ನೆಲ್ಲೂರು, ನ.16: ಕ್ರಿಕೆಟ್ ವೃತ್ತಿ ಬದುಕಿಗೆ ಸಚಿನ್ ತೆಂಡೂಲ್ಕರ್ ಅವರು ವಿದಾಯ ಹೇಳಿದ ಒಂದು ವರ್ಷದ ತುಂಬಿದ ದಿನದಂದು ಸದಾ ನೆನಪಿನಲ್ಲಿ ಉಳಿಯಬಲ್ಲ ಸತ್ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಪ್ರಧಾನಿ ಮೋದಿ ಅವರ ಕರೆಗೆ ಓಗೊಟ್ಟು ರಾಜ್ಯ ಸಭಾ ಸದಸ್ಯ ಸಚಿನ್ ಅವರು ಆಂಧ್ರಪ್ರದೇಶದ ಗ್ರಾಮವನ್ನು ಭಾನುವಾರ ದತ್ತು ಸ್ವೀಕರಿಸಿದ್ದಾರೆ.
ನರೇಂದ್ರ ಮೋದಿ ಅವರ ಕರೆಗೆ ಬೆಲೆ ಕೊಟ್ಟು ಸಚಿನ್ ಅವರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಈ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಸಚಿನ್ ರನ್ನು ಹಾಡಿ ಹೊಗಳಿದ್ದರು. ಇದಾದ ಬೆನ್ನಲ್ಲೇ ಸಚಿನ್ ಅವರು ಆದರ್ಶ್ ಸಂಸದ್ ಗ್ರಾಮ ಯೋಜನೆಯಡಿಯಲ್ಲಿ ಗ್ರಾಮವನ್ನು ದತ್ತು ಪಡೆಯಲಿ ಎಂದು ಮೋದಿ ಅವರು ಸೂಚಿಸಿದ್ದರು. ಅದರಂತೆ ಆಂಧ್ರಪ್ರದೇಶದ ಕುಗ್ರಾಮವೊಂದನ್ನು ಆಯ್ಕೆ ಮಾಡಿರುವುದಾಗಿ ಅಕ್ಟೋಬರ್ ನಲ್ಲಿ ಸಚಿನ್ ಟ್ವೀಟ್ ಮಾಡಿದ್ದರು. [ದಿಗ್ಗಜರ ಸಮಾಗಮಕ್ಕೆ ಕಾರಣವಾದ ಸ್ವಚ್ಛ ಭಾರತ]

ಮೋದಿ ಅವರ ಕೋರಿಕೆ ಮನ್ನಿಸಿದ ಸಚಿನ್ ತೆಂಡೂಲ್ಕರ್ ಅವರು ಸಂಸದ್ ಆದರ್ಶ್ ಗ್ರಾಮ ಅಡಿಯಲ್ಲಿ ಆಂಧ್ರಪ್ರದೇಶದ ಗುಡೂರು ಮಂಡಲದ ಪುಟ್ಟಂರಾಜು ಕಾಂಡ್ರಿಕಾ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ. ಸಂಸದರ ನಿಧಿಯಿಂದ ಗ್ರಾಮದ ಅಭಿವೃದ್ಧಿಗಾಗಿ 4 ಕೋಟಿ ರು ನೀಡಲು ಸಚಿನ್ ಮುಂದಾಗಿದ್ದು, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. [ಮೋದಿಗೆ ಸಚಿನ್ ರಿಂದ 'ಆರೋಗ್ಯ'ಕರ ಸಲಹೆ]
ಶನಿವಾರವೇ ನೆಲ್ಲೂರು ಸಮೀಪದ ಕೃಷ್ಣಪಟ್ಟಣಂ ಬಂದರಿಗೆ ಆಗಮಿಸಿದ ಸಚಿನ್ ಅವರು ಭಾನುವಾರ ತಾವು ದತ್ತು ತೆಗೆದುಕೊಂಡ ಗ್ರಾಮಕ್ಕೆ ಭೇಟಿ ಅಲ್ಲಿನ ಹಳ್ಳಿಗರ ಜೊತೆ ಮಾತುಕತೆ ನಡೆಸಿದರು. ರಸ್ತೆ, ಕುಡಿಯುವ ನೀರು, ಅರೋಗ್ಯ ಕೇಂದ್ರ, ವಿದ್ಯುತ್ ಪೂರೈಕೆ, ನೀರಾವರಿ, ಸಮುದಾಯ ಭವನ, ಹೈಸ್ಕೂಲ್ ಅಲ್ಲದೆ ವೈ ಫೈ ಸೌಲಭ್ಯ ನೀಡಲು ಸಚಿನ್ ಅವರು ಮುಂದಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶ್ರೀಕಾಂತ್ ಹೇಳಿದ್ದಾರೆ.