
ಜೈಪುರ್, ಫೆಬ್ರವರಿ 19: ಪಾಕಿಸ್ತಾನ ಕ್ರಿಕೆಟ್ ಆಟಗಾರರ ಭಾವಚಿತ್ರಗಳನ್ನು ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್ (ಆರ್ಸಿಎ) ಕಿತ್ತು ಹಾಕಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಗೆ ಪ್ರತಿಭಟನೆಯೆಂಬಂತೆ ಆರ್ಸಿಎ ಈ ನಡೆ ಪ್ರದರ್ಶಿಸಿದೆ.
ಕಳೆದ ಗುರುವಾರ (ಫೆಬ್ರವರಿ 14) ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪುಲ್ವಾಮಾ ಎಂಬಲ್ಲಿ ಭಾರತೀಯ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಭಾರತದ 40ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದರು. ಅಲ್ಲದೆ ಈ ದಾಳಿ ಕಳೆದ ಹತ್ತು ದಶಕಗಳಲ್ಲೇ ನಡೆದ ಅತಿ ಭಯಾನಕ ಭಯೋತ್ಪಾದಕ ದಾಳಿಯಾಗಿ ಗುರುತಿಸಲ್ಪಟ್ಟಿತ್ತು.
ಚಿತ್ರಗಳನ್ನು ತೆಗೆದು ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಆರ್ಸಿಎ ಉಪಾಧ್ಯಕ್ಷ ಮೊಹಮ್ಮದ್ ಇಕ್ಬಾಲ್, 'ಬಿಸಿಸಿಐ, ಆರ್ಸಿಎ ಮತ್ತು ಇತರ ಅಸೋಸಿಯೇಷನ್ಗಳು ಹುತಾತ್ಮ ಯೋಧರ ಕುಟುಂಬದ ಪರವಾಗಿದೆ. ದಾಳಿಗೆ ಸಂಬಂಧಿಸಿ ಪ್ರತಿಭಟನೆಯಾಗಿ ನಾವು ಪಾಕ್ ಕ್ರಿಕೆಟಿಗರ ಭಾವಚಿತ್ರಗಳನ್ನು ತೆಗೆದು ಹಾಕಿದ್ದೇವೆ. ದಾಳಿಗೆ ಭಾರತ ಪ್ರತೀಕಾರ ತೀರಿಸುವುದನ್ನು ನಾವು ಬಯಸಿದ್ದೇವೆ' ಎಂದಿದ್ದಾರೆ.
ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಹಾಕಲಾಗಿದ್ದ ಇಮ್ರಾನ್ ಖಾನ್, ವಾಸೀಮ್ ಅಕ್ರಮ್, ಮೊಹಮ್ಮದ್ ಆಸಿಫ್, ಶೋಯೆಬ್ ಅಖ್ತರ್, ವಾಕರ್ ಯೂನಿಸ್ ಸೇರಿದಂತೆ ಇನ್ನೂ ಕೆಲವು ಪಾಕ್ ಕ್ರಿಕೆಟಿಗರ ಭಾವಚಿತ್ರಗಳನ್ನು ಕಿತ್ತು ಸ್ಟೋರ್ ರೂಮಿನಲ್ಲಿ ಇಡಲಾಗಿದೆ ಎಂದು ತಿಳಿದು ಬಂದಿದೆ.