
ನವದೆಹಲಿ, ಮಾರ್ಚ್ 19: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತನಗೆ ನಷ್ಟ ಪರಿಹಾರ ನೀಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ), ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ದೂರು ನೀಡಿತ್ತು. ಆದರೆ ಈಗ ಪಿಸಿಬಿ ತಾನೇ ಬಿಸಿಸಿಐಗೆ ಪರಿಹಾರ ನೀಡಿದೆ.
2014ರಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಳ್ಳುವುದಾಗಿ ಪಿಸಿಬಿ ಮತ್ತು ಬಿಸಿಸಿಐ ಒಪ್ಪಂದ ಮಾಡಿಕೊಂಡಿತ್ತು. ಆದರೆ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಪಾಲ್ಗೊಂಡಿಲ್ಲ. ಹೀಗಾಗಿ ನಮಗೆ ನಷ್ಟವಾಗಿದೆ. ಇದರ ಪರಿಹಾರಾರ್ಥವಾಗಿ ಬಿಸಿಸಿಐ ನಮಗೆ ಸುಮಾರು 492 ಕೋ.ರೂ. ಪರಿಹಾರ ನೀಡಬೇಕು ಎಂದು ಪಿಸಿಬಿ ಐಸಿಸಿಗೆ ದೂರು ನೀಡಿತ್ತು.
ದೂರನ್ನು ಪರಿಗಣಿಸಿದ ಐಸಿಸಿಯ ವಿವಾದ ನಿರ್ಣಯ ಸಮಿತಿ (ಡಿಸ್ಪ್ಯೂಟ್ ರಿಸೊಲ್ಯೂಷನ್ ಕಮಿಟಿ) ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ, ತಾನು ಭದ್ರತೆ ಕಾರಣದಿಂದಾಗಿ ಪಾಕ್ ನಲ್ಲಿ ನಡೆಯಬೇಕಿದ್ದ ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಂಡಿರಲಿಲ್ಲ ಭಾರತ ಹೇಳಿತ್ತು. ಹೀಗಾಗಿ ತೀರ್ಪು ಭಾರತದ ಪರವಾಗಿತ್ತಲ್ಲದೆ ದೂರು ನೀಡಿದ್ದ ಪಿಸಿಬಿಯೇ ಬಿಸಿಸಿಐಗೆ ಪರಿಹಾರ ನೀಡಬೇಕೆಂದು ಐಸಿಸಿ ಆದೇಶಿಸಿತ್ತು.
ಐಸಿಸಿ ಆದೇಶ ಪಾಲಿಸಿರುವ ಪಿಸಿಬಿ ಪರಿಹಾರವಾಗಿ ಸುಮಾರು ಯುಎಸ್ಡಿ 1.6 ಮಿಲಿಯನ್ (ಸುಮಾರು 11 ಕೋ.ರೂ.) ನೀಡಿದೆ. ಪಿಸಿಬಿ ಅಧ್ಯಕ್ಷ ಎಹ್ಸಾನ್ ಮನಿ ಸೋಮವಾರ (ಮಾರ್ಚ್ 18) ಮಾತನಾಡಿ, 'ಕೇಸ್ ಸೋತ ಕಾರಣ ನಾವು ಬಿಸಿಸಿಐಗೆ ಸುಮಾರು 2.2 ಮಿಲಿಯನ್ ಯುಎಸ್ಡಿ ನೀಡಿದ್ದೇವೆ' ಎಂದು ತಿಳಿಸಿದ್ದಾರೆ.