
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ ಬಗ್ಗೆ ಖ್ಯಾತ ನಟಿ ಕಸ್ತೂರಿ ಶಂಕರ್ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಕೆ.ಎಲ್ ರಾಹುಲ್ ಧೈರ್ಯದಿಂದ ಪ್ರಭಾವಿತನಾಗಿದ್ದೇನೆ ಎಂದು ದಕ್ಷಿಣ ಭಾರತದ ಹಲವು ಭಾಷೆಗಳ ತಾರೆ ಹೊಗಳಿದ್ದಾರೆ.
ಇತ್ತೀಚೆಗೆ ಕೆಎಲ್ ರಾಹುಲ್ ಒಳಉಡುಪು ಜಾಹೀರಾತಿನಲ್ಲಿ ನಟಿಸಿದ್ದರು. ಅವರು ಕಂಪನಿಯೊಂದರ ಬ್ರಾಂಡ್ ಅಂಬಾಸಿಡರ್ ಆಗಿ ಮುಂದುವರಿದಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟಿಗರು ಇಂತಹ ಜಾಹೀರಾತುಗಳನ್ನು ಮಾಡಲು ಹೆಚ್ಚು ಇಷ್ಟಪಡುವುದಿಲ್ಲ. ಆದರೆ ರಾಹುಲ್, ಒಳಉಡುಪು ಕಂಪನಿಗೆ ಪ್ರಚಾರಕರಾಗಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ಇದು ನಟಿ ಕಸ್ತೂರಿ ಅವರನ್ನು ಮೆಚ್ಚಿಸಿದೆ. ಹೀಗಾಗಿಯೇ ಕೆ.ಎಲ್ ರಾಹುಲ್ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
''ಕ್ರಿಕೆಟಿಗರು ಸಾಮಾನ್ಯವಾಗಿ ಕೂಲ್ ಡ್ರಿಂಕ್ಸ್, ಚಿಪ್ಸ್, ಆನ್ಲೈನ್ ಗೇಮ್ಗಳು, ಜನಪ್ರಿಯ ಬಟ್ಟೆ ಬ್ರ್ಯಾಂಡ್ಗಳನ್ನು ಪ್ರಚಾರ ಮಾಡುವುದನ್ನು ಕಾಣಬಹುದು. ಆದರೆ ಒಳ ಉಡುಪುಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಲು ನಾಚಿಕೆಪಡುತ್ತಾರೆ. ಆದರೆ ರಾಹುಲ್ ಯಾವುದೇ ಮುಲಾಜಿಲ್ಲದೆ ಒಳಉಡುಪುಗಳೊಂದಿಗೆ ಕಾಣಿಸಿಕೊಂಡಿದ್ದಾರೆ.
ಈ ಬಾಕ್ಸರ್ಗಳಲ್ಲಿ ರಾಹುಲ್ನನ್ನು ನೋಡುವುದು ತುಂಬಾ ಸಂತೋಷವಾಯಿತು. ಇದು ಪುರುಷರ ಉಡುಪುಗಳಲ್ಲಿ ಅತ್ಯುತ್ತಮವಾಗಿ ಹೊರಹೊಮ್ಮುತ್ತದೆ ಎಂದು ನಾನು ನಂಬುತ್ತೇನೆ'' ಎಂದು ನಟಿ ಕಸ್ತೂರಿ ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ಸಾಕಷ್ಟು ವೈರಲ್ ಆಗಿದೆ.
90ರ ದಶಕದಲ್ಲಿ ತೆಲುಗಿನ ಜೊತೆಗೆ ತಮಿಳು, ಕನ್ನಡದಲ್ಲೂ ನಟಿಸಿ ದಕ್ಷಿಣ ಭಾರತದಲ್ಲಿ ಅಭಿಮಾನಿಗಳನ್ನು ಗಳಿಸಿದ್ದ ಕಸ್ತೂರಿ, ಕಿರುತೆರೆಯ ಜನಪ್ರಿಯ ಧಾರಾವಾಹಿ ಗೃಹಲಕ್ಷ್ಮಿಯೊಂದಿಗೆ ಪ್ರತಿದಿನ ತೆಲುಗು ಅಭಿಮಾನಿಗಳ ಮನ ಗೆದ್ದಿದ್ದಾರೆ.
ಕಸ್ತೂರಿ ಈ ರೀತಿ ವಿಭಿನ್ನ ಆಲೋಚನೆಯ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಕಸ್ತೂರಿ ಸದ್ಯ ವಿಜಯ್ ಆಂಟೋನಿ ತಮಿಳರಸನ್, ಉನ್ ಕಾದಲ್ ಇರುಂದಾಲ್ ಸೇರಿದಂತೆ ಹಲವು ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.