
ಕೊಲಂಬೋ, ಮೇ 2: ವೇಗಿ ಲಸಿತ್ ಮಾಲಿಂಗ ಬಗ್ಗೆ ಶ್ರೀ ಲಂಕಾ ಕ್ರಿಕೆಟ್ ಆಯ್ಕೆ ಸಮಿತಿ ಅಸಮಾಧಾನಗೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮಾಲಿಂಗ ಮುಂಬೈ ಬೌಲಿಂಗ್ ಮಾರ್ಗದರ್ಶಿಯಾಗಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಅದು ದೂರಿದೆ.
ಮಾತ್ರವಲ್ಲ ಒಂದೋ ರಾಷ್ಟ್ರೀಯ ಪಂದ್ಯದಲ್ಲಿ ಆಡು; ಇಲ್ಲವೆ ರಾಷ್ಟ್ರೀಯ ತಂಡದಲ್ಲಿ ಆಯ್ಕೆಯನ್ನೇ ಮರೆತುಬಿಡು ಎಂದು ಮಾಲಿಂಗಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಖಡಕ್ ಎಚ್ಚರಿಕೆಯನ್ನೂ ನೀಡಿದೆ.
ರಾಷ್ಟ್ರೀಯ ಪಂದ್ಯಕ್ಕಾಗಿ 34ರ ಹರೆಯದ ಮಾಲಿಂಗ ಅವರ ಹೆಸರನ್ನು ಶ್ರೀಲಂಕಾ ಕ್ರಿಕೆಟ್ ಸಮಿತಿ ಪ್ರಕಟಿಸಿದೆ. ಆದರೆ ಸದ್ಯ ಐಪಿಎಲ್ ನಲ್ಲಿ ತೊಡಗಿರುವ ಮಾಲಿಂಗ ಐಪಿಎಲ್ ಮುಗಿಯುವವರೆಗೂ ಯಾವುದೇ ರಾಷ್ಟ್ರೀಯ ಪಂದ್ಯಾಟದಲ್ಲೂ ಪಾಲ್ಗೊಳ್ಳುವುದಿಲ್ಲ ಎಂದಿದ್ದರು.
ಇತ್ತೀಚೆಗೆ ಈ ಬಗ್ಗೆ ವೀಡಿಯೋ ಸಂದೇಶದಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದ ಮಾಲಿಂಗ ಜುಲೈ ತಿಂಗಳಲ್ಲಿನ ಸೌತಾಫ್ರಿಕಾ-ಶ್ರೀಲಂಕಾ ಪಂದ್ಯದ ಸಂದರ್ಭ ತಾನು ಮರಳಿ ತಂಡವನ್ನು ಸೇರಿಕೊಳ್ಳುವುದಾಗಿಯೂ ವೀಡಿಯೋದಲ್ಲಿ ಉಲ್ಲೇಖಿಸಿದ್ದರು.
ಈ ಬಗ್ಗೆ ಮಾತನಾಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ತಿಲಂಗಾ ಸುಮತಿಪಾಲ, 'ಮಾಲಿಂಗ ಅವರನ್ನು ಅಂತಾರಾಷ್ಟ್ರೀಯ ಟಿ20 ಪಂದ್ಯಾಟಗಳಿಗೆ ಬಳಸಿಕೊಳ್ಳುವುದು ಒಳ್ಳೆಯದೆಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.
ಮಾತು ಮುಂದುವರೆಸಿದ ತಿಲಂಗಾ, 'ಮಾಲಿಂಗ ಐಪಿಎಲ್ ನಲ್ಲಿ ಪಂದ್ಯವನ್ನಾಡುತ್ತಿದ್ದರೆ ನಮ್ಮದೇನೂ ಅಭ್ಯಂತರವಿರಲಿಲ್ಲ. ಆದರೆ ಅವರು ಪಂದ್ಯವನ್ನಾಡುತ್ತಿಲ್ಲ. ಬದಲಿಗೆ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಅವರ ಕ್ಷಮತೆ ಕುಗ್ಗುವ ಸಾಧ್ಯತೆಯಿದೆ' ಎಂದರು.
ಈ ಐಪಿಎಲ್ ಆವೃತ್ತಿಯ ಆಟಗಾರರ ಹರಾಜಿನ ವೇಳೆ ಮಾಲಿಂಗ ಖರೀದಿಯಾಗಿರಲಿಲ್ಲ. ಆದರೆ ಮುಂಬೈ ಫ್ರಾಂಚೈಸಿ ಮಾಲಿಂಗಾ ಅವರನ್ನು ತಂಡದ ಬೌಲಿಂಗ್ ಮಾರ್ಗದರ್ಶಿಯಾಗಿ ಆಯ್ಕೆ ಮಾಡಿಕೊಂಡಿತ್ತು.