ಶನಿವಾರ, ಸೆಪ್ಟೆಂಬರ್ 2ರಂದು ನಡೆಯಲಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಬಹು ನಿರೀಕ್ಷಿತ ಪಂದ್ಯಕ್ಕೂ ಮುಂಚಿತವಾಗಿ ಭಾರತ ತಂಡ ಇಂದು (ಬುಧವಾರ, ಆಗಸ್ಟ್ 30) ಕೊಲಂಬೊಗೆ ಬಂದಿಳಿಯಿತು.
ಇದೇ ವೇಳೆ ಭಾರತ ಮತ್ತು ಪಾಕಿಸ್ತಾನದ ಹೈ-ವೋಲ್ಟೇಜ್ ಪಂದ್ಯದ ರೋಚಕತೆಯನ್ನು ವೀಕ್ಷಿಸಲು ಉಭಯ ದೇಶಗಳ ಅಭಿಮಾನಿಗಳು ಕಾತರರಾಗಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದ ಭಾರತೀಯ ಆಟಗಾರರು ಕೊಲಂಬೊ ವಿಮಾನ ನಿಲ್ದಾಣವನ್ನು ತಲುಪುತ್ತಿದ್ದಂತೆ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಭಿಮಾನಿಗಳೊಂದಿಗೆ ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿತು.
ಇನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಆಲ್ರೌಂಡರ್ ರವೀಂದ್ರ ಜಡೇಜಾ, ವೇಗಿ ಮೊಹಮ್ಮದ್ ಶಮಿ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಅಲ್ಲಿನ ಜನತೆಗೆ ನಗು ಬೀರಿ ತೆರಳಿದರು.

ಆದರೆ, ಏಷ್ಯಾ ಕಪ್ ಅಭಿಯಾನದ ಮೊದಲ ಎರಡು ಪಂದ್ಯಗಳಲ್ಲಿ ಭಾರತ ತಂಡವು ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅನುಪಸ್ಥಿತಿ ಎದುರಿಸಲಿದೆ. ಗಾಯದಿಂದ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ಸೆಪ್ಟೆಂಬರ್ 4ರವರೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯ ಕಣ್ಗಾವಲಿನಲ್ಲಿರಲಿದ್ದಾರೆ.
"ಕೆಎಲ್ ರಾಹುಲ್ ನಮ್ಮೊಂದಿಗೆ ಉತ್ತಮ ವಾರವನ್ನು ಹೊಂದಿದ್ದರು, ನಾವು ಬಯಸಿದ ಮಾರ್ಗದಲ್ಲಿ ಅವರು ಉತ್ತಮವಾಗಿ ಮುನ್ನಡೆಯುತ್ತಿದ್ದಾರೆ. ಆದರೆ, ಪಂದ್ಯಾವಳಿಯ ಕ್ಯಾಂಡಿ ಲೆಗ್ನ ಮೊದಲ ಭಾಗಕ್ಕೆ ಅವರು ಅಲಭ್ಯರಾಗುತ್ತಾರೆ. ಎನ್ಸಿಎ ಅವರನ್ನು ನೋಡಿಕೊಳ್ಳುತ್ತದೆ," ಎಂದು ರಾಹುಲ್ ದ್ರಾವಿಡ್ ಹೇಳಿದ್ದರು.
"ನಾವು ಸೆಪ್ಟೆಂಬರ್ 4ರಂದು ಕೆಎಲ್ ರಾಹುಲ್ನನ್ನು ಮರುಮೌಲ್ಯಮಾಪನ ಮಾಡುತ್ತೇವೆ. ಅಲ್ಲಿನ ಫಲಿತಾಂಶದ ಅಧಾರದ ಮೇಲೆ ತಂಡಕ್ಕೆ ತೆಗೆದುಕೊಳ್ಳುತ್ತೇವೆ. ಸದ್ಯ ಉತ್ತಮ ಲಕ್ಷಣಗಳು ಕಂಡು ಬರುತ್ತಿದ್ದು, ಅವರು ಉತ್ತಮವಾಗಿ ಮುನ್ನಡೆಯುತ್ತಿದ್ದಾರೆ," ಎಂದು ರಾಹುಲ್ ದ್ರಾವಿಡ್ ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದರು.
ಪಾಕಿಸ್ತಾನ, ಭಾರತ ಮತ್ತು ನೇಪಾಳ ತಂಡಗಳು ಎ ಗುಂಪಿನಲ್ಲಿದ್ದರೆ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಬಿ ಗುಂಪಿನಲ್ಲಿವೆ. ಈ ಬಾರಿಯ ಏಷ್ಯಾ ಕಪ್ ಪಂದ್ಯಾವಳಿಯು ವಿಶಿಷ್ಟ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು, ಪಾಕಿಸ್ತಾನವು ಎರಡು ಸ್ಥಳಗಳಲ್ಲಿ ನಾಲ್ಕು ಪಂದ್ಯಗಳನ್ನು ಆಯೋಜಿಸಲಿದ್ದರೆ, ಶ್ರೀಲಂಕಾ ಫೈನಲ್ ಸೇರಿದಂತೆ ಉಳಿದ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.
ಗುಂಪು ಹಂತದ ಪಂದ್ಯಗಳ ನಂತರ, ಸೂಪರ್ 4ರ ಹಂತವು ಸೆಪ್ಟೆಂಬರ್ 6ರಿಂದ ಪ್ರಾರಂಭವಾಗಲಿದೆ. ಫೈನಲ್ ಪಂದ್ಯವನ್ನು ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ಆಯೋಜಿಸಲಾಗುತ್ತದೆ. ಏಕೆಂದರೆ ಸೂಪರ್ 4 ಹಂತದಿಂದ ಅಗ್ರ ಎರಡು ತಂಡಗಳು ಟ್ರೋಫಿಗಾಗಿ ಪರಸ್ಪರರ ವಿರುದ್ಧ ಸೆಣಸಾಡಲಿವೆ.