
ಯಾವುದೇ ವಿಶ್ವಕಪ್ ಟೂರ್ನಿ ಬಂತೆಂದರೆ ಸಾಕು ಆ ಟೂರ್ನಿಯ ವೇಳಾಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಯಾವ ದಿನಾಂಕದಂದು ಇದೆ ಎಂದು ಹುಡುಕಾಡುವ ಮಂದಿಯೇ ಹೆಚ್ಚು. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸಾಮಾನ್ಯ ಪಂದ್ಯವೆಂದರೆ ಸಾಕು ಸಾಕಷ್ಟು ಜನ ಕುತೂಹಲದಿಂದ ಟಿವಿ ಮುಂದೆ ಕುಳಿತು ಪಂದ್ಯಗಳನ್ನು ವೀಕ್ಷಿಸುತ್ತಾರೆ.
ಹೌದು, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸಾಮಾನ್ಯ ಸರಣಿ ನಡೆಯುತ್ತಿದೆ ಎಂದರೆ ಸಾಕು ದೊಡ್ಡ ಮಟ್ಟದ ಸದ್ದು ನಿರ್ಮಾಣವಾಗಿ ಬಿಡುತ್ತದೆ. ಹೀಗಿರುವಾಗ ಈ ಎರಡೂ ತಂಡಗಳ ನಡುವೆ ವಿಶ್ವಕಪ್ ಪಂದ್ಯ ನಡೆಯುತ್ತಿದೆ ಎಂದರೆ ಅದರ ಪ್ರಭಾವ ಕ್ರಿಕೆಟ್ ಜಗತ್ತಿನಲ್ಲಿ ಸಾಮಾನ್ಯವಾಗಿರುವುದಿಲ್ಲ. ಈ ಎರಡೂ ತಂಡಗಳ ನಡುವೆ ನಡೆಯಲಿರುವ ಪಂದ್ಯವನ್ನು ವೀಕ್ಷಿಸುವುದಕ್ಕಾಗಿ ಕೆಲಸಗಳನ್ನು ಬದಿಗಿಟ್ಟು ಟಿವಿ ಮುಂದೆ ಕೂರುವ ಕೋಟ್ಯಂತರ ವೀಕ್ಷಕರಿದ್ದಾರೆ. ಹೀಗೆ ಸಾಕಷ್ಟು ದೊಡ್ಡ ಮಟ್ಟದ ಕುತೂಹಲವನ್ನು ಹುಟ್ಟು ಹಾಕಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಕುರಿತು ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ಮಾತನಾಡಿದ್ದು ತಮ್ಮ ಪಾಲಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
* ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ವಿಶ್ವಕಪ್ ಹಣಾಹಣಿಯ ಕುರಿತು ಮಾತನಾಡಿರುವ ವಿರೇಂದ್ರ ಸೆಹ್ವಾಗ್ ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೂ ಪಾಕಿಸ್ತಾನ ಯಾಕೆ ಭಾರತದ ವಿರುದ್ಧ ಗೆದ್ದಿಲ್ಲ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಪ್ರತಿ ಸಲ ವಿಶ್ವಕಪ್ ಹಣಾಹಣಿ ಬಂದಾಗ ಪಾಕಿಸ್ತಾನ ತಂಡ ಪಂದ್ಯ ಆರಂಭಕ್ಕೂ ಮುನ್ನವೇ ಈ ಸಾರಿ ನಾವು ಇತಿಹಾಸವನ್ನು ಬದಲಾಯಿಸುತ್ತೇವೆ ಎಂಬ ದೊಡ್ಡ ಹೇಳಿಕೆಗಳನ್ನು ನೀಡುವುದರ ಮೂಲಕ ಪಂದ್ಯವನ್ನು ಸೋಲುತ್ತಾ ಬಂದಿವೆ. ಆದರೆ ನಮ್ಮ ತಂಡ ಹಾಗಲ್ಲ ಪಂದ್ಯ ಆರಂಭವಾಗುವ ಮುನ್ನ ಆ ರೀತಿಯ ದೊಡ್ಡ ಹೇಳಿಕೆ ನೀಡುವ ಬದಲು ಮೈದಾನದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತೇವೆ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
* ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಪಂದ್ಯದ ಕುರಿತು ಮಾತನಾಡಿರುವ ಮ್ಯಾಥ್ಯೂ ಹೇಡನ್ ಕ್ರಿಕೆಟ್ ಜಗತ್ತಿನಲ್ಲಿಯೇ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯುವ ಜಿದ್ದಾಜಿದ್ದಿನ ಪೈಪೋಟಿ ಬೇರೆ ಯಾವುದೇ ತಂಡಗಳ ನಡುವೆಯೂ ಕೂಡ ಜರುಗುವುದಿಲ್ಲ ಎಂದಿದ್ದಾರೆ. ಹಾಗೂ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಕೆಎಲ್ ರಾಹುಲ್ ಆಸರೆಯಾಗಲಿದ್ದಾರೆ ಎಂದು ಮ್ಯಾಥ್ಯೂ ಹೇಡನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
* ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ವಿಶ್ವಕಪ್ ಹಣಾಹಣಿಯ ಕುರಿತು ಮಾತನಾಡಿರುವ ಭಾರತದ ಮಾಜಿ ನಾಯಕ ಕಪಿಲ್ ದೇವ್ ಟೀಮ್ ಇಂಡಿಯಾ ಯಾವಾಗಲೂ ವಿಶ್ವ ಕಪ್ ಹಣಾಹಣಿಯಲ್ಲಿ ಪಾಕಿಸ್ತಾನದ ವಿರುದ್ಧ ಗೆಲ್ಲುತ್ತಿರುವುದರ ಹಿಂದಿನ ರಹಸ್ಯವೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತು ಮಾತನಾಡಿರುವ ಕಪಿಲ್ ದೇವ್ ಪಂದ್ಯದಲ್ಲಿ ಗೆಲುವು ಮತ್ತು ಸೋಲು ಎರಡೂ ಕೂಡ ಒತ್ತಡ ಮತ್ತು ಉತ್ಸಾಹದ ಮೇಲೆ ಅವಲಂಬಿತವಾಗಿರುತ್ತದೆ, ಯಾವ ತಂಡ ಒತ್ತಡದಿಂದ ಪಂದ್ಯವನ್ನಾಡುತ್ತಿದೆಯೋ ಆ ತಂಡ ಸೋಲಲಿದೆ ಮತ್ತು ಯಾವ ತಂಡ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದೆಯೋ ಆ ತಂಡ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ ಎಂದಿದ್ದಾರೆ.
* ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮುಂದಿನ ಭಾನುವಾರ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಪಂದ್ಯದ ಕುರಿತು ಮಾತನಾಡಿರುವ ಗೌತಮ್ ಗಂಭೀರ್ ಮತ್ತು ಇರ್ಫಾನ್ ಪಠಾಣ್ ಇಬ್ಬರೂ ಕೂಡ ಭಾರತ ತಂಡಕ್ಕೆ ಟೂರ್ನಿಯುದ್ದಕ್ಕೂ ಜಸ್ಪ್ರೀತ್ ಬೂಮ್ರಾ ಆಸರೆಯಾಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.