
ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ಕರ್ನಾಟಕ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡವು ಅರುಣಾಚಲ ಪ್ರದೇಶವನ್ನು ಬ್ಯಾಟಿಂಗ್ ಆಹ್ವಾನಿಸಿತು. ಕರ್ನಾಟಕ ಬೌಲಿಂಗ್ ದಾಳಿಗೆ ನುಚ್ಚು ನೂರಾದ ಎದುರಾಳಿ ತಂಡವು ಕೇವಲ 75ರನ್ಗಳಿಗೆ ಆಲೌಟ್ ಆಗಿದೆ.
ಅರುಣಾಚಲ ಪ್ರದೇಶ ಪರ ರೋಹನ್ ಶರ್ಮಾ 18, ಸುರಜ್ ತಯಾಮ್ 11, ಕಂಶಾ ಯಾಂಗ್ಫೋ 16ರನ್ ಕಲೆಹಾಕಿದ್ದು ತಂಡದ ಪರ ಎರಡಂಕಿ ಗಡಿದಾಟಿದ್ದ ಬ್ಯಾಟರ್ಗಳಾಗಿದ್ದಾರೆ. ಇನ್ನುಳಿದ ಆಟಗಾರರು ಸಿಂಗಲ್ ಡಿಜಿಟ್ಗೆ ಔಟಾಗಿದ್ದಾರೆ. 19.2 ಓವರ್ಗಳಲ್ಲಿ ನೆಲಕಚ್ಚಿದ ಅರುಣಾಚಲ ಪ್ರದೇಶ 75ರನ್ಗೆ ಆಲೌಟ್ ಆಗಿದೆ.
ಕರ್ನಾಟಕ ಪರ ಬೊಂಬಾಟ್ ಬೌಲಿಂಗ್ ಮಾಡಿದ ವಿದ್ವತ್ ಕಾವೇರಪ್ಪ 4 ಓವರ್ಗೆ 33ರನ್ ನೀಡಿ 3 ವಿಕೆಟ್ ಕಬಳಿಸಿದ್ರೆ, ವಿ. ಕೌಶಿಕ್ 3.2 ಓವರ್ಗಳಲ್ಲಿ ಕೇವಲ 5ರನ್ ನೀಡಿ 3 ವಿಕೆಟ್ ಸಂಪಾದಿಸಿದರು. ಜೆ. ಸುಚಿತ್ 2 ವಿಕೆಟ್ ಪಡೆದು ಮಿಂಚಿದ್ರೆ, ವಿಜಯ್ಕುಮಾರ್ ವೈಶಾಖ್ ಮತ್ತು ಕೆ. ಗೌತಮ್ ತಲಾ 1 ವಿಕೆಟ್ ಪಡೆದರು.
ಇನ್ನು 76ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಒಂದು ವಿಕೆಟ್ ಸಹ ಕಳೆದುಕೊಳ್ಳದೆ 6.5 ಓವರ್ಗಳಲ್ಲೇ ಗುರಿ ತಲುಪುವ ಮೂಲಕ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಕರ್ನಾಟಕ ಪರ ನಾಯಕ ಮಯಾಂಕ್ ಅಗರ್ವಾಲ್ 21 ಎಸೆತಗಳಲ್ಲಿ ಅಜೇಯ 47ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್ನಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ಗಳಿದ್ದವು.
ಮಯಾಂಕ್ಗೆ ಉತ್ತಮ ಸಾಥ್ ನೀಡಿದ ದೇವದತ್ ಪಡಿಕ್ಕಲ್ 20 ಎಸೆತಗಳಲ್ಲಿ 28ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್ನಲ್ಲಿ 5 ಬೌಂಡರಿ ಒಳಗೊಂಡಿದ್ದವು.