ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಇದುವರೆಗೆ ಭಾರತ ತಂಡವನ್ನು ಸೋಲಿಸಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಇತಿಹಾಸ ಬದಲಾಯಿಸಲು ಇದು ಸೂಕ್ತ ಸಮಯ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಹೇಳಿದ್ದಾರೆ.
ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಭಾರತ ವಿರುದ್ಧ ಗೆಲ್ಲುವ ಎಲ್ಲಾ ಸಾಮರ್ಥ್ಯಗಳನ್ನು ಹೊಂದಿದೆ. ಏಕೆಂದರೆ, ಈಗ ಪಾಕಿಸ್ತಾನ ಒತ್ತಡವನ್ನು ನಿಭಾಯಿಸುವ ಕಲೆಯನ್ನು ಕಲಿತಿದೆ ಎಂದು 51 ವರ್ಷದ ವಕಾರ್ ಯೂನಿಸ್ ತಿಳಿಸಿದರು.
ಗಮನಾರ್ಹ ಸಂಗತಿಯಲ್ಲಿ, ಕಳೆದ ಕೆಲವು ವರ್ಷಗಳಲ್ಲಿ ಪಾಕಿಸ್ತಾನ ತಂಡವು ಭಾರತವನ್ನು ಹಲವು ಬಾರಿ ಸೋಲಿಸಿದೆ. 2021ರ ಟಿ20 ವಿಶ್ವಕಪ್ನಲ್ಲಿ 10 ವಿಕೆಟ್ಗಳಿಂದ ಗೆದ್ದರೆ, ಕಳೆದ ವರ್ಷ ಏಷ್ಯಾ ಕಪ್ನ ಸೂಪರ್ 4ರಲ್ಲಿ ಮತ್ತೊಮ್ಮೆ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.

ಇದಕ್ಕೆ ವ್ಯತಿರಿಕ್ತವಾಗಿ ಭಾರತ ತಂಡವು ಕಳೆದ ವರ್ಷದ ಏಷ್ಯಾ ಕಪ್ನ ಲೀಗ್ ಹಂತದಲ್ಲಿ ಮತ್ತು ನಂತರ 2022ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಹೀಗಾಗಿ, ಈ ಬಾರಿ 2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಎರಡೂ ತಂಡಗಳ ಮೇಲೆ ಒತ್ತಡವಿದೆ ಎಂದು ವಕಾರ್ ಯೂನಿಸ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಪಾಕಿಸ್ತಾನ ತಂಡಕ್ಕೆ ಅನುಕೂಲವಾಗಬಹುದು ಎಂದು ಹೇಳಿದರು.
"ಒಂದು ತಂಡದ ವಿರುದ್ಧ ನೀವು ಕಡಿಮೆ ಆಡಿರುತ್ತೀರಿ, ಅದು ದೊಡ್ಡ ತಂಡದ ವಿರುದ್ಧ. ಹೀಗಾಗಿ ನೀವು ಅಂತಹ ತಂಡದ ವಿರುದ್ಧ ಆಡಿದಾಗಲೆಲ್ಲಾ, ವಿಶೇಷವಾಗಿ ಅದು ಪಾಕಿಸ್ತಾನ ಮತ್ತು ಭಾರತ ತಂಡಗಳಾಗಿದ್ದರೆ, ಒತ್ತಡವು ಅಪಾರ ಮತ್ತು ಮೂರು ಪಟ್ಟು ಹೆಚ್ಚಾಗುತ್ತದೆ," ಎಂದು ವಕಾರ್ ಯೂನಿಸ್ ತಿಳಿಸಿದರು.

"ಆದರೆ, ವಿಶ್ವಕಪ್ನಲ್ಲಿ ನಾವು ಭಾರತ ತಂಡದ ವಿರುದ್ಧ ಉಸಿರುಗಟ್ಟಿಸುತ್ತಿದ್ದೆವು. ಅದೇನೇ ಇದ್ದರೂ ನಾನು ಹೇಳಿದಂತೆ, ಈಗಿನ ಪಾಕಿಸ್ತಾನ ಆಟಗಾರರು, ಸದ್ಯ ಖಂಡಿತವಾಗಿಯೂ ಉತ್ತಮ ಒತ್ತಡವನ್ನು ನಿಭಾಯಿಸುತ್ತಿದ್ದಾರೆ," ಎಂದು ವಕಾರ್ ಯೂನಿಸ್ ಕ್ರಿಕೆಟ್ ಪಾಕಿಸ್ತಾನದೊಂದಿಗೆ ಮಾತನಾಡುತ್ತಾ ಹೇಳಿದರು.
"ನಮ್ಮಲ್ಲಿ ಪಂದ್ಯ ವಿಜೇತ ಆಟಗಾರರಿದ್ದಾರೆ. ಬಾಬರ್ ಅಜಂ, ಶಾಹೀನ್ ಅಫ್ರಿದಿ ಸೇರಿದಂತೆ ಏಕಾಂಗಿಯಾಗಿ ನಿಮ್ಮ ಪಂದ್ಯಗಳನ್ನು ಗೆಲ್ಲಿಸುವ ವ್ಯಕ್ತಿಗಳು ನಮ್ಮಲ್ಲಿದ್ದಾರೆ. ಫಖರ್ ಜಮಾನ್ ಅದ್ಭುತವಾದದ್ದನ್ನು ಮಾಡಬಹುದು, ಇಮಾಮ್-ಉಲ್-ಹಕ್ ಉತ್ತಮ ಇನ್ನಿಂಗ್ಸ್ ಆಡುವುದನ್ನು ನಾವು ನೋಡಿದ್ದೇವೆ. ಪಾಕಿಸ್ತಾನ ತಂಡ ಇತ್ತೀಚಿನ ದಿನಗಳಲ್ಲಿ ಒತ್ತಡವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದೆ," ಎಂದರು.
ಇದೇ ವೇಳೆ 2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಅಕ್ಟೋಬರ್ 15ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ, ಹಬ್ಬದ ಕಾರಣದಿಂದ ಭದ್ರತಾ ಪಡೆಗಳು ದಿನಾಂಕವನ್ನು ಬದಲಾಯಿಸಲು ಬಿಸಿಸಿಐ ಮತ್ತು ಐಸಿಸಿಗೆ ಕೇಳಿದ್ದವು. ಇತ್ತೀಚಿನ ವರದಿಗಳ ಪ್ರಕಾರ, ಆ ಪಂದ್ಯವನ್ನು ಅಕ್ಟೋಬರ್ 14ಕ್ಕೆ ಬದಲಾಯಿಸುವ ಸಾಧ್ಯತೆ ಇದೆ.
ಅದಕ್ಕೂ ಮುನ್ನ ಉಭಯ ತಂಡಗಳು ಮುಂಬರುವ 2023ರ ಏಷ್ಯಾ ಕಪ್ನಲ್ಲಿ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಮುಖಾಮುಖಿಯಾಗಲಿವೆ. ಕುತೂಹಲಕಾರಿ ಅಂಶದಲ್ಲಿ ಎರಡೂ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರೆ, ಟೂರ್ನಿಯ ಸೂಪರ್ 4ರ ಸುತ್ತಿನಲ್ಲಿ ಮತ್ತೊಮ್ಮೆ ಎದುರುಬದುರಾಗಲಿವೆ.