ಮುಂಬೈ, ಮಾ.9: ಗಾಯದ ನೋವಿನ ನುಂಗಿಕೊಂಡು ಕ್ರೀಸಿಗಿಳಿದ ಲೊಕೇಶ್ ರಾಹುಲ್ ಅವರು ಮಹತ್ವದ ಘಟ್ಟದಲ್ಲಿ ಉತ್ತಮ ಆಟ ಪ್ರದರ್ಶಿಸಿ ಅದ್ಭುತ ಶತಕ ದಾಖಲಿಸಿ ತಂಡಕ್ಕೆ ಮತ್ತೊಮ್ಮೆ ಆಸರೆಯಾಗಿದ್ದಾರೆ. ರಾಹುಲ್ ಅವರಿಗೆ ಉತ್ತಮ ಸಾಥ್ ನೀಡಿರುವ ಕರುಣ್ ನಾಯರ್ ಕೂಡಾ 100 ರ ಗಡಿ ದಾಟಿ ತಮಿಳುನಾಡಿಗೆ ತಲೆನೋವಾಗಿದ್ದಾರೆ. ರಣಜಿ ಫೈನಲ್ ನ ಎರಡನೇ ದಿನದ ಅಂತ್ಯಕ್ಕೆ 97 ಓವರ್ ಗಳಲ್ಲಿ ಕರ್ನಾಟಕ 323/5 ಸ್ಕೋರ್ ಮಾಡಿದೆ.
ಒಟ್ಟಾರೆ ಎರಡನೇ ದಿನದ ಅಂತ್ಯಕ್ಕೆ ಕರ್ನಾಟಕ 99 ಓವರ್ ಗಳಲ್ಲಿ 323/5, 189 ರನ್ ಮುನ್ನಡೆ, ಕೆಎಲ್ ರಾಹುಲ್ 131, ಕರುಣ್ ನಾಯರ್ 130. 239 ರನ್ ಜೊತೆಯಾಟ.
ಕರ್ನಾಟಕದ ವೇಗಿ ವಿನಯ್ ಕುಮಾರ್ ದಾಳಿಗೆ ತತ್ತರಿಸಿದ ತಮಿಳುನಾಡು 62.4 ಓವರ್ ಗಳಲ್ಲಿ 134 ಸ್ಕೋರಿಗೆ ಆಲೌಟ್ ಆಗಿತ್ತು. ಅದರೆ, ಮೊದಲ ದಿನದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು ಕರ್ನಾಟಕ ಕೂಡಾ ಕಷ್ಟದ ಪರಿಸ್ಥಿತಿಗೆ ತಲುಪಿತ್ತು. ಕೆಎಲ್ ರಾಹುಲ್ ಬೇರೆ 1 ರನ್ ಗಳಿಸಿ ಗಾಯಗೊಂಡು ಪೆವಿಲಿಯನ್ ಗೆ ತೆರಳಿದ್ದು ಆತಂಕ ಮೂಡಿಸಿತ್ತು. [ಕರ್ನಾಟಕ vs ತಮಿಳುನಾಡು ಮೊದಲ ದಿನದ ವರದಿ]
ಎರಡನೇ ದಿನ ಕರುಣ್ ನಾಯರ್ ಹಾಗೂ ಅಭಿಮನ್ಯು ಮಿಥುನ್ ಉತ್ತಮ ಆರಂಭ ನೀಡಿದರು. ಆದ್ರೆ, 41 ಎಸೆತಗಳಲ್ಲಿ 39ರನ್ ಗಳಿಸಿದ್ದ ಮಿಥುನ್ ರಂಗರಾಜನ್ ಅವರಿಗೆ ಎಲ್ ಬಿ ಆಗಿ ಔಟಾದರು. ನಂತರ ಗಾಯದ ನಡುವೆಯೂ ಕಣಕ್ಕಿಳಿದ ರಾಹುಲ್ ಇನ್ನಿಂಗ್ಸ್ ಕಟ್ಟಿದರು.
ಭೋಜನ ವಿರಾಮದ ವೇಳೆಗೆ ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ ಲೀಡ್ ಪಡೆದುಕೊಂಡಿತ್ತು. ಕೆಎಲ್ ರಾಹುಲ್ ಶತಕ ದಾಖಲಿಸಿದ ವೇಳೆಗೆ ಕರ್ನಾಟಕ 82 ಓವರ್ಸ್ ನಲ್ಲಿ 250/5 ಸ್ಕೋರ್ ಮಾಡಿತ್ತು. ಕೆಎಲ್ ರಾಹುಲ್ ಹಾಗೂ ಕರುಣ್ 200ರನ್ ಜೊತೆಯಾಟದ ನೆರವಿನಿಂದ ಕರ್ನಾಟಕ ಬೃಹತ್ ಮುನ್ನಡೆ ಪಡೆಯುತ್ತ ಸಾಗಿದೆ.

ಕೆಎಲ್ ರಾಹುಲ್ ಅವರು ಪ್ರಥಮದರ್ಜೆ ಕ್ರಿಕೆಟ್ ನಲ್ಲಿ 9ನೇ ಶತಕ ಹಾಗೂ 3000ರನ್ ಪೂರೈಸಿದರು. ರಾಹುಲ್ ಅವರ 100 ರನ್ ನಲ್ಲಿ 10 ಬೌಂಡರಿ, 1 ಸಿಕ್ಸರ್ ಇದೆ. ಕರುಣ್ ನಾಯರ್ 4ನೇ ಶತಕ (19 ಬೌಂಡರಿ) ಬಾರಿಸಿ ಕರ್ನಾಟಕಕ್ಕೆ ಗೆಲುವಿನ ಆಸೆ ಚಿಗುರಿಸಿದ್ದಾರೆ. ಸರಿ ಸುಮಾರು 8 ಬೌಲರ್ ಗಳನ್ನು ತಮಿಳುನಾಡಿನ ನಾಯಕ ಅಭಿನವ್ ಮುಕುಂದ್ ಬಳಸಿದರೂ ಈ ಜೋಡಿಯನ್ನು ಮುರಿಯಲಾಗಲಿಲ್ಲ.
ಕರ್ನಾಟಕ: ಆರ್. ವಿನಯ್ ಕುಮಾರ್, ಮನೀಷ್ ಪಾಂಡೆ (ಉಪನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್. ರಾಹುಲ್, ಆರ್. ಸಮರ್ಥ್,ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಶಿಶಿರ್ ಭವಾನೆ, ಅಭಿಮನ್ಯು ಮಿಥುನ್, ಎಸ್. ಅರವಿಂದ್, ಎಚ್.ಎಸ್. ಶರತ್.
ತಮಿಳುನಾಡು: ಅಭಿನವ್ ಮುಕುಂದ್ (ನಾಯಕ), ಅಶ್ವಿನ್ ಕ್ರೈಸ್ಟ್, ಬಾಬಾ ಅಪರಾಜಿತ್, ಮುರಳಿ ವಿಜಯ್, ದಿನೇಶ್ ಕಾರ್ತಿಕ್, ಬಾಬಾ ಇಂದ್ರಜಿತ್, ರಾಮಸ್ವಾಮಿ ಪ್ರಸನ್ನ, ಲಕ್ಷ್ಮೀಪತಿ ಬಾಲಾಜಿ, ವಿಜಯ್ ಶಂಕರ್, ಎಂ. ರಂಗರಾಜನ್, ಪ್ರಶಾಂತ್ ಪರಮೇಶ್ವರನ್.
ಪಂದ್ಯದ ನೇರ ಪ್ರಸಾರ ಸ್ಟಾರ್ ಸ್ಫೋರ್ಟ್ಸ್ 2 ನಲ್ಲಿ ಲಭ್ಯವಿದೆ. ವಾಂಖೆಡೆ ಸ್ಟೇಡಿಯಂಗೆ ಉಚಿತ ಪ್ರವೇಶವಿದೆ. ಆದರೆ, ವೀಕ್ಷಕ ವಿವರಣೆ ಹಿಂದಿಯಲ್ಲಿದೆ. ಕನ್ನಡ ಅಥವಾ ತಮಿಳು ಬಲ್ಲವರ ಮೇಲೆ ಹಿಂದಿ ಕಾಮೆಂಟರಿಯ ಹೇರಿಕೆ ಮುಂದುವರಿದಿದೆ.