
ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಸೋಮವಾರ (ಅ.26)ದಂದು ಟೀಮ್ ಇಂಡಿಯಾ ಆಟಗಾರರನ್ನು ಆಯ್ಕೆ ಮಾಡಲಾಯಿತು. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಮುನ್ನೆಡೆಯಲಿರುವ ಟಿ20, ಏಕದಿನ ಮತ್ತು ಟೆಸ್ಟ್ ತಂಡಗಳನ್ನು ಬಿಸಿಸಿಐ ಹಿರಿಯ ಆಟಗಾರರ ಆಯ್ಕೆ ಸಮಿತಿಯು ಪ್ರಕಟಿಸಿತು.
ಆದರೆ ತಂಡಗಳ ಪ್ರಕಟದ ಬಳಿಕ ಸೂರ್ಯಕುಮಾರ್ ಯಾದವ್ ಮತ್ತು ಆಲ್ರೌಂಡರ್ ಅಕ್ಷರ್ ಪಟೇಲ್ ಆಯ್ಕೆ ಮಾಡದೇ ಇರದ ಕುರಿತು ಭಾರೀ ಟೀಕೆಗಳು ವ್ಯಕ್ತವಾಯಿತು. ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್, ಮನೋಜ್ ತಿವಾರಿ ಬಹಿರಂಗವಾಗಿಯೇ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇನ್ ಫಾರ್ಮ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅದ್ಭುತ ಆಟವಾಡುತ್ತಿದ್ದು, ಅವರನ್ನು ತಂಡಕ್ಕೆ ಆಯ್ಕೆ ಮಾಡದೇ ಇರುವುದರ ಕುರಿತು ಇದೀಗ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಆಯ್ಕೆದಾರರ ಪಕ್ಷಪಾತದ ಬಗ್ಗೆ ಸಂತಸಪಡದ ಸ್ಟ್ರೈರಿಸ್ ಆಯ್ಕೆದಾರರು ಮತ್ತು ವ್ಯವಸ್ಥಾಪಕರ ಮೇಲೆ ತಮಾಷೆ ಮಾಡಿದರು. ಸೂರ್ಯಕುಮಾರ್ ಯಾದವ್ ಅವರು ಹೆಸರು ಮಾಡಲು ಬಯಸಿದರೆ ವಿದೇಶಕ್ಕೆ ಹೋಗಬೇಕಾಗಬಹುದು ಎಂದು ಹೇಳಿದರು. ಈ ಮೂಲಕ ನ್ಯೂಜಿಲೆಂಡ್ ಪರ ಬೇಕಾದರೂ ಆಡಲಿ ಎಂದು ಪರೋಕ್ಷವಾಗಿ ನುಡಿದರು.
"ಸೂರ್ಯಕುಮಾರ್ ಯಾದವ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು, ಹೆಸರು ಮಾಡಲು ಬಯಸಿದರೆ ವಿದೇಶಕ್ಕೆ ಹೋಗಬಹುದೇ" ಎಂದು ಸ್ಟೈರಿಸ್ ಟ್ವೀಟ್ ಮಾಡಿದ್ದಾರೆ.
ಸೂರ್ಯಕುಮಾರ್ ಅವರ ಇತ್ತೀಚಿನ ಕೆಲ ವರ್ಷಗಳ ಬ್ಯಾಟಿಂಗ್ ಪ್ರದರ್ಶನವು ಹಲವರ ಹುಬ್ಬೇರಿಸುವಂತೆ ಮಾಡಿದೆ. ಬಲಗೈ ಬ್ಯಾಟ್ಸ್ಮನ್ ಕಳೆದ 2-3 ವರ್ಷಗಳಿಂದ ದೇಶೀಯ ಕ್ರಿಕೆಟ್ನಲ್ಲೂ ಮತ್ತು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಇದುವರೆಗೂ ಸೂರ್ಯಕುಮಾರ್ ಯಾದವ್ಗೆ ಟೀಮ್ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿಲ್ಲ.
ಮುಂಬೈ ಇಂಡಿಯನ್ಸ್ ತಂಡದ ಇನ್ಫಾರ್ಮ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಕಳೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 43 ಎಸೆತಗಳಲ್ಲಿ ಅಜೇಯ 79 ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ಐದು ಎಸೆತಗಳು ಬಾಕಿ ಇರುವಂತೆಯೇ 165 ರನ್ ಗಳಿಸಿತು. 183.72 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ಗಳಿದ್ದವು.