
ಹೈದರಾಬಾದ್, ಮೇ 13: ಮುಂಬೈ ಇಂಡಿಯನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದು ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದ್ದು, ತಂಡದ ಅದ್ಭುತ ಯಶಸ್ಸಿನ ಹಿಂದ ವೇಗಿ ಜಸ್ಪ್ರೀತ್ ಬುಮ್ರಾ ಕೂಡ ಭರ್ಜರಿ ಕೊಡುಗೆ ನೀಡಿದ್ದಾರೆ.
ವಿಭಿನ್ನ ಬೌಲಿಂಗ್ ಶೈಲಿ ಹೊಂದಿರುವ 25 ವರ್ಷದ ಬಲಗೈ ವೇಗದ ಬೌಲರ್, ಡೆತ್ ಓವರ್ಗಳಲ್ಲಿ ಬ್ಯಾಟ್ಸ್ಮನ್ಗಳಿಗೆ ಸಿಂಹ ಸ್ವಪ್ನವಾಗಿದ್ದಾರೆ. ಐಪಿಎಲ್ನ ಹಲವು ಪಂದ್ಯಗಳಲ್ಲಿ ಬುಮ್ರಾ ಅವರ ಡೆತ್ ಬೌಲಿಂಗ್ ಪರಾಕ್ರಮ ಇದಕ್ಕೆ ಸಾಕ್ಷಿ. ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಬುಮ್ರಾ ತಮ್ಮ ಕರಾಮತ್ತು ಪ್ರದರ್ಶಿಸಿ, 4 ಓವರ್ಗಳಲ್ಲಿ 14ಕ್ಕೆ 2 ವಿಕೆಟ್ಗಳನ್ನು ಉರುಳಿಸುವ ಮೂಲಕ ಪಂದ್ಯ ಶ್ರೇಷ್ಠ ಗೌರವ ಪಡೆದಿದ್ದರು.
ಇನ್ನು ಮುಂಬೈ ಇಂಡಿಯನ್ಸ್ ಮೆಂಟರ್ ಹಾಗೂ ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಯುವ ವೇಗಿ ಬುಮ್ರಾ ಅವರ ಪ್ರತಿಭೆಯನ್ನು ಕೊಂಡಾಡಿದ್ದು, ಸದ್ಯ ವಿಶ್ವ ಕ್ರಿಕೆಟ್ನ ಶ್ರೇಷ್ಠ ವೇಗದ ಬೌಲರ್ ಎಂದು ಪ್ರಶಂಸೆಗಳ ಸುರಿಮಳೆಗೈದಿದ್ದಾರೆ.
"ಸದ್ಯಕ್ಕೆ ದಾಖಲೆಗಳನ್ನು ಗಮನಿಸಿದರೆ ವಿಶ್ವ ಕ್ರಿಕೆಟ್ನಲ್ಲಿ ಬುಮ್ರಾ ಈಗಿನ ಶ್ರೇಷ್ಠ ಬೌಲರ್. ಅಂದಹಾಗೆ ಅವರಲ್ಲಿನ ಶ್ರೇಷ್ಠ ಪ್ರದರ್ಶನ ಇನ್ನು ಹೊರಬರುವುದು ಬಾಕಿ ಇದೆ. ಮುಂಬರುವ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲೀ ಬುಮ್ರಾ ಭಾರತ ತಂಡದ ಯಶಸ್ಸಿನ ಹಿಂದೆ ಮಹತ್ವದ ಪಾತ್ರ ವಹಿಸಲಿದ್ದಾರೆ,'' ಎಂದು ಮಾಸ್ಟರ್ ಬ್ಲಾಸ್ಟರ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
IPL: ಅಂಪೈರ್ ಪ್ರಮಾದಕ್ಕೆ ಪ್ರತಿಕ್ರಿಯಿಸಿದ ಪೊಲಾರ್ಡ್ಗೆ ದಂಡ!
"ಬುಮ್ರಾ ಅವರ ಬೌಲಿಂಗ್ ಶೈಲಿಯೇ ವಿಭಿನ್ನವಾಗಿದೆ. ಹೀಗಾಗಿ ಬ್ಯಾಟ್ಸ್ಮನ್ಗಳಿಗೆ ಅವರು ಯಾವ ವೇಗದಲ್ಲಿ ಚೆಂಡನ್ನು ಎಸೆಯಲಿದ್ದಾರೆ ಎಂಬುದನ್ನು ಅಂದಾಜಿಸುವುದು ಬಹಳಾ ಕಷ್ಟ. ಅವರ ವೃತ್ತಿ ಬದುಕಿನಲ್ಲಿ ಶ್ರೇಷ್ಠ ಬೌಲಿಂಗ್ ದಾಳಿಯನ್ನು ಸಂಘಟಿಸುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ,'' ಎಂದು ಇದೇ ವೇಳೆ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.
'ಒಂದು ಎಸೆತದ ಬಗ್ಗೆಯಷ್ಟೇ ಆಲೋಚಿಸುತ್ತೇನೆ'
ಇದೇ ವೇಳೆ ಡೆತ್ ಬೌಲಿಂಗ್ನಲ್ಲಿನ ತಮ್ಮ ಸ್ಥಿರ ಪ್ರದರ್ಶನದ ಕುರಿತಾಗಿ ಮಾತನಾಡಿದ ಬುಮ್ರಾ, "ಬೇರೆಲ್ಲಾ ಸಂಗತಿಗಳ ಕುರಿತಾಗಿ ನಾನು ಆಲೋಚಿಸುವುದಿಲ್ಲ. ಕೇವಲ ಒಂದು ವಿಷಯವನ್ನಷ್ಟೇ ಆಲೋಚಿಸುತ್ತೇನೆ. ಹಿಂದಿನ ಎಸೆತಗಳೆಲ್ಲವನ್ನೂ ಮರೆತು. ಮುಂದೆ ಎಸೆಯಬೇಕಾಗಿರುವ ಕಡೆಗಷ್ಟೇ ಗಮನ ನೀಡುತ್ತೇನೆ. ಇದನ್ನು ಹೊರತು ಪಡಿಸಿ ಬೇರೆಡೆಗೆ ಗಮನ ನೀಡಿದರೆ ಅನಗತ್ಯವಾಗಿ ಒತ್ತಡ ಹೆಚ್ಚಾಗುತ್ತದೆ. ಹೀಗಾಗಿ ಏಕಾಗ್ರತೆ ಮುಂದಿನ ಎಸೆತದ ಮೇಲಿದ್ದರೆ ಒತ್ತಡ ಇಲ್ಲವಾಗಿ, ಗುರಿಯನ್ನು ಎದುರು ನೋಡಲು ಸಾಧ್ಯವಾಗುತ್ತದೆ,'' ಎಂದು ಏಕದಿನ ಕ್ರಿಕೆಟ್ನ ನಂ.1 ಬೌಲರ್ ಹೇಳಿಕೊಂಡಿದ್ದಾರೆ.