ಗುವಹಾಟಿ, ಅ.05: ಹಾಲಿ ಚಾಂಪಿಯನ್ ಕರ್ನಾಟಕ ಗೆಲುವಿನ ಕನಸು ಭಗ್ನವಾಗಿದೆ. ಅಸ್ಸಾಂ ತಂಡ ತನ್ನ ವಿಕೆಟ್ ಉಳಿಸಿಕೊಂಡು ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಲ್ಲದೆ, ಮೂರು ಅಂಕ ಗಳಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಇನ್ನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟ ತಪ್ಪಿಗೆ ವಿನಯ್ ಕುಮಾರ್ ಪಡೆ ಕೇವಲ 1 ಅಂಕಕ್ಕೆ ತೃಪ್ತಿ ಪಟ್ಟಿದೆ.
ಹ್ಯಾಟ್ರಿಕ್ ಕಪ್ ಗೆಲ್ಲುವ ನಿರೀಕ್ಷೆಯಲ್ಲಿರುವ ಕರ್ನಾಟಕ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೂ ಉಪಯೋಗಿಸಿಕೊಳ್ಳಲಿಲ್ಲ. ನಂತರ ಬೌಲಿಂಗ್ ನಲ್ಲಿ ಮಿಂಚಿದರೂ ಎರಡನೇ ಇನ್ನಿಂಗ್ಸ್ ನಲ್ಲಿ ಅಸ್ಸಾಂ ಆಲೌಟ್ ಮಾಡಲು ತಿಣುಕಾಡಬೇಕಾಯಿತು. ವಿಧಿ ಇಲ್ಲದೆ ನಾಯಕ ವಿನಯ್ ಕುಮಾರ್ ಅವರು ಹತ್ತು ಜನ ಬೌಲರ್ ಗಳನ್ನು ಬಳಸಿಕೊಂಡರೂ ಪ್ರಯೋಜನವಾಗಲಿಲ್ಲ.
ಆಸ್ಸಾಂ ತಂಡದ ವಿಕೆಟ್ ಕೀಪರ್ ಅರುಣ್ ಕಾರ್ತಿಕ್ ಅಜೇಯ 115 ರನ್ (258 ಎಸೆತ, 15X4, 3X6) ಶತಕ, ನಾಯಕ ಗೋಕುಲ್ ಶರ್ಮ ಅವರ ಅರ್ಧಶತಕ 55ರನ್ ಹಾಗೂ ಕೆಳ ಕ್ರಮಾಂಕ ಆಟಗಾರರ ನೆರವಿನಿಂದ ಪಂದ್ಯವನ್ನು ಡ್ರಾ ಮಾಡಿಕೊಂಡಿತು.
ಅಂತಿಮ ದಿನದಾಟದ ಆರಂಭದಲ್ಲಿ 1 ವಿಕೆಟ್ಗೆ 30 ರನ್ಗಳಿಸಿದ್ದ ಅಸ್ಸಾಂ ಎದುರಿಗೆ 358 ರನ್ಗಳ ಮೊತ್ತದ ಗುರಿ ಇತ್ತು. ಅದರೆ, 102 ಓವರ್ ಆಡಿದ ಆಸ್ಸಾಂ 5 ವಿಕೆಟ್ ಕಳೆದುಕೊಂಡು 259ರನ್ ಗಳಿಸಿ ಡ್ರಾಗೆ ತೃಪ್ತಿ ಪಟ್ಟುಕೊಂಡಿತು.
ಸ್ಕೋರ್ ಕಾರ್ಡ್:
ಕರ್ನಾಟಕ ಪ್ರಥಮ ಇನಿಂಗ್ಸ್: 187/10
ಅಸ್ಸಾಂ ಪ್ರಥಮ ಇನಿಂಗ್ಸ್: 78.5 ಓವರ್ಗಳಲ್ಲಿ 194/10
ಕರ್ನಾಟಕ ದ್ವಿತೀಯ ಇನಿಂಗ್ಸ್: 94 ಓವರ್ಗಳಲ್ಲಿ 394/8 ಡಿಕ್ಲೇರ್
(ಆರ್. ಸಮರ್ಥ್ 131, ಅಗರವಾಲ್ 47, ಗೌತಮ್ 44, ಎಸ್.ಗೋಪಾಲ್ 41, ಶಿಶಿರ್ ಭವಾನೆ 40, ಕರುಣ್ ನಾಯರ್ 34, ಸುಚಿತ್ ಅಜೇಯ 24,ಮುಹಮ್ಮದ್ 2/91 ಪುರ್ಕಯಸ್ತ 3/78)
ಅಸ್ಸಾಂ ಎರಡನೇ ಇನಿಂಗ್ಸ್: 259/5
(ಅರುಣ್ ಕಾರ್ತಿಕ್ ಅಜೇಯ 115, ಗೋಕುಲ್ ಶರ್ಮ 55ರನ್, ಜೆ ಸುಚಿತ್ 2/60, ವಿನಯ್ ಕುಮಾರ್ 2/41)
ತಂಡಗಳು:
ಅಸ್ಸಾಂ: ಅಬು ನೆಚಿಮ್ ಅಹ್ಮದ್, ಗೋಕುಲ್ ಶರ್ಮ (ನಾಯಕ), ಕೆಬಿ ಅರುಣ್ ಕಾರ್ತಿಕ್ (ವಿಕೆಟ್ ಕೀಪರ್), ಅಮಿತ್ ವರ್ಮಾ(ಕರ್ನಾಟಕದಿಂದ ವಲಸೆ ಹೋಗಿರುವ ಆಟಗಾರ), ಅರುಪ್ ದಾಸ್, ಕೃಷ್ಣ ದಾಸ್, ಪಲ್ಲವ್ ಕುಮಾರ್ ದಾಸ್, ಸರುಪಮ್ ಪರ್ಕಯಸ್ತಾ, ಶಿವಶಂಕರ್ ರಾಯ್, ಸೈಯದ್ ಮೊಹಮ್ಮದ್, ತರ್ಜಿಂದರ್ ಸಿಂಗ್
ಕರ್ನಾಟಕ: ವಿನಯ್ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಕರುಣ್ ನಾಯರ್, ಮಿಥುನ್ ಎ , ಶರತ್ ಎಚ್.ಎಸ್, ಶ್ರೇಯಸ್ ಗೋಪಾಲ್, ಸಿಎಂ ಗೌತಮ್ (ವಿಕೆಟ್ ಕೀಪರ್), ಸುಚಿತ್ ಜೆ, ಮಾಯಾಂಕ್ ಅಗರವಾಲ್, ಶಿಶಿರ್ ಭವಾನೆ, ಸಮರ್ಥ್ ಆರ್.
ಕರ್ನಾಟಕ ಮುಂದಿನ ಪಂದ್ಯದಲ್ಲಿ ಬೆಂಗಾಳವನ್ನು ಎದುರಿಸಲಿದೆ. ಅಕ್ಟೋಬರ್ 8-11 ರ ತನಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
(ಒನ್ ಇಂಡಿಯಾ ಸುದ್ದಿ)