ಇನ್ನೇನು ಕೆಲವೇ ಕ್ಷಣಗಳಲ್ಲಿ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಈ ಮೆಗ ಟೂರ್ನಿಗೂ ಮುನ್ನ ಏಷ್ಯಾ ಕ್ರಿಕೆಟ್ ಕೌನ್ಸಿಲ್ ನಾಯಕರ ಪತ್ರಿಕಾಗೋಷ್ಠಿ ನಡೆಸಿತು. ಈ ವೇಳೆ ಭಾಗವಹಿಸಲಿರುವ ಎಂಟೂ ತಂಡದ ಆಟಗಾರರು ಸುದ್ಧಿಗೋಷ್ಠಿಯಲ್ಲಿ ಕಾಣಿಸಿಕೊಂಡರು. ಎಲ್ಲರ ಚಿತ್ತ ಈ ವೇಳೆ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಅವರ ಮೇಲೆ ಇತ್ತು. ಈ ವೇಳೆ ಪತ್ರಕರ್ತರು ಎಸೆದ ಬೌನ್ಸರ್ಗೆ ಸೂರ್ಯ ಸಿಕ್ಸರ್ ಬಾರಿಸಿದರು.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದು ಗುಂಪಿನಲ್ಲಿ ಸ್ಥಾನ ಪಡೆದಿವೆ. ವಿಶ್ವದ ಎಲ್ಲರ ಕಣ್ಣುಗಳು ಈ ಬಿಗ್ ಪಂದ್ಯದ ಮೇಲೆ ನೆಟ್ಟಿರಲಿದೆ. ಉಭಯ ದೇಶಗಳ ನಡುವಿನ ಉದ್ವೀಘ್ನತೆ ಏರ್ಪಟ್ಟ ಬಳಿಕ, ಎರಡೂ ದೇಶಗಳು ಇದೇ ಮೊದಲ ಬಾರಿಗೆ ಕ್ರಿಕೆಟ್ ಅಂಗಳದಲ್ಲಿ ಮುಖಾಮುಖಿ ಆಗಲಿವೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಸೆ.8 ರಂದು ಯುಎಇನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಭಾರತ-ಪಾಕ್ ನಡುವಣ ಹೈ ವೋಲ್ಟೇಜ್ ಪಂದ್ಯ ಸೆ.14 ರಂದು ನಡೆಯಲಿದೆ. ಇದೇ ಪಂದ್ಯಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಪ್ರಶ್ನೆಯನ್ನು ಕೇಳಿದರು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಟಗಾರರು ಅಗ್ರೇಷನ್ ಕಡಿಮೆ ಮಾಡುತ್ತಾರೆಯೇ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸೂರ್ಯ ಮೈದಾನದಲ್ಲಿ ಅಗ್ರೇಷನ್ ಯಾವಾಗಲು ಇದ್ದೇ ಇರುತ್ತದೆ. ನೀವು ಪಂದ್ಯವನ್ನು ಗೆಲ್ಲುವ ಮನಸ್ಥಿತಿಯನ್ನು ಇಟ್ಟುಕೊಂಡು ಆಡಿದರೆ, ಅಗ್ರೇಷನ್ ಬೇಕೇ ಬೇಕು ಎಂದು ಸೂರ್ಯ ತಿಳಿಸಿದ್ದಾರೆ. ಇನ್ನು ಇದೇ ಪ್ರಶ್ನೆಗೆ ಉತ್ತರಿಸಿದ ಪಾಕ್ ನಾಯಕ ಸಲ್ಮಾನ್ ಅಲಿ ಆಘಾ ಹೇಳಿದರು, ಯಾರಾದರೂ ಅಗ್ರೇಷನ್ ಬಯಸಿದರೆ ಅದು ಅವರ ನಿರ್ಧಾರ. ನಾನು ಯಾರಿಗೂ ಏನು ಮಾರ್ಗದರ್ಶನ ನೀಡಿಲ್ಲ ಎಂದಿದ್ದಾರೆ.
ಸಂಜು ಸ್ಯಾಮ್ಸನ್ ಬಗ್ಗೆ ನೀವು ಚಿಂತಿಸಬೇಡಿ. ನಾವು ಅವರನ್ನು ನೋಡಿಕೊಳ್ಳುತ್ತೇವೆ. ನಾಳೆಯ ಪಂದ್ಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಟೂರ್ನಿಗೂ ಮುನ್ನ ನಾವು ಉತ್ತಮ ಅಭ್ಯಾಸ ಪಂದ್ಯಗಳನ್ನು ಆಡಿದ್ದೇವೆ. ಹೀಗಾಗಿ ಆಟಗಾರರು ಉತ್ತಮ ಮನಸ್ಥಿತಿಯಲ್ಲಿದ್ದಾರೆ. ಏಷ್ಯಾದ ಅತ್ಯುತ್ತಮ ತಂಡಗಳ ವಿರುದ್ಧ ಆಡುವುದು ಸವಾಲಾಗಿದೆ ಎಂದಿದ್ದಾರೆ.
ರೋಹಿತ್ ಶರ್ಮಾ ಅವರ ಟಿ20 ನಿವೃತ್ತಿಯ ನಂತರ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿದೆ. ಸೂರ್ಯ ಅವರ ನಾಯಕತ್ವದಲ್ಲಿ ಭಾರತ 22 ಪಂದ್ಯ ಆಡಿದ್ದು 17 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಟಿ20 ಸರಣಿಯನ್ನು ಸೋತಿಲ್ಲ. ಸೂರ್ಯ ಇದೇ ಮೊದಲ ಬಾರಿಗೆ ಬಹುರಾಷ್ಟ್ರಗಳ ಕ್ರಿಕೆಟ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೇ ಟೂರ್ನಿಯಲ್ಲಿ ಹಲವು ದಾಖಲೆಯ ಮೇಲೆ ಕಣ್ಣು ನೆಟ್ಟಿರುವ ಸೂರ್ಯ, ಆಟದ ಮೇಲೆ ವಿಶ್ವದ ಚಿತ್ತ ನೆಟ್ಟಿದೆ.