
ಬೆಂಗಳೂರು, ಜೂನ್ 17 : ಚೆಂಡು ವಿರೂಪ ಪ್ರಕರಣ ಮತ್ತೊಮ್ಮೆ ಜೀವ ಪಡೆದುಕೊಂಡಿದೆ. ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಆಟಗಾರರ ಮೇಲೆ ಚೆಂಡು ವಿರೂಪ ಮಾಡಿದ ಆರೋಪ ಕೇಳಿ ಬಂದಿದೆ. ಆದರೆ, ಈ ರೀತಿ ಯಾವುದೇ ಕೃತ್ಯ ಎಸಗಿಲ್ಲ ಎಂದು ಶ್ರೀಲಂಕಾ ಆಟಗಾರರು ಆರೋಪವನ್ನು ತಳ್ಳಿ ಹಾಕಿದ್ದಾರೆ.
2ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ವಿಂಡೀಸ್ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಅಂಪೈರ್ ಗಳಾದ ಅಲೀಂ ದಾರ್ ಹಾಗೂ ಗೌಲ್ಡ್ ಚೆಂಡು ಬದಲಾವಣೆ ಮಾಡಲು ಮುಂದಾದರು. ಜೊತೆಗೆ ವಿಂಡೀಸ್ ಗೆ 5 ಪೆನಾಲ್ಟಿ ರನ್ ನೀಡಲು ನಿರ್ಧರಿಸಿದರು. ಇದನ್ನು ಪ್ರತಿಭಟಿಸಿದ ಲಂಕಾ ಕ್ರಿಕೆಟಿಗರು, 2ನೇ ದಿನದಂದು ಬಳಸಿದ ಚೆಂಡನ್ನು ಬಳಸುವಂತೆ ಕೋರಿ, ಮೈದಾನಕ್ಕೆ ಇಳಿಯಲು ನಿರಾಕರಿಸಿದರು.
ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಅವರು ಮಧ್ಯ ಪ್ರವೇಶಿಸಿ, ಮಾತುಕತೆ ನಡೆಸಿದ ಬಳಿಕ, ಎರಡು ಗಂಟೆಗಳು ತಡವಾಗಿ,ಪಂದ್ಯ ಆರಂಭವಾಯಿತು.
ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಲಂಕಾ 253 ರನ್ ಗಳಿಸಿದ್ದರೆ, ವಿಂಡೀಸ್ 2ನೇ ದಿನದಂತ್ಯಕ್ಕೆ 2 ವಿಕೆಟ್ಗೆ 123 ರನ್ ಗಳಿಸಿ 130 ರನ್ ಹಿನ್ನಡೆಯಲ್ಲಿದೆ.
2016-17ರಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ಅವರು ಚೆಂಡು ವಿರೂಪಗೊಳಿಸಿದ ಆರೋಪ ಹೊತ್ತುಕೊಂಡಾಗ, ಇಂಥದ್ದೇ ಘಟನೆ ನಡೆದಿತ್ತು.