ಮೈಸೂರು, ಜ.19: ವಿನಯ್ ಕುಮಾರ್ ನೇತೃತ್ವದ ಕರ್ನಾಟಕದ ಕ್ರಿಕೆಟ್ ಆಟಗಾರರು ಜ.21ರಿಂದ 24ರವರೆಗೆ ಇಲ್ಲಿ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬರೋಡಾ ತಂಡವನ್ನು ಎದುರಿಸಲಿದ್ದಾರೆ.
'ಎ' ಗುಂಪಿನ ಐದನೇ ಪಂದ್ಯದಲ್ಲಿ ಆಡಲಿರುವ ಕರ್ನಾಟಕ ತಂಡವನ್ನು ರಾಜ್ಯ ಕ್ರಿಕೆಟ್ ಸಂಸ್ಥೆ ಭಾನುವಾರ ಪ್ರಕಟಿಸಿದೆ. ಕಳೆದ ಪಂದ್ಯದಲ್ಲಿ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಕರ್ನಾಟಕದ ವಿರುದ್ಧ ಡ್ರಾ ಸಾಧಿಸುವ ಮೂಲಕ ಸೋಲು ತಪ್ಪಿಸಿಕೊಂಡಿತ್ತು. ಮನೀಶ್ ಪಾಂಡೆ ಹಾಗೂ ಶ್ರೇಯಸ್ ಗೋಪಾಲ್ ಭರ್ಜರಿ ಶತಕದ ನೆರವಿನಿಂದ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದ ಕರ್ನಾಟಕ ತಂಡ ಮೂರು ಅಂಕಗಳನ್ನು ತನ್ನದಾಗಿಸಿಕೊಂಡಿತ್ತು.
ಪ್ರಸಕ್ತ ಋತುವಿನಲ್ಲಿ ಆಡಿದ ಮೊದಲ ನಾಲ್ಕು ಪಂದ್ಯಗಳಲ್ಲಿ ಜಯ ದಾಖಲಿಸಿರುವ ಹಾಲಿ ಚಾಂಪಿಯನ್ ಕರ್ನಾಟಕ ಇದೇ ಮೊದಲ ಬಾರಿ ಡ್ರಾ ಫಲಿತಾಂಶ ಕಂಡಿತ್ತು. [ಉತ್ತಪ್ಪ ಆರ್ಭಟ, ಕರ್ನಾಟಕಕ್ಕೆ ಹ್ಯಾಟ್ರಿಕ್ ಜಯ]

ತಂಡಕ್ಕೆ ರಾಹುಲ್: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಆಡಿ ಭರ್ಜರಿ ಶತಕ ದಾಖಲಿಸಿದ ಕನ್ನಡಿಗ ಕೆ.ಎಲ್.ರಾಹುಲ್ ಅವರು ರಾಜ್ಯ ತಂಡಕ್ಕೆ ಮರಳಿದ್ದಾರೆ. ಬರೋಡಾ ವಿರುದ್ಧ ಪಂದ್ಯಕ್ಕೆ ಲಭ್ಯರಿದ್ದಾರೆ. ಉಳಿದಂತೆ ಮಧ್ಯಪ್ರದೇಶ ವಿರುದ್ಧ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.
ತಂಡದ ವಿವರ: ವಿನಯ್ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್.ರಾಹುಲ್, ಆರ್.ಸಮರ್ಥ್, ಮನೀಶ್ ಪಾಂಡೆ, ಸಿ.ಎಂ.ಗೌತಮ್ (ಉಪನಾಯಕ,ವಿಕೆಟ್ ಕೀಪರ್), ಕರುಣ್ ನಾಯರ್, ಕುನಾಲ್ ಕಪೂರ್, ಶ್ರೇಯಸ್ ಗೋಪಾಲ್, ಉದಿತ್ ಬಿ ಪಟೇಲ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಅಬ್ರಾರ್ ಖಾಜಿ, ಶಿಶಿರ್ ಭವಾನೆ, ಎಸ್.ಅರವಿಂದ್.
ಬ್ಯಾಟಿಂಗ್ ಕೋಚ್: ಜೆ ಅರುಣ್ ಕುಮಾರ್
ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್
ಮ್ಯಾನೇಜರ್ : ಸಿದ್ದರಾಮು
ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳದ ಸದಸ್ಯರ ಹದ್ದಿನ ಕಣ್ಣಿನ ನಡುವೆ ಮೈದಾನದಲ್ಲಿ ಆಟಗಾರರು ಇನ್ಮುಂದೆ ಸೆಣಸಬೇಕಿದೆ. ಐಪಿಎಲ್ ನ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ನಂತರ ದೇಶಿ ಕ್ರಿಕೆಟ್ ನಲ್ಲೂ ಹೆಚ್ಚಿನ ನಿರ್ಬಂಧ, ನಿಯಮಗಳು ಜಾರಿಗೆ ಬರುತ್ತಿದ್ದು, ಕರ್ನಾಟಕ-ಬರೋಡಾ ನಡುವಿನ ಪಂದ್ಯದಲ್ಲಿ ಅಳವಡಿಸಲಾಗುತ್ತದೆ.[ಏನೇನು ನಿರ್ಬಂಧ ವಿವರ ಇಲ್ಲಿದೆ]