ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೇಂದ್ರ ಸರ್ಕಾರದ ನೀತಿ ಆಯೋಗ ಮತ್ತು ನಿಮಾನ್ಸ್ ಇವರ ಸಹಯೋಗದ ನೂತನ ಕಾರ್ಯಕ್ರಮವಾದ ಬ್ರೆನ್ ಹೆಲ್ತ ಇನಿಶಿಯೇಟಿವ್ ರಾಯಭಾರಿಯಾಗಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರನ್ನು ನೇಮಕ ಮಾಡಲಾಗಿದೆ.
ಒಟ್ಟು ಮೂರು ವರ್ಷದ ಅವಧಿಯ ವರೆಗೆ ರಾಬಿನ್ ಉತ್ತಪ್ಪ ಅವರನ್ನ ಈ ಕಾರ್ಯಕ್ರಮದ ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ.
ಮೆದುಳಿನ ಅಸ್ವಸ್ಥತೆಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಮಾಜಕ್ಕೆ ಮತ್ತು ಅರೋಗ್ಯ ವ್ಯವಸ್ಥೆಗಳ ಸುಸ್ಥಿರತೆಗೆ ಸವಾಲಾಗಿದ್ದು, ಈ ಬಗ್ಗೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆಯುವುದರಿಂದ ಮರಣ ದರ ಮತ್ತು ಅಂಗವೈಕಲ್ಯವನ್ನು ತಗ್ಗಿಸಲು ಸಹಾಯಕವಾಗುವುದು. ನರ ರೋಗವಿರುವ 60ರಿಂದ 90 ಪ್ರತಿಶತ ಜನರು ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯದೆ ಬಳಲುತ್ತಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪ್ರಸ್ತುತದ ಸಾಮಾನ್ಯ ನರರೋಗ ಮತ್ತು ಮಾನಸಿಕ ಅಸ್ವಸ್ಥತೆಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಮೆದುಳಿನ ಅಸ್ವಸ್ಥತೆ ಕುರಿತು ಆರಂಭಿಕ ಹಂತದಲ್ಲಿ ತಪಾಸನೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಾಯಕವಾಗಲಿದೆ. ರಾಜ್ಯಾದ್ಯಂತ ದುರ್ಬಲ ಜನರ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಬಿನ್ ಉತ್ತಪ್ಪ ಅವರನ್ನು ಸಂಭಾವನೆ ರಹಿತ ರಾಯಬಾರಿಯನ್ನಾಗಿ ಸರ್ಕಾರ ನೇಮಿಸಿದೆ.