
ಐಸಿಸಿ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ಗೂ ತಲುಪದೆ ಬರಿಗೈನಲ್ಲಿ ತವರಿಗೆ ವಾಪಸ್ಸಾಗಿರುವ ಶ್ರೀಲಂಕಾ ತಂಡವು ಈಗಾಗಲೇ ತನ್ನ ಕ್ರಿಕೆಟಿಗನ ವಿರುದ್ಧ ಎದುರಾಗಿರುವ ಲೈಂಗಿಕ ದೌರ್ಜನ್ಯ ಕೇಸ್ನಿಂದಾಗಿ ಭಾರೀ ಟೀಕೆಗೆ ಗುರಿಯಾಗಿದೆ. ಜೊತೆಗೆ ಈಗಾಗಲೇ ಬಂಧಿತನಾಗಿರುವ ದನುಷ್ಕ ಗುಣತಿಲಕ ಜಾಮೀನೂ ಅರ್ಜಿ ಕೂಡ ನಿರಾಕರಣೆಯಾಗಿದೆ.
ಟಿ20 ವಿಶ್ವಕಪ್ಗಾಗಿ ಆಸ್ಟ್ರೇಲಿಯಾಗೆ ಬರುವ ಮುನ್ನವೇ ಡೇಟಿಂಗ್ ಆ್ಯಪ್ ಮೂಲಕ ಆಸ್ಟ್ರೇಲಿಯಾ ಮೂಲದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಶ್ರೀಲಂಕಾ ಕ್ರಿಕೆಟಿಗ, ಆಕೆಯ ಒಪ್ಪಿಗೆ ಇಲ್ಲದೆ ಲೈಂಗಿಕ ದೌರ್ಜನ್ಯ ಎಸಗಿದ್ದು, ನೊಂದ ಯುವತಿಯ ದೂರಿನ ಆಧಾರದ ಮೇಲೆ ಧನುಷ್ಕ ಗುಣತಿಲಕನನ್ನು ಬಂಧಿಸಿ ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಆದ್ರೆ ಇತ್ತೀಚಿನ ಅಪ್ಡೇಟ್ ಪ್ರಕಾರ ಗುಣತಿಲಕಗೆ ಜಾಮೀನು ನೀಡಲು ಸಿಡ್ನಿ ನ್ಯಾಯಾಲಯ ನಿರಾಕರಿಸಿದೆ.
ನವೆಂಬರ್ ತಿಂಗಳ ಆರಂಭದಲ್ಲಿ 29 ವರ್ಷದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪವನ್ನು ಧನುಷ್ಕ ಗುಣತಿಲಕ ಎದುರಿಸುತ್ತಿದ್ದಾರೆ. ಯುವತಿಯ ಒಪ್ಪಿಗೆ ಇಲ್ಲದೆ ನಾಲ್ಕು ಬಾರಿ ಲೈಂಗಿಕ ಸಂಭೋಗದ ಆರೋಪವನ್ನ ಹೊತ್ತಿರುವ ಗುಣತಿಲಕನನ್ನು ಸಿಡ್ನಿಯಲ್ಲಿರುವ ಹೋಟೆಲ್ನಲ್ಲಿಯೇ ಬಂಧಿಸಲಾಯಿತು. ಈಗಾಗಲೇ ಶ್ರೀಲಂಕಾದ ತಂಡದ ಇತರೆ ಆಟಗಾರರು ತವರಿಗೆ ವಾಪಸ್ಸಾಗಿದ್ದು, ಧನುಷ್ಕ ಗುಣತಿಲಕ ಜಾಮೀನು ನಿರಾಕರಣೆ ಹಿನ್ನಲೆಯಲ್ಲಿ ಕಂಬಿ ಎಣಿಸುವಂತಾಗಿದೆ.
ಡೌನಿಂಗ್ ಸೆಂಟರ್ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರಾದ ರಾಬರ್ಟ್ ವಿಲಿಯಮ್ಸ್ ಗುಣತಿಲಕ ಯಾವುದೇ ಅಪರಾಧ ಹಿನ್ನಲೆಯನ್ನು ಹೊಂದಿಲ್ಲದಿದ್ದರೂ, ಬಿಡುಗಡೆ ಮಾಡಲು ನಿರಾಕರಿಸಿದರು. ಜಾಮೀನಿಗಾಗಿ ಗುಣತಿಲಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು ಎಂದು ಸುದ್ದಿ ಮೂಲಗಳು ಅಸೋಸಿಯೇಟೆಟ್ ಪ್ರೆಸ್ಗೆ ಸೋಮವಾರ ತಿಳಿಸಿವೆ ಎಂದು ವರದಿಯಾಗಿದೆ.
ಗುಣತಿಲಕ ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ಭಾನುವಾರ ರಾತ್ರಿ ಸಿಡ್ನಿಯ ಸರ್ರೆ ಹಿಲ್ಸ್ ಪೊಲೀಸ್ ಸ್ಟೇಷನ್ನಲ್ಲಿ ಕಾಲಕಳೆದಿದ್ದಾರೆ. ಸೋಮವಾರ ಕೈಗೆ ಬೇಡಿಯೊಂದಿಗೆ ಮತ್ತು ಬೂದು ಬಣ್ಣದ ಟೀ ಶರ್ಟ್ನಲ್ಲಿ ವೀಡಿಯೋ ಲಿಂಕ್ ಮೂಲಕ ಸಿಡ್ನಿ ಕೋರ್ಟ್ಗೆ ಆತನನ್ನು ಹಾಜರುಪಡಿಸಲಾಯಿತು.
ಜಾಮೀನು ನಿರಾಕರಣೆ ಬಳಿಕ ಗುಣತಿಲಕ ಪರ ವಕೀಲರಾದ ಆನಂದ ಅಮರನಾಥ್ ಮಾತನಾಡಿದ್ದು, ''ನ್ಯಾಯಾಲಯದ ತೀರ್ಪಿನಿಂದ ಬೇಸರವಾಗಿದ್ದೇವೆ, ನಮ್ಮ ಕಕ್ಷಿದಾರನು ನ್ಯೂ ಸೌತ್ ವೇಲ್ಸ್ನ ರಾಜ್ಯ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ'' ಎಂದು ಹೇಳಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮತ್ತು ಶ್ರೀಲಂಕಾದ ಹೈ ಕಮಿಷನರ್ ಬೆಂಬಲವಿದ್ದು, ಗುಣತಿಲಕಗೆ ಧೈರ್ಯ ನೀಡಿದ್ದಾರೆ ಎಂದು ಇದೇ ವೇಳೆಯಲ್ಲಿ ವಕೀಲರು ತಿಳಿಸಿದ್ದಾರೆ.
ಇನ್ನು ಧನುಷ್ಕ ಗುಣತಿಲಕ ಜಾಮೀನು ಅರ್ಜಿ ತಿರಸ್ಕಾರಗೊಳ್ಳುತ್ತಿದ್ದಂತೆ, ತಕ್ಷಣವೇ ಜಾರಿಗೆ ಬರುವಂತೆ ಗುಣತಿಲಕನನ್ನು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ಆತನನ್ನು ವಜಾಗೊಳಿಸಿದೆ.
"ಶ್ರೀಲಂಕಾ ಕ್ರಿಕೆಟ್, ಆಟಗಾರನ ಯಾವುದೇ ನಡವಳಿಕೆಗೆ "ಶೂನ್ಯ ಸಹಿಷ್ಣುತೆ" ನೀತಿಯನ್ನು ಅಳವಡಿಸಿಕೊಳ್ಳುತ್ತದೆ ಎಂದು ಒತ್ತಿಹೇಳಲು ಬಯಸುತ್ತದೆ ಮತ್ತು ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಆಸ್ಟ್ರೇಲಿಯಾದ ಕಾನೂನು ಜಾರಿ ಅಧಿಕಾರಿಗಳಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತದೆ'' ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸೋಮವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಧನುಷ್ಕ ಗುಣತಿಲಕ ಇಂಜ್ಯುರಿಯಿಂದಾಗಿ ಟಿ20 ವಿಶ್ವಕಪ್ನಲ್ಲಿ ಆಡುವ ಅವಕಾಶ ಕಳೆದುಕೊಂಡರು. ಈತ ಇದುವರೆಗೆ 46 ಟಿ20, 47 ಏಕದಿನ ಪಂದ್ಯಗಳು ಮತ್ತು 8 ಟೆಸ್ಟ್ ಪಂದ್ಯಗಳಲ್ಲಿ ಶ್ರೀಲಂಕಾ ಪರ ಆಡಿದ್ದಾರೆ. ವಿಶ್ವಕಪ್ನ 15 ಜನರ ಸ್ಕ್ವಾಡ್ನಲ್ಲಿ ಅವಕಾಶ ಪಡೆದಿದ್ದ ಈ ಪ್ಲೇಯರ್ ರೌಂಡ್ 1 ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಆಡಿದ ಬಳಿಕ ಇಂಜ್ಯುರಿಯಿಂದಾಗಿ ಸಂಪೂರ್ಣ ಟೂರ್ನಮೆಂಟ್ಗೆ ಅಲಭ್ಯರಾಗಿದ್ದರು.