
ನವದೆಹಲಿ, ಸೆಪ್ಟೆಂಬರ್ 17: ಟೀಮ್ ಇಂಡಿಯಾದ ಆಕರ್ಷಣೀಯ ಆಟಗಾರರಾದ ರಿಷಬ್ ಪಂತ್, ಶಿಖರ್ ಧವನ್ ಮತ್ತು ನವದೀಪ್ ಸೈನಿ, ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಡೆಲ್ಲಿ ಪರ ಆಡೋದನ್ನು ಖಾತರಿ ಪಡಿಸಿದ್ದಾರೆ. ಈ ಟೂರ್ನಿ ಸೆಪ್ಟೆಂಬರ್ 24ರಿಂದ ಅಕ್ಟೋಬರ್ 13ರ ವರೆಗೆ ನಡೆಯಲಿದೆ.
ಪಂತ್, ಧವನ್, ಸೈನಿ ತಂಡದ ಪರ ಕಣಕ್ಕಿಳಿಯುವುದನ್ನು ಖಾತರಿಪಡಿಸಿರುವುದರಿಂದ ಡೆಲ್ಲಿಗೆ ಆನೆ ಬಲ ಬಂದಂತಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಅಕ್ಟೋಬರ್ 2ರಿಂದ ಆರಂಭಗೊಳ್ಳಲಿರುವುದರಿಂದ ಪಂತ್ ಎರಡೂ ಟೂರ್ನಿಗಳನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಅಚ್ಚರಿ ಮೂಡಿಸಿದೆ.
ಇನ್ನು ಭಾರತದ ಅನುಭವಿ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ. ನವದೀಪ್ ಸೈನಿ ಟೆಸ್ಟ್ ಸರಣಿಗಾಗಿ ಪ್ರಕಟಿತ ಭಾರತ ತಂಡದಲ್ಲಿ ಇಲ್ಲ. ಆದರೆ ಟೆಸ್ಟ್ನಲ್ಲೂ ಹೆಸರಿಸಲ್ಪಟ್ಟಿರುವ ಪಂತ್, ವಿಜಯ್ ಹಝಾರೆಯಲ್ಲೂ ಹೇಗೆ ಆಡಲಿದ್ದಾರೆ ಎಂಬ ಕುತೂಹಲವಿದೆ.
ಈ ಬಗ್ಗೆ ಮಾತನಾಡಿರುವ ಡೆಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಮುಖ್ಯಸ್ಥ ರಜತ್ ಶರ್ಮಾ, ರಿಷಬ್ ಪಂತ್ ಅವರನ್ನು ತಂಡದಲ್ಲಿ ನೋಡಲು ಖುಷಿಯೆನಿಸುತ್ತಿದೆ. ಲಭ್ಯವಿರುವ ಮೊದಲ ಅವಕಾಶದಲ್ಲಿ ಡೆಲ್ಲಿ ಪರ ಆಡಲು ಶಿಖರ್ ಧವನ್ ಮತ್ತು ನವದೀಪ್ ಸೈನಿ ಕೂಡ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.