ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿಕೊಂಡು ಬರುತ್ತಿದೆ. ಭಾನುವಾರ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತ ಗೆಲುವು ಸಾಧಿಸುವ ಮೂಲಕ ತನ್ನ ಅಜೇಯ ಓಟವನ್ನು ಮುಂದುವರಿಸಿದ್ದು ಪ್ರಸ್ತುತ ಟೂರ್ನಿಯಲ್ಲಿ ನಂಬರ್ 1 ತಂಡವಾಗಿ ಮುನ್ನುಗ್ಗುತ್ತಿದೆ. ಈ ಮೂಲಕ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಕನಸಿಗೆ ಮತ್ತಷ್ಟು ಬಲ ಬಂದಿದೆ.
ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ಆಟಗಾರ ವೇಗದ ಬೌಲರ್ ಶೋಯೆಬ್ ಅಖ್ತರ್ ಟೀಮ್ ಇಂಡಿಯಾದ ಒಟ್ಟು ಪ್ರದರ್ಶನದ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ಆಟಗಾರರ ಪ್ರದರ್ಶನವನ್ನು ಹೊಗಳಿರುವ ಶೋಯೆಬ್ ಅಖ್ತರ್ ಈ ಬಾರಿ ಭಾರತ ಈ ವಿಶ್ವಕಪ್ ಟೂರ್ನಿ ಗೆಲ್ಲದೇ ಇರಲು ಕಾರಣಗಳೇ ಇಲ್ಲ ಎಂದಿದ್ದಾರೆ.

ಕೊಹ್ಲಿಯ ಆಟವನ್ನು ಕೊಂಡಾಡಿದ ಅಖ್ತರ್
ವಿರಾಟ್ ಕೊಹ್ಲಿ ಈ ವಿಶ್ವಕಪ್ನಲ್ಲಿ ನೀಡಿರುವ ಪ್ರದರ್ಶನವನ್ನು ವಿಶೇಷವಾಗಿ ಅಖ್ತರ್ ಪ್ರಶಂಸಿಸಿದ್ದಾರೆ. ಒತ್ತಡದ ಸಂದರ್ಭದಲ್ಲಿ ಪುಟಿದೇಳುವ ಸಾಮರ್ಥ್ಯ ಹೊಂದಿರುವ ಅಪರೂಪದ ಕ್ರಿಕೆಟಿಗ ಆತ. ಒತ್ತಡಗಳು ಆತನಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತವೆ. ಮತ್ತು ಅದರಿಂದಾಗಿ ಆತ ಶತಕಗಳನ್ನು, ಮ್ಯಾಚ್ ವಿನ್ನಿಂಗ್ ಪ್ರದರ್ಶನಗಳನ್ನು ನೀಡುತ್ತಾರೆ. ಈ ಮೂಲಕ ಆತನಿಗೆ ಇನ್ಸ್ಟಾಗ್ರಾಮ್ನಲ್ಲಿ ಫಾಲೋವರ್ಗಳು ಹೆಚ್ಚಾಗುತ್ತಾರೆ. ಖಂಡಿತವಾಗಿಯೂ ಆತ ಇದೆಲ್ಲದಕ್ಕೂ ಅರ್ಹವಾದ ಕ್ರಿಕೆಟಿಗ" ಎಂದಿದ್ದಾರೆ ಶೋಯೆಬ್ ಅಖ್ತರ್.
ಬಲಿಷ್ಠವಾಗಿಗೆ ಬ್ಯಾಟಿಂಗ್
"ನ್ಯೂಜಿಲೆಂಡ್ ತಂಡಕ್ಕೆ ಶುಬ್ಮನ್ ಗಿಲ್ ಸಾಕಾಗುತ್ತದೆ. ರೋಹಿತ್ ಶರ್ಮಾ ಸುಲಭವಾಗಿ ವಿಕೆಟ್ ಕೈಚೆಲ್ಲದಿದ್ದರೆ ಆತ ಕೂಡ ನ್ಯೂಜಿಲೆಂಡ್ ಮುಗಿಸಲು ಸಾಕು. ಕೆಎಲ್ ರಾಹುಲ್ ಮೂರು ಅಥವಾ ನಾಲ್ಕನೇ ಕ್ರಮಂಖದಲ್ಲಿ ಆಡಲಿಳಿದರೆ ಆತನೂ ಸಾಕಾಗಬಲ್ಲ. ಹೀಗೆ ಭಾರತದ ಬ್ಯಾಟಿಂಗ್ ಲೈನ್ಅಪ್ ಬಹಳ ದೀರ್ಘವಾಗಿದೆ" ಎಂದಿದ್ದಾರೆ ಶೋಯೆಬ್ ಅಖ್ತರ್.
ಶಮಿ ಬಗ್ಗೆ ಅಖ್ತರ್ ಮೆಚ್ಚುಗೆ
ಇನ್ನು ಇದೇ ಸಂದರ್ಭದಲ್ಲಿ ಅಖ್ತರ್ ಮೊಹಮ್ಮದ್ ಶಮಿ ಬೌಲಿಂಗ್ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ನ್ಯೂಜಿಲೆಂಡ್ ತಮಡ 300-350 ರನ್ಗಳನ್ನು ಗಳಿಸದಂತೆ ಕಡೆಯೊಡ್ಡಲು ಶಮಿ ಅವರ ಬೌಲಿಂಗ್ನ ಪಾತ್ರ ಮಹತ್ವದ್ದಾಗಿತ್ತು. ಆತ ಸ್ವಲ್ಪ ದುಬಾರಿ ಎನಿಸಿದ್ದರೂ ಐದು ವಿಕೆಟ್ಗಳ ಗೊಂಚಲು ಪಡೆದಿರುವುದರಿಂದಾಗಿ ಅದು ಸಂಗತಿಯಲ್ಲ. ಅವರು ತಮ್ಮ ಪ್ರತಿಭೆ ಏನು ಎನ್ನುವುದನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಇದೇ ರೀತಿಯ ಪ್ರದರ್ಶನವನ್ನು ಭಾರತ ಮುಂದುವರಿಸಬೇಕಿದೆ" ಎಂದಿದ್ದಾರೆ ಪಾಕ್ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್.
ಭಾರತ ಗೆಲ್ಲಲಿದೆ ಎಂದ ಅಖ್ತರ್
"ಭಾರತ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅತ್ಯಂತ ಬಲಿಷ್ಠವಾಗಿದೆ. ಪರಿಪೂರ್ಣವಾದ ತಂಡ ಎನಿಸಿಕೊಳ್ಳುತ್ತದೆ. ಹಾಗಾಗಿ ಈ ಬಾರಿಯ ವಿಶ್ವಕಪ್ನಲ್ಲಿ ಭಾತ ತಂಡ ಗೆಲುವು ಸಾಧಿಸದೇ ಇರಲು ಯಾವುದೇ ಕಾರಣಗಳು ಕೂಡ ನನಗೆ ಕಾಣಿಸುತ್ತಿಲ್ಲ" ಎಂದಿದ್ದಾರೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್.