ಮುಂಬೈ, ಸೆ.13: ಮುಂಬರುವ ಐಸಿಸಿ ವಿಶ್ವ ಟಿ20 ಟೂರ್ನಿ ತನಕ ರವಿಶಾಸ್ತ್ರಿ ಅವರನ್ನೇ ತಂಡದ ಹಿರಿಯ ಕೋಚ್ ಹಾಗೂ ನಿರ್ದೇಶಕರಾಗಿ ಮುಂದುವರೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.
ಮೊದಲಿಗೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ 72 ದಿನಗಳ ಕಾಲದ ಸುದೀರ್ಘ ಸರಣಿ ತನಕ ರವಿಶಾಸ್ತ್ರಿ ಅವರು ತಮ್ಮ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎನ್ನಲಾಗಿತ್ತು.ಈಗ 2016ರ ಐಸಿಸಿ ವಿಶ್ವ ಟಿ20 ಟೂರ್ನಿ ತನಕ ರವಿಶಾಸ್ತ್ರಿ ಅವರು ತಂಡಕ್ಕೆ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ. [ಚಾಂಪಿಯನ್ಸ್ ಲೀಗ್ ಟಿ20 ರದ್ದು ಮಾಡಿದ ಬಿಸಿಸಿಐ]

ಕೋಚ್ ಆಯ್ಕೆ: ಅಕ್ಟೋಬರ್ 2 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆರಂಭವಾಗಲಿದ್ದು, ಅದಕ್ಕೂ ಮುನ್ನ ಮುಖ್ಯ ಕೋಚ್ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದರು.
ರವಿಶಾಸ್ತ್ರಿ ಅವರು ನಿರ್ದೇಶಕರಾಗಿ, ಸಹಾಯಕ ಕೋಚ್ ಆಗಿ ಸಂಜಯ್ ಬಂಗಾರ್(ಬ್ಯಾಟಿಂಗ್), ಬಿ ಅರುಣ್ (ಬೌಲಿಂಗ್ ಕೋಚ್) ಹಾಗೂ ಆರ್ ಶ್ರೀಧರ್ (ಫೀಲ್ಡಿಂಗ್ ಕೋಚ್)ಅವರು ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ. [ದಕ್ಷಿಣ ಆಫ್ರಿಕಾ ಸರಣಿಗೆ ಸಂಭಾವ್ಯ ಆಟಗಾರರ ಪಟ್ಟಿ]
ರವಿಶಾಸ್ತ್ರಿ ಅವರ ಅಧಿಕಾರ ಅವಧಿಯಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ನಡೆದ ಐಸಿಸಿ ವಿಶ್ವಕಪ್ 2015ರಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ತಲುಪಿತ್ತು. ವಿರಾಟ್ ಕೊಹ್ಲಿ ನೇತೃತ್ವದ ಟೆಸ್ಟ್ ತಂಡ 22 ವರ್ಷಗಳ ನಂತರ ಶ್ರೀಲಂಕಾದಲ್ಲಿ 2-1 ಅಂತರದಿಂದ ಸರಣಿ ಗೆದ್ದುಕೊಂಡಿತು.
ಇದೆಲ್ಲವನ್ನು ಪರಿಗಣಿಸಿದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿರುವ ಬಿಸಿಸಿಐ ಸಲಹಾ ಸಮಿತಿ ಶಿಫಾರಸ್ಸಿನಂತೆ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರು ಅನುಮತಿ ನೀಡಿದ್ದಾರೆ.