ಟಿ20 ವಿಶ್ವಕಪ್ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮೊದಲ ಜಯ ಕಂಡಿದೆ. ಇನ್ನು ಈಗ ಬರುತ್ತಿರುವ ಮಾಹಿತಿ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಫೆಬ್ರವರಿ 15 ರಂದು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಿಳಿಸಿತ್ತು. ಆದರೆ ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ ಪಿಸಿಬಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜೊತೆ ಮಾತುಕತೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ಇತ್ತೀಚಿಗೆ ಪಾಕಿಸ್ತಾನ ಪ್ರಧಾನಿ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಕಣಕ್ಕೆ ಇಳಿಯುವುದಿಲ್ಲ ಎಂದು ತಿಳಿಸಿದ್ದರು. ಇದಾದ ಬಳಿಕ ಪಿಸಿಬಿ ಸಹ ಫೋರ್ಸ್ ಮೇಜರ್ ಮೊರೆ ಹೋಗಲು ನಿರ್ಧರಿಸಿತ್ತು. ಇದರಂತೆ ಪಿಸಿಬಿ, ಐಸಿಸಿಗೆ ಇದು ತಮ್ಮ ನಿರ್ಧಾರವಲ್ಲ ಎಂದು ಮನವರಿಕೆ ಮಾಡಿಕೊಡಲು ಮುಂದಾಗಿತ್ತು. ಆದರೆ ಈಗ ಬರುತ್ತಿರುವ ಮಾಹಿತಿಗಳು ಅಭಿಮಾನಿಗಳಲ್ಲಿ ಹೊಸ ಆಸೆ ಚಿಗುರಿಸಿದೆ.

ಟಿ20 ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಸ್ಥಿರ ಪ್ರದರ್ಶನ ನೀಡಿ ನೆದರ್ಲ್ಯಾಂಡ್ಸ್ ಪಂದ್ಯವನ್ನು 3 ವಿಕೆಟ್ಗಳಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಭರ್ಜರಿ ಆರಂಭ ಪಡೆದ ಬಳಿಕ ಪಾಕಿಸ್ತಾನ ಈಗ ತನ್ನ ಮಾತಿನ ಧಾಟಿಯನ್ನೇ ಬದಲಿಸಲು ಮುಂದಾದಂತೆ ಕಾಣುತ್ತಿದೆ. ಇದರ ಅನುಸಾರ ಭಾರತದ ವಿರುದ್ಧದ ಪಂದ್ಯಕ್ಕೆ ಪಾಕಿಸ್ತಾನ ಅಂಗಳಕ್ಕೆ ಹೊಸ ದಾರಿ ಹುಡುಕಿದಂತೆ ಕಾಣುತ್ತಿದೆ.
ಪಿಸಿಬಿ ಎದುರಿಸಬಹುದಾದ ಆರ್ಥಿಕ ಸವಾಲುಗಳ ಬಗ್ಗೆ ಐಸಿಸಿ, ಪಿಸಿಬಿಗೆ ತಕ್ಷಣ ತಿಳಿಸಿದೆ. ಹೀಗಾಗಿ ಪಿಸಿಬಿ ತನ್ನ ಚರ್ಚೆಯಲ್ಲಿ ಬದಲಾವಣೆ ಮಾಡಿಕೊಂಡು ಮಾತುಕತೆಗೆ ಮುಂದಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಇನ್ನು ಈಗ ಉದ್ಭವಿಸಿರುವ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಲು ಪಿಸಿಬಿ ಮುಂದಾಗಿದೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಈಗ ಪಿಸಿಬಿ ತನ್ನ ನಿಲುವಿನಲ್ಲಿ ಸ್ವಲ್ಪ ಸಡಿಲಿಕೆ ಮಾಡಿದೆ. ಐಸಿಸಿ ಅಧಿಕಾರಿಗಳೊಂದಿಗೆ ಪಿಸಿಬಿ ಮಾತುಕತೆ ಆರಂಭಿಸಿದೆ ಎಂದು ತಿಳಿದು ಬಂದಿದೆ. ಈ ಎಲ್ಲ ಚರ್ಚೆಗಳಿಂದಾಗ ಫೆಬ್ರವರಿ 15 ರಂದು ಭಾರತ, ಪಾಕಿಸ್ತಾನ ಪಂದ್ಯಗಳು ನಡೆಯಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ.
ಭಾರತ ಪಾಕಿಸ್ತಾನ ನಡುವಣ ಪಂದ್ಯ ನಡೆಯದೇ ಇದ್ದರೆ ಇದರ ನೇರ ಪರಿಣಾಮ ಶ್ರೀಲಂಕಾದ ಮೇಲೆ ಬೀಳಲಿದೆ. ಭಾರತ, ಪಾಕಿಸ್ತಾನ ತಂಡಗಳ ನಡುವಣ ಪಂದ್ಯ ಕೊಲಂಬೊದಲ್ಲಿ ನಡೆಯಲಿದ್ದು, ಇದರಿಂದ ಲಂಕಾ ತಂಡದ ಪ್ರವಾಸೋದ್ಯಮ ಹೆಚ್ಚಾಗಲಿದೆ. ಹೀಗಾಗಿ ಶ್ರೀಲಂಕಾ ತಂಡ ಪಾಕಿಸ್ತಾನಕ್ಕೆ ಮನವಿ ಮಾಡಿ ಪಂದ್ಯವನ್ನು ಆಡುವ ಬಗ್ಗೆ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿತ್ತು.
ಪಾಕಿಸ್ತಾನ ಸರ್ಕಾರ ಭಾರತದ ವಿರುದ್ಧದ ಪಂದ್ಯವನ್ನು ಆಡುವುದಿಲ್ಲ ಎಂದು ಇತ್ತೀಚಿಗೆ ತಿಳಿಸಿತ್ತು. ಹೀಗಾಗಿ ಪಿಸಿಬಿ ಫೋರ್ಸ್ ಮೇಜರ್ ಮೊರೆ ಹೊಗಲು ನಿರ್ಧರಿಸಿತ್ತು. ಈ ಮೂಲಕ ಪಿಸಿಬಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದು ತಮ್ಮ ನಿರ್ಧಾರವಲ್ಲ ಎಂದು ತಿಳಿಸಿತ್ತು. ಈ ಮೂಲಕ ಪಿಸಿಬಿ ತನ್ನ ಮೇಲೆ ಬೀಳಬಹುದಾದ ದೊಡ್ಡ ಮೊತ್ತದ ಹೊರೆಯನ್ನು ತಪ್ಪಿಸಿಕೊಳ್ಳಲು ಪಿಸಿಬಿ ಪ್ಲ್ಯಾನ್ ಮಾಡಿಕೊಂಡಿತ್ತು.