ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ನಡೆಯಲಿದೆ. ಈ ಟೂರ್ನಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದ ಮುಂದಾಳತ್ವವನ್ನು ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ವಹಿಸಿಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಶುಭಮನ್ ಗಿಲ್ ವರ್ಷಗಳ ಬಳಿಕ ಚುಟುಕು ಫಾರ್ಮೆಟ್ಗೆ ಕಂ ಬ್ಯಾಕ್ ಮಾಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಹೀಗಾಗಿ ರೋಚಕತೆ ಹೆಚ್ಚಿದೆ. ಉಭಯ ದೇಶಗಳ ನಡುವಣ ಹೈ ವೋಲ್ಟೇಜ್ ಪಂದ್ಯ ಸೆಪ್ಟಂಬರ್ 14 ರಂದು ನಡೆಯಲಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವನ್ನು ಇಡೀ ವಿಶ್ವವೇ ಎದುರು ನೋಡುತ್ತಿದೆ. ಈ ಎರಡೂ ತಂಡಗಳು ಮೈದಾನಕ್ಕೆ ಇಳಿದಾಗಲೆಲ್ಲಾ ಹೈವೋಲ್ಟೇಜ್ ಕದನವಾಗುತ್ತದೆ. ಈ ಬಿಗ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಮಾಜಿ ಕ್ರಿಕೆಟಿಗ, ಟೀಮ್ ಇಂಡಿಯಾದ ಸೂರ್ಯ ಕುಮಾರ್ ಯಾದವ್ ಅವರನ್ನು ಕೆಣಕಿದ್ದಾರೆ. ಸೂರ್ಯ ಬಗ್ಗೆ ಮಾಜಿ ಆಟಗಾರ ಹೇಳಿದ್ದೇನು ಎಂಬುದರ ಬಗ್ಗೆ ವರದಿ ಇಲ್ಲಿದೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಾಜಿದ್ ಖಾನ್ ಇತ್ತೀಚಿಗೆ ನೀಡಿದ ಸಂದರ್ಶನ ವೊಂದರಲ್ಲಿ ಟೀಮ್ ಇಂಡಿಯಾ ವಿರುದ್ಧ ಮಾತಿನ ಯುದ್ಧ ನಡೆಸಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅನುಪಸ್ಥಿತಿ ನಿಶ್ಚಿತವಾಗಿ ತಂಡಕ್ಕೆ ಕಾಡಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಆತಿಥೇಯ ತಂಡ ದುರ್ಬಲವಾಗಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಮಾಜಿ ಕ್ರಿಕೆಟಿಗ ಟೀಮ್ ಇಂಡಿಯಾದ ನ್ಯೂನತೆಗಳನ್ನು ಎತ್ತಿ ತೋರಿಸಿದ್ದಾರೆ.
ವಿಶ್ವದ ಅಪಾಯಕಾರಿ ಟಿ20 ಬ್ಯಾಟರ್ ಎಂದೇ ಖ್ಯಾತಿ ಪಡೆದಿರುವ ಸೂರ್ಯಕುಮಾರ್ ಯಾದವ್ ಅವರನ್ನು ಜಾಜಿದ್ ಖಾನ್ ಸಾಧಾರಣ ಬ್ಯಾಟರ್ ಎಂದು ತಿಳಿಸಿದ್ದಾರೆ. ಸೂರ್ಯ ಬೇರೆ ಎಲ್ಲ ತಂಡಗಳ ವಿರುದ್ಧ ರನ್ ಗಳಿಸಿದ್ದಾರೆ. ಆದರೆ ಪಾಕ್ ವಿರುದ್ಧ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ. ಸೂರ್ಯ ಪಾಕ್ ವಿರುದ್ಧ ಆಡಿದ 5 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ 64 ರನ್ ಗಳಿಸಿದ್ದಾರೆ.
ಇನ್ನು ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಅನುಪಸ್ಥಿತಿ ಕಾಡಲಿದೆ. ಇವರು ತಂಡದಲ್ಲಿ ಸಮತೋಲನ ತರುತ್ತಿದ್ದರು. ಇವರು ಟೀಮ್ ಇಂಡಿಯಾದ ಬೆಸ್ಟ್ ಫೀಲ್ಡರ್ಗಳಲ್ಲಿ ಒಬ್ಬರು. ಇವರು ಚುಟುಕು ಫಾರ್ಮೆಟ್ಗೆ ಹೇಳಿ ಮಾಡಿಸಿದ ಆಟಗಾರ ಎಂದು ಮಾಜಿ ಕ್ರಿಕೆಟಿಗ ಬಾಜಿದ್ ಖಾನ್ ಹೇಳಿದ್ದಾರೆ.

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. 8 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಈ ಗುಂಪುಗಳಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಸೂಪರ್ 4ಗೆ ಅರ್ಹತೆ ಪಡೆಯಲಿವೆ. ಸೂಪರ್ 4 ನ ಅಗ್ರ 2 ತಂಡಗಳು ಫೈನಲ್ನಲ್ಲಿ ಕದಾಟ ನಡೆಸಲಿವೆ.