ನವದೆಹಲಿ, ಡಿ.24: ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ರಣಜಿ ಋತುವಿನಲ್ಲಿ ಸತತ ಮೂರನೇ ಜಯ ದಾಖಲಿಸಿದೆ. ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ 97 ಹಾಗೂ ಅಭಿಮನ್ಯು ಮಿಥುನ್ 5 ವಿಕೆಟ್ ಕಬಳಿಸಿ ರೈಲ್ವೇಸ್ ವಿರುದ್ಧ 136 ರನ್ ಗಳ ಭರ್ಜರಿ ಜಯ ದಾಖಲಿಸಲು ಕಾರಣರಾಗಿದ್ದಾರೆ.
ಅಭಿಮನ್ಯು ಮಿಥುನ್ 5/31 ಹಾಗೂ ನಾಯಕ ಆರ್ ವಿನಯ್ ಕುಮಾರ್ 2/37 ಗಳಿಸಿ ರೈಲ್ವೇಸ್ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ 43 ಓವರ್ ಗಳಲ್ಲಿ 114 ಸ್ಕೋರಿಗೆ ಆಲೌಟ್ ಆಯಿತು. ತಮಿಳುನಾಡು, ಪಶ್ಚಿಮ ಬೆಂಗಾಳ ನಂತರ ರೈಲ್ವೇಸ್ ತಂಡವನ್ನು ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸದೆಬಡೆದಿದೆ.
ಸತತ ಮೂರು ಗೆಲುವಿನಿಂದ 18 ಅಂಕ ಸಂಪಾದಿಸಿರುವ ಕರ್ನಾಟಕ ತಂಡ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ರೈಲ್ವೇಸ್ ತಂಡ ಸತತ ಎರಡು ಸೋಲು ಕಂಡು 6 ಅಂಕಗಳನ್ನು ಗಳಿಸಿದೆ. [ಹೊಸ ಇತಿಹಾಸ ಸೃಷ್ಟಿಸಿದ ಕರ್ನಾಟಕ]
ಎರಡನೇ ಇನ್ನಿಂಗ್ಸ್ ನಲ್ಲಿ 251 ರನ್ ಚೇಸ್ ಮಾಡಿದ ರೈಲ್ವೆಸ್ ತಂಡದಲ್ಲಿ ಅನುಪ್ ಮುಜಾಂದರ್ 26 ರನ್ ಗಳಿಸಿದ್ದೆ ದೊಡ್ಡ ಮೊತ್ತ. ಎಂಟು ಬ್ಯಾಟ್ಸ್ ಮನ್ ಗಳು ಎರಡಂಕಿ ದಾಟಲು ವಿಫಲರಾದರು.
ಮೊದಲ ಇನ್ನಿಂಗ್ಸ್ ನಲ್ಲಿ ಮಿಥುನ್ 3 ವಿಕೆಟ್ ಕಬಳಿಸಿದರೆ ಎಸ್ ಅರವಿಂದ್ 4/43 ವಿಕೆಟ್ ಗಳಿಸಿ ತಂಡಕ್ಕೆ ನೆರವಾದರು. ಇದಕ್ಕೂ ಮೊದಲು ಕರ್ನಾಟಕ ತಂಡ 174/5 42 ಓವರ್ ಗಳಲ್ಲಿ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಉತ್ತಪ್ಪ 97 (125 ಎ, 12X4, 2X6), ಕರುಣ್ ನಾಯರ್ 63 (104ಎ, 9x4, 1x6)
ಡಿ. 28ರಿಂದ ರೈಲ್ವೇಸ್ ತನ್ನ ಮುಂದಿನ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ. ಜ.5ರಿಂದ ಕರ್ನಾಟಕ ತಂಡ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡ ಸೆಣಸಾಟವಾಡಲಿದೆ. [ತತ್ತರಿಸಿ ಶರಣಾದ ತಮಿಳುನಾಡು]
ಸಂಕ್ಷಿಪ್ತ ಸ್ಕೋರ್
ಕರ್ನಾಟಕ 247 ಹಾಗೂ 174/5 ಡಿಕ್ಲೇರ್
(ರಾಬಿನ್ ಉತ್ತಪ್ಪ 97, ಕರುಣ್ ನಾಯರ್ 63, ಅನುರೀತ್ ಸಿಂಗ್ 3/67, ಕೃಷ್ಣಕಾಂತ್ ಉಪಾಧ್ಯಾಯ್ 2/61)
ರೈಲ್ವೇಸ್ 171 ಹಾಗೂ 114 ಆಲೌಟ್ 43 ಓವರ್ಸ್
(ಅನುಪ್ ಮಜುಂದಾರ್ 26 ನಾಟೌಟ್, ಅಭಿಮನ್ಯು ಮಿಥುನ್ 5/31, ವಿನಯ್ ಕುಮಾರ್ 2/37)