ನವದೆಹಲಿ; ಭಾರತ ಹಾಗೂ ಪಾಕಿಸ್ತಾನ ನಡುವಣ ಟಿ20 ಪಂದ್ಯ ನಡೆಯುತ್ತದಾ ಎಂಬುದೇ ದೊಡ್ಡ ಕುತೂಹಲ ಸೃಷ್ಟಿಸಿದೆ. ಇದಕ್ಕೆ ಸಂಬಂಧ ಪಟ್ಟಂತೆ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತವೆ. ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ತನ್ನ ನಿರ್ಧಾರದಿಂದ ಯೂಟರ್ನ್ ಹೊಡೆಯುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಪಾಕ್, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿತ್ತು.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಎಲ್ಲವೂ ಅಂದುಕೊಂಡಂತೆ ನಡೆದರೆ, ಫೆಬ್ರವರಿ 15 ರಂದು ಕೊಲಂಬೊದಲ್ಲಿ ಮುಖಾಮುಖಿ ಆಗಲಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಜೊತೆ ಪಿಸಿಬಿ ಮಾತುಕತೆ ನಡೆಸಿದೆ. ಪಿಸಿಬಿ ಮೂಲಗಳ ಪ್ರಕಾರ ಭಾರತದ ವಿರುದ್ಧ ಪಾಕ್ ಕಣಕ್ಕೆ ಇಳಿಯಲಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಟೂರ್ನಿಯ ವೇಳಾಪಟ್ಟಿಯಂತೆ ಎರಡೂ ತಂಡಗಳು ಕಾದಾಟ ನಡೆಸಲಿವೆ.

ಭಾರತದ ವಿರುದ್ಧದ ಪಂದ್ಯವನ್ನು ಬಾಯ್ಕಟ್ ಮಾಡುವ ಪಿಸಿಬಿ ನಿರ್ಧಾರದ ಬಗ್ಗೆ ಮಾತುಕತೆ ನಡೆಸಲು ಇಬ್ಬರು ಐಸಿಸಿ ಅಧಿಕಾರಿಗಳು ಲಾಹೋರ್ಗೆ ಬಂದಿದ್ದರು ಎಂದು ವರದಿಗಳಾಗಿವೆ. ಈ ವೇಳೆ ಪಿಸಿಬಿ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಧಾಟಿಯಲ್ಲಿ ಮಾತುಗಳನ್ನು ಆಡಿದ ಎಂದು ತಿಳಿದು ಬಂದಿದೆ.
ಭದ್ರತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶ ಭಾರತಕ್ಕೆ ಪ್ರವಾಸವನ್ನು ಬೆಳೆಸದಿರಲು ನಿರ್ಧರಿಸಿತ್ತು. ಅಲ್ಲದೆ ಐಸಿಸಿಯಲ್ಲಿ ಸ್ಥಳ ಹಾಗೂ ಗುಂಪು ಬದಲಾವಣೆಗೆ ಬೇಡಿಕೆ ಇಟ್ಟಿತ್ತು. ಆದರೆ ಇದಕ್ಕೆಲ್ಲ ಆಸ್ಪದ ಕೊಡದ ಐಸಿಸಿ ಆಡುವುದಿದ್ದರೆ ಭಾರತದಲ್ಲಿ ಆಡಿ ಎಂದು ಸೂಚಿಸಿತ್ತು. ಬಾಂಗ್ಲಾ ಭಾರತಕ್ಕೆ ಪ್ರವಾಸ ಬೆಳೆಸುವುದಿಲ್ಲ ಎಂದು ಸ್ಪಷ್ಟ ಪಡಿಸಿದಾಗ ಬಾಂಗ್ಲಾ ತಂಡವನ್ನು ಟೂರ್ನಿಯಿಂದ ಹೊರಗಿಟ್ಟು, ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಿತು. ಇನ್ನು ಬಾಂಗ್ಲಾದೇಶಕ್ಕೆ ಬೆಂಬಲವಾಗಿ ನಿಂತು ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂಬ ನಿಟ್ಟಿನಲ್ಲಿ ಪಾಕಿಸ್ತಾನ, ಭಾರತದ ವಿರುದ್ಧದ ಪಂದ್ಯವನ್ನು ಬಾಯ್ಕಟ್ ಮಾಡುವುದಾಗಿ ತಿಳಿಸಿತ್ತು.

ಪಾಕಿಸ್ತಾನ ಭಾರತದ ವಿರುದ್ಧದ ಪಂದ್ಯವನ್ನು ಬಾಯ್ಕಾಟ್ ಮಾಡುವುದಾಗಿ ಸ್ವತಃ ಪಾಕ್ ಪ್ರಧಾನಿ ಕ್ಯಾಬಿನೇಟ್ ಸಭೆಯಲ್ಲಿ ಮಂಡಿಸಿದರು. ಈ ತೀರ್ಮಾನ ಹೊರ ಬಿಳುತ್ತಿದ್ದಂತೆ ಹೊಸ ವಿವಾದ ಸೃಷ್ಟಿಕೊಂಡಿತು. ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ ಪಾಕ್ ದೊಡ್ಡ ಮೊತ್ತವನ್ನು ಭರಿಸಬೇಕಾಗುತ್ತದೆ ಎಂದು ಐಸಿಸಿ ಎಚ್ಚರಿಕೆ ನೀಡಿತ್ತು. ಲಾಹೋರ್ನಲ್ಲಿ ನಡೆದ ಸಭೆಯಲ್ಲಿ ಪಾಕ್ ತನ್ನ ಧೋರಣೆಯನ್ನು ಪರಾಮರ್ಶಿಸುತ್ತಿದೆ ಎಂದು ತಿಳಿದು ಬಂದಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಐಸಿಸಿ ಹಾಗೂ ಏಷ್ಯನ್ ಕೌನ್ಸಿಲ್ ನಡೆಸುವ ಟೂರ್ನಿಗಳಲ್ಲಿ ಮಾತ್ರ ಭಾಗವಹಿಸುತ್ತಿವೆ. ಅಲ್ಲದೆ ಈ ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಹೀಗಾಗಿಯೇ ಭಾರತ ಪಾಕಿಸ್ತಾನ ಆತಿಥ್ಯದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು. ಅಲ್ಲದೆ ಏಷ್ಯಾ ಕಪ್ ಆಯೋಜನೆಯನ್ನು ಹೊಂದಿದ್ದ ಭಾರತ ಪಂದ್ಯಗಳನ್ನು ದುಬೈನಲ್ಲಿ ನಡೆಸಿತು.