
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೇದಾ ಕೃಷ್ಣಮೂರ್ತಿ ನಾಯಕತ್ವದ ಕರ್ನಾಟಕದ ಹಿರಿಯ ಮಹಿಳಾ ಟಿ20 ತಂಡವು ದಿನಾಂಕ 11-10-2022 ರಿಂದ ಗುಜರಾತ್ನ ಸೂರತ್ನಲ್ಲಿ ನಡೆಯುವ ಪಂದ್ಯಾವಳಯಲ್ಲಿ ಭಾಗವಹಿಸುತ್ತಿದ್ದು, ಶಿವಮೊಗ್ಗದ ಪ್ರತಿಭಾನ್ವಿತ ಮಹಿಳಾ ಕ್ರಿಕೆಟ್ ಆಲ್ರೌಂಡರ್ ಆದ ಕು. ಅದಿತಿ ರಾಜೇಶ್ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಶ್ರಯದ ಹೈದರಾಬಾದ್ನಲ್ಲಿ ನಡೆಯಲಿರುವ ರಾಷ್ಟ್ರೀಯ 19 ವರ್ಷ ವಯೋಮಿತಿಯೊಳಗಿನ ಮಹಿಳಾ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯದಿಂದ ಕು. ಸಿಜೆ ನಿರ್ಮಿತಾ ಇವರು ಕೂಡ ಆಲ್ರೌಂಡರ್ ಆಗಿ ಆಯ್ಕೆಯಾಗಿದ್ದಾರೆ.
ಈ ಇಬ್ಬರು ಕ್ರಿಕೆಟ್ ಆಟಗಾರ್ತಿಯರು ಪ್ರಸ್ತುತ ಡಿವಿಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರ, ಶಿವಮೊಗ್ಗದ ಕ್ರಿಕೆಟ್ ತರಬೇತುದಾರ ಪಿ.ವಿ ನಾಗರಾಜ್ ಇವರ ಬಳಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಮಹಿಳಾ ಕ್ರಿಕೆಟ್ ಕ್ರೀಡೆಯಲ್ಲಿ ತರಬೇತಿ ಪಡೆಯಲು ಆಸಕ್ತಿ ಇರುವ ಬಾಲಕಿಯರು ಈ ತರಬೇತುದಾರರನ್ನು ಮೊಬೈಲ್ ಸಂಖ್ಯೆ: 9964599936 ಮೂಲಕ ಸಂಪರ್ಕಿಸಬಹುದು.
ಮಹಿಳಾ ಟಿ20 ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದ ಈ ಪ್ರತಿಭಾವಂತ ಬಾಲಕಿಯರಿಗೆ ಕೆಎಸ್ಸಿಎ ಶಿವಮೊಗ್ಗ ವಲಯ ಸಂಚಾಲಕರಾದ ಡಿ.ಎಸ್ ಅರುಣ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ, ಸಿಬ್ಬಂದಿ ವರ್ಗದವರು ಹಾಗೂ ಹಿರಿಯ, ಕಿರಿಯ ಕ್ರೀಡಾಪಟುಗಳು ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಚ್ಚಿನ ಕೀರ್ತಿ ತರಲೆಂದು ಹಾರೈಸಿ, ಅಭಿನಂದಿಸಿದ್ದಾರೆ.