
ನವದೆಹಲಿ, ಮೇ 9: ಜೈಪುರದ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ತಂಡದ ಜೆರ್ಸಿ ಪಿಂಕ್ ಬಣ್ಣಕ್ಕೆ ಬದಲಾಗಲಿದೆ. ಆರೋಗ್ಯ ಜಾಗೃತಿ ಮೂಡಿಸುವ ನೆಲೆಯಲ್ಲಿ ರಾಜಸ್ಥಾನ್ ಈ ಬಣ್ಣದ ಜೆರ್ಸಿಯೊಂದಿಗೆ ಪಂದ್ಯವನ್ನಾಡಲಿದೆ.
ಅಜಿಂಕ್ಯ ರಹಾನೆ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಚೆನ್ನೈ ವಿರುದ್ಧ ನಡೆಯಲಿರುವ ಐಪಿಎಲ್ 43ನೇ ಪಂದ್ಯದಲ್ಲಿ ಕ್ಯಾನ್ಸರ್ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪಿಂಕ್ ಬಣ್ಣದ ವಿಶೇಷ ಜೆರ್ಸಿ ಧರಿಸಿ ಆಡಲಿದೆ.
ಬಾಯಿ ಕ್ಯಾನ್ಸರ್ (Oral cancer), ಮೊಲೆ ಕ್ಯಾನ್ಸರ್ (Breast Cancer) ಮತ್ತು ಗರ್ಭಕಂಠದ ಕ್ಯಾನ್ಸರ್ (Cervical Cancer) ಬಗ್ಗೆ ಜಾಗೃತಿ ಮೂಡಿಸುವುದು, ಕ್ಯಾನ್ಸರ್ ತೊಡೆದು ಹಾಕುವಲ್ಲಿ ಜನರನ್ನು ಕೈ ಜೋಡಿಸುವಂತೆ ಪ್ರೇರೇಪಿಸುವುದು ಈ ವಿಶೇಷ ಪಿಂಕ್ ಜೆರ್ಸಿ ಧರಿಸುವುದರ ಉದ್ದೇಶ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ಮೇ 11ರ ಶುಕ್ರವಾರದ ಪಂದ್ಯದಲ್ಲಿತಿಳಿ ಗುಲಾಬಿ ಬಣ್ಣದ ಜೆರ್ಸಿಯೊಂದಿಗೆ ಚೆನ್ನೈ ವಿರುದ್ಧ ಮೈದಾನಕ್ಕಿಳಿಯಲಿದೆ.
ಈ ಐಪಿಎಲ್ ಸೀಸನ್ ನಲ್ಲಿ ಹೆಚ್ಚಿನ ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೆಳಗಿಳಿದಿದ್ದ ರಾಜಸ್ಥಾನ್, ಮಂಗಳವಾರ ಜೈಪುರದಲ್ಲೇ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 15ರನ್ ಜಯಗಳಿಸಿತ್ತು. ಈ ಜಯದೊಂದಿಗೆ ಪ್ಲೇಆಫ್ ಪ್ರವೇಶದ ಕನಸನ್ನೂ ರಾಜಸ್ಥಾನ್ ಜೀವಂತವಾಗಿರಿಸಿಕೊಂಡಿತ್ತು.
ರಾಜಸ್ಥಾನ್ ತಂಡಕ್ಕೆ ಉಳಿದ ಪಂದ್ಯಗಳಲ್ಲೂ ಗೆಲುವು ಅನಿವಾರ್ಯಾವಾಗಿರುವುದರಿಂದ ಪಿಂಕ್ ಜೆರ್ಸಿಯ ಪಂದ್ಯದಲ್ಲಿ ಬಲಾಡ್ಯ ಚೆನ್ನೈ ವಿರುದ್ಧ ಗೆಲುವು ಸಾಧಿಸುತ್ತೋ ಕಾದು ನೋಡಬೇಕಿದೆ. ಜುಲೈ 14ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ರಹಾನೆ ಭಾರತ ತಂಡದ ನಾಯಕತ್ವಕ್ಕಾಗಿ ಆಯ್ಕೆಯಾಗಿರುವುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.