ನವದೆಹಲಿ, ಜೂ. 02: ಮಾಜಿ ಕ್ರಿಕೆಟ್ ನಾಯಕ ರವಿಶಾಸ್ತ್ರಿ ಅವರನ್ನು ಟೀಂ ಇಂಡಿಯಾದ ಮಧ್ಯಂತರ ಕೋಚ್ ಆಗಿ ನೇಮಕಗೊಂಡಿದ್ದಾರೆ. ಜೂ.10ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ಪ್ರವಾಸಕ್ಕೆ ರವಿಶಾಸ್ತ್ರಿ ಕೋಚ್ ಆಗಲಿದ್ದಾರೆ ಎಂದು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ.
ಜೂ.5ರಂದು ಟೀಂ ಇಂಡಿಯಾದ ಆಟಗಾರರು, ಸಲಹಾ ಸಮಿತಿ ಸದಸ್ಯರು, ಹೊಸ ಕೋಚ್ ಎಲ್ಲರೂ ಕೋಲ್ಕತ್ತಾದಲ್ಲಿ ಸೇರಲಿದ್ದಾರೆ. ರವಿಶಾಸ್ತ್ರಿ ಅವರು ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. [ಬಾಂಗ್ಲಾ ಟೂರ್ ನಂತರ ಭಾರತಕ್ಕೆ ಬಿಗಿ ವೇಳಾಪಟ್ಟಿ]
ಸಂಜಯ್ ಬಂಗಾರ್ ಅವರು ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ವಿಶ್ವಕಪ್ 2015ರಲ್ಲಿ ಬೌಲಿಂಗ್ ಕೋಚ್ ಆಗಿದ್ದ ಭರತ್ ಅರುಣ್ ಅವರು ಕರ್ತವ್ಯದಲ್ಲಿ ಮುಂದುವರೆಯಲಿದ್ದಾರೆ. ರಾಮಕೃಷ್ಣ ಶ್ರೀಧರ್ ಅವರು ಫೀಲ್ಡಿಂಗ್ ಕೋಚ್ ಆಗಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದರು. [ಬಿಸಿಸಿಐ ಟೀಂ ಸೇರಿದ ವಿವಿಎಸ್, ಗಂಗೂಲಿ, ತೆಂಡೂಲ್ಕರ್]

ರವಿ ಶಾಸ್ತ್ರಿ ಅವರು 80 ಟೆಸ್ಟ್ ಹಾಗೂ 150 ಏಕದಿನ ಕ್ರಿಕೆಟ್ ಆಡಿದ್ದು, 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಕ್ರಿಕೆಟ್ ಜತೆ ಸದಾ ನಂಟು ಹೊಂದಿರುವ ಶಾಸ್ತ್ರಿ ಅವರು ಐಸಿಸಿ ವಿಶ್ವಕಪ್ ಕ್ರಿಕೆಟ್ 2015 ಸಂದರ್ಭದಲ್ಲಿ ಟೀಂ ಇಂಡಿಯಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. [ಬಾಂಗ್ಲಾ ಪ್ರವಾಸ ವೇಳಾಪಟ್ಟಿ]
ಟೀಂ ಇಂಡಿಯಾದ ಕೋಚ್ ಆಗಿರುವ ಡಂಕನ್ ಫ್ಲೆಚರ್ ಅಧಿಕಾರ ಅವಧಿ ವಿಶ್ವಕಪ್ 2015 ಟೂರ್ನಿ ಜೊತೆಗೆ ಅಂತ್ಯವಾಗಿದೆ. ತಂಡದ ಮುಖ್ಯ ಫಿಜಿಯೋಥೆರಪಿಸ್ಟ್ ಆಗಿದ್ದ ನಿತಿನ್ ಪಟೇಲ್ ಅವರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ.
ಬಾಂಗ್ಲಾದೇಶಕ್ಕೆ ಆಯ್ಕೆಯಾಗಿರುವ ಇಡೀ ತಂಡ ಜೂ.5ರಂದು ಕೋಲ್ಕತ್ತಾದಲ್ಲಿ ಸೇರಲಿದೆ. ಜೂ.6ರಂದು ತಂಡದ ಪ್ರತಿ ಆಟಗಾರರ ದೈಹಿಕ ಪರೀಕ್ಷೆ ಕೈಗೊಂಡು ಫಲಿತಾಂಶ ಪರೀಕ್ಷಿಸಲಾಗುತ್ತದೆ. ಜೂ.7ರಂದು ತಂಡ ಬಾಂಗ್ಲಾದೇಶಕ್ಕೆ ತೆರಳಲಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)