

ಸಿಡ್ನಿ, ಜೂ. 5: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಬಾಲ್ ಟ್ಯಾಂಪರಿಂಗ್ ಹಗರಣದ ಬಳಿಕ ಸತತ ನಾಲ್ಕು ದಿನಗಳವರೆಗೆ ಅತ್ತಿದ್ದರಂತೆ. ಹೀಗೆಂದು ಸ್ವತಃ ಅವರೇ ಹೇಳಿದ್ದಾರೆ. ಅಂದು ಮಾಡಿದ್ದ ತಪ್ಪು ತನಗೆ ಅಷ್ಟರಮಟ್ಟಿಗೆ ನೋವು ಕೊಟ್ಟಿತ್ತು ಎಂದು ಸ್ಮಿತ್ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.
ಚೆಂಡು ವಿರೂಪ ಪ್ರಕರಣಕ್ಕಾಗಿ ನಿಷೇಧ ಶಿಕ್ಷೆಗೆ ಗುರಿಯಾದ ಬಳಿಕ ಸಿಡ್ನಿಯಲ್ಲಿ ಮೊದಲ ಬಾರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆಸ್ಟ್ರೇಲಿಯಾ ಕ್ರಿಕೆಟ್ ನ 'ಗೋಲ್ಡನ್ ಬಾಯ್' ಸ್ಮಿತ್, ಚೆಂಡು ವಿರೂಪದ ಘಟನೆ ಬಳಿಕ ಮನಸಿಗಾದ ನೋವನ್ನು ತೆರೆದಿಟ್ಟರು.
ಶಿಕ್ಷೆಯ ಭಾಗವಾಗಿ ಸ್ಟೀವ್ ಸಮುದಾಯದ ಸೇವೆಯಲ್ಲಿ ತೊಡಗಿಕೊಂಡಿದ್ದು, ಸಿಡ್ನಿಯಲ್ಲಿ ಬಾಲಕರ ಶಾಲೆಯೊಂದರಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತ, 'ಭಾವನೆಗಳನ್ನು ತೋರಿಕೊಳ್ಳುವುದಕ್ಕಾಗಿ ಅಳೋದು ತಪ್ಪಲ್ಲ' ಎಂದರು.
'ಸತ್ಯವಾಗಿ ಹೇಳಬೇಕೆಂದರೆ ಚೆಂಡು ವಿರೂಪ ಪ್ರಕರಣವಾಗಿದ್ದಾಗ ನಾನು ಸುಮಾರು ನಾಲ್ಕು ದಿನಗಳನ್ನು ಕಣ್ಣೀರಲ್ಲೇ ಕಳೆದಿದ್ದೇನೆ. ನಾನೀಗಲೂ ಮಾನಸಿಕ ತೊಳಲಾಟದಲ್ಲಿದ್ದೇನೆ. ಅಳು ಅನ್ನೋದು ನಾನು ನಿಸ್ಸಂಶಯವಾಗಿ ಮಾಡಲೇಬೇಕಾದ ಕಠಿಣ ವಿಷಯವಾಗಿತ್ತು' ಎಂದು ಸ್ಮಿತ್ ಹೇಳಿದರು.
ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಆರಂಭಿಕ ಆಟಗಾರ ಕ್ಯಾಮರಾನ್ ಬ್ಯಾನ್ ಕ್ರಾಫ್ಟ್ ಚೆಂಡು ವಿರೂಪದಲ್ಲಿ ಪಾಲ್ಗೊಂಗೊಂಡಿದ್ದರು. ಇದಕ್ಕಾಗಿ ವಾರ್ನರ್ ಮತ್ತು ಸ್ಮಿತ್ ಒಂದು ವರ್ಷ ಹಾಗು ಬ್ಯಾನ್ ಕ್ರಾಫ್ಟ್ 9 ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು.