
ಟಿ20 ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯದ ಮೇಲಿನ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಬದ್ಧ ಎದುರಾಳಿಗಳ ನಡುವಿನ ಈ ಕದನದಲ್ಲಿ ಗೆಲ್ಲುವವರು ಯಾರು ಎಂಬುದು ಎಲ್ಲರಲ್ಲಿರುವ ಕುತೂಹಲಕವಾಗಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯವನ್ನಾಡಿದ್ದು ಭರ್ಜರಿ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿನ ಭಾರತೀಯ ಆಟಗಾರರ ಪ್ರದರ್ಶನ ನೋಡಿದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಓರ್ವ ಆಟಗಾರನ ಪ್ರದರ್ಶನದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ ಈ ಆಟಗಾರ ಆಡುವ ಬಳಗದಿಂದ ಹೊರಗುಳಿಯುವುದು ಸೂಕ್ತ ಎಂಬ ಅಭಿಪ್ರಾಯವನ್ನು ಚೋಪ್ರ ವ್ಯಕ್ತಪಡಿಸಿದ್ದಾರೆ.
ಆಕಾಶ್ ಚೋಪ್ರ ಹೀಗೆ ಅಭಿಪ್ರಾಯವನ್ನು ವ್ಯಕ್ತೊಡಿಸಿದ್ದು ಟೀಮ್ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಬಗ್ಗೆ. ಕಳೆದ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರವಾಗಿ ಮಿಂಚುವಲ್ಲಿ ವಿಫಲವಾಗಿದ್ದ ಭುವಿ ಟೀಮ್ ಇಂಡಿಯಾ ಪರವಾಗಿಯೂ ಮೊದಲ ಅಭ್ಯಾಸ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ನಾಲ್ಕು ಓವರ್ಗಳಲ್ಲಿ ಭುವನೇಶ್ವರ್ ಕುಮಾರ್ 54 ರನ್ಗಳನ್ನು ಬಿಟ್ಟುಕೊಡುವ ಮೂಲಕ ದುಬಾರಿಯಾಗಿದ್ದಾರೆ. ಅಲ್ಲದೆ ಒಂದೇ ಒಂದು ವಿಕೆಟ್ ಪಡೆಯಲು ಕೂಡ ಭುವಿಗೆ ಸಾಧ್ಯವಾಗಿರಲಿಲ್ಲ. ಈ ಕಾರಣದಿಂದಾಗಿ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಆಡುವ ಬಳಗದಿಂದ ಹೊರಗಿಡುವುದು ಸೂಕ್ತ ಎಂದಿದ್ದಾರೆ ಆಕಾಶ್ ಚೋಪ್ರ.
"ಭುವನೇಶ್ವರ್ ಕುಮಾರ್ ತುಂಬಾ ದುಬಾರಿಯಾಗಿದ್ದಾರೆ. ಅವರು ತಮ್ಮ ಸಾಮಾನ್ಯ ಲಯದಲ್ಲಿದ್ದಂತೆ ಕಂಡು ಬರುತ್ತಿಲ್ಲ. ಅವರು ತುಂಬಾ ಅನುಭವಿ ಆಟಗಾರ ಆದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅವರು ಆಡುವುದು ಸೂಕ್ತ ಎಂದು ನನಗೆ ಅನಿಸುತ್ತಿಲ್ಲ. ನನ್ನ ಪ್ರಕಾರ ಶಾರ್ದೂಲ್ ಠಾಕೂರ್ ಆವರನ್ನು ಆಡಿಸುವುದು ಉತ್ತಮ" ಎಂದು ಆಕಾಶ್ ಚೋಪ್ರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರ ರಾಹುರ್ ಚಹರ್ ಅವರ ದುಬಾರಿ ಸ್ಪೆಲ್ನ ಬಗ್ಗೆಯೂ ಮಾತನಾಡಿದರು. ರಾಹುಲ್ ಚಹರ್ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ದುಬಾರಿಯಾಗಿರುವ ಕಾರಣದಿಂದಾಗಿ ಮುಂದಿನ ಅಭ್ಯಾಸ ಪಂದ್ಯದಲ್ಲಿ ಹಾಗೂ ಪಾಕಿಸ್ತಾನದ ವಿರುದ್ಧ ವರುಣ್ ಚಕ್ರವರ್ತಿ ಅವರನ್ನು ಆಡಿಸುವುದು ಸೂಕ್ತ ಎಂದಿದ್ದಾರೆ ಆಕಾಶ್ ಚೋಪ್ರ. "ರಾಹುಲ್ ಚಹರ್ ತುಂಬಾ ದುಬಾರಿಯಾಗಿದ್ದಾರೆ. ಹಾಗಾಗಿ ಮುಂದಿನ ಪಂದ್ಯದಲ್ಲಿ ಹಾಗೂ ಪಾಕಿಸ್ತಾನದ ವಿರುದ್ಧ ವರುಣ್ ಚಕ್ರವರ್ತಿ ಆಡುವುದನ್ನು ನೋಡಲು ಬಯಸುತ್ತೇನೆ. ಆರ್ ಅಶ್ವಿನ್ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಆದರೆ ಮೂರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಿದರೆ ಮೂರನೇ ಸ್ಪಿನ್ನರ್ ಆಗಿ ಅವರನ್ನು ಬಳಸುವುದು ಸೂಕ್ತ" ಎಂದಿದ್ದಾರೆ ಚೋಪ್ರ.
ಇನ್ನು ಈ ಸಂದರ್ಭದಲ್ಲಿ ಇಂಗ್ಲೆಂಡ್ ವಿರುದ್ಧಧ ಅಭ್ಯಾಸ ಪಂದ್ಯದಲ್ಲಿ ಮೂರು ವಿಕೆಟ್ ಕಿತ್ತ ಮೊಹಮ್ಮದ್ ಶಮಿ ಪ್ರದರ್ಶನಕ್ಕೆ ಚೋಪ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಮೊಹಮದ್ ಶಮಿ ತಮ್ಮ ಕರ್ತವ್ಯವನ್ನು ಅದ್ಭುತವಾಗಿ ನಿಭಾಯಿಸಿದ್ದು ಮೂರು ವಿಕೆಟ್ ಪಡೆದುಕೊಂಡಿದ್ದಾರೆ. ಜಸ್ಪ್ರೀತ್ ಬೂಮ್ರಾ ಕೂಡ ಉತ್ತಮವಾಗಿ ರನ್ ನಿಯಂತ್ರಿಸಿದ್ದಾರೆ" ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನು ಟೀಮ್ ಇಂಡಿಯಾದ ಆಡುವ ಬಳಗದಲ್ಲಿ 6ನೇ ಬೌಲರ್ ಇಲ್ಲದಿರುವ ಕಾರಣದಿಂದಾಗಿ ಬದಲಾವಣೆಗೆ ಸಲಹೆ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ವರುಣ್ ಚಕ್ರವರ್ತಿ ಹಾಗೂ ಶಾರ್ದೂಲ್ ಠಾಕೂರ್ ಅವರನ್ನು ಕಣಕ್ಕಿಳಿಸಬೇಕು ಎಂದು ಆಕಾಶ್ ಚೋಪ್ರ ಸಲಹೆ ನೀಡಿದ್ದಾರೆ.