ ಪಂದ್ಯಗಳನ್ನು ನೋಡಿದ ಬಳಿಕ ಪಾಕ್ ಸೋಲನ್ನು ತಪ್ಪಿಸಿಕೊಳ್ಳಲು ದಿನಕ್ಕೊಂದು ಪ್ರಸಂಗವನ್ನು ಹೆಣೆಯುತ್ತಾ ಸಾಗಿತು. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಕ್ರೀಡಾ ಮನೋಭಾವ ಪ್ರದರ್ಶಿಸಿಲ್ಲ ಎಂದು ಪಾಕ್ ಆರೋಪ ಮಾಡಿತ್ತು. ಪಂದ್ಯದ ಟಾಸ್ ಹಾಗೂ ಪಂದ್ಯ ಮುಗಿದ ಬಳಿಕ ಹ್ಯಾಂಡ್ ಶೇಕ್ ಮಾಡದೇ ಇರುವುದೇ ದೊಡ್ಡ ವಿವಾದವನ್ನು ಸೃಷ್ಟಿಸಿತು. ಭಾರತದ ಆಟಗಾರರು ನೀಡಿದ್ದ ಪ್ರದರ್ಶನಕ್ಕಿಂತಲೂ ಹ್ಯಾಂಡ್ ಶೇಕ್ ಮಾಡದೇ ಇರುವುದೇ ದೊಡ್ಡ ಸುದ್ದಿಯಾಯಿತು.
ಭಾರತ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಬಳಿಕ ಪಿಸಿಬಿ ಅಧ್ಯಕ್ಷರಿರುವ ವೇದಿಕೆಯನ್ನು ಟೀಮ್ ಇಂಡಿಯಾ ಆಟಗಾರರು ಬಹಿಷ್ಕರಿಸಿದರು. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿಯನ್ನು ತೆಗೆದುಕೊಂಡು ಪಾಕ್ ಫ್ಲೈಟ್ ಏರಿದರು. ಆಗಲೂ ಬಿಸಿಸಿಐ ಟ್ರೋಫಿ ನೀಡುವಂತೆ ಐಸಿಸಿ ಮೆಟ್ಟಲೇರಿತು. ಆದರೆ ಈವರೆಗೂ ಟ್ರೋಫಿ ಟೀಮ್ ಇಂಡಿಯಾ ಸೇರಲಿಲ್ಲ.
ಈ ಎಲ್ಲಾ ವಿವಾದಗಳ ಬಳಿಕ ಭಾರತ ಹಾಗೂ ಪಾಕ್ ತಂಡಗಳು ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಮುಖಾಮುಖಿಯಾದವು. ಈ ವೇಳೆಯೂ ಭಾರತ ಮೇಲುಗೈ ಸಾಧಿಸಿತು. ಇನ್ನು ಭಾನುವಾರ (ಫೆ.1) ರಂದು ನಡೆದ ಅಂಡರ್ 19 ವಿಶ್ವಕಪ್ನಲ್ಲಿ ಭಾರತ ಜಯ ಸಾಧಿಸಿದೆ.
ಪಾಕಿಸ್ತಾನ ತಂಡ ಮುಂಬರುವ ಟಿ20 ವಿಶ್ವಕಪ್ನಲ್ಲಿ ಆಡುತ್ತದೋ ಇಲ್ಲವೋ ಎಂಬುದಕ್ಕೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಉತ್ತರ ಲಭಿಸಲಿದೆ.