ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ ಮುಂದಿನ ಪ್ರತಿ ಪಂದ್ಯ ಕೂಡ ಭಾರತ ತಂಡದ ಪಾಲಿಗೆ ಅತ್ಯಂತ ನಿರ್ಣಾಯಕ. ಭಾರತದಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ನಲ್ಲಿ ಸುದೀರ್ಘ ಕಾಲದಿಂದ ಕಾಯುತ್ತಿರುವ ಐಸಿಸಿ ಟ್ರೋಫಿಯ ಬರವನ್ನು ನೀಗಿಸಿಕೊಳ್ಳುವ ಅತ್ಯುತ್ತಮ ಅವಕಾಶವಿದೆ. ಹೀಗಾಗಿ ಟೀಮ್ ಇಂಡಿಯಾ ಬಲಿಷ್ಠ ತಂಡವನ್ನು ಈ ಸರಣಿಗೆ ಅಂತಿಮಗೊಳಿಸಲು ಪ್ರತಿಯೊಂದು ಪಂದ್ಯವನ್ನು ಕೂಡ ಅತ್ಯಂತ ನಿರ್ಣಾಯಕ ಎಂದು ಪರಿಗಣಿಸಿದೆ.
ಹೀಗಾಗಿಯೇ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ವಿಂಡೀಸ್ ವಿರುದ್ಧ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಮೂವರು ಆಟಗಾರರು ಅಗ್ನಿಪರೀಕ್ಷೆಯನ್ನು ಎದುರಿಸಲಿದ್ದಾರೆ. ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಗಳಿಸಿಕೊಳ್ಳಬೇಕಿದ್ದರೆ ಈ ಮೂವರು ಆಟಗಾರರ ಈ ಮೂರು ಪಂದ್ಯಗಳ ಸರಣಿಯಲ್ಲಿ ತಮಗೆ ಸಿಗುವ ಅವಕಾಶವನ್ನು ಎರಡುಕೈಗಳಿಂದಲೂ ಬಾಚಬೇಕಿದೆ.

ಹಾಗಾದರೆ ಈ ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿರುವ ಟೀಮ್ ಇಂಡಿಯಾದ ಮೂವರು ಆಟಗಾರರು ಯಾರು? ಮುಂದೆ ಓದಿ..
ಯುವ ವೇಗಿ ಉಮ್ರಾನ್ ಮಲಿಕ್ ಗಂಟೆಗೆ 150 ಕಿ.ಮೀಗೂ ಅಧಿಕ ವೇಗದಲ್ಲಿ ಬೌಲಿಂಗ್ ನಡೆಸುವ ಸಾಮರ್ಥ್ಯದ ಮೂಲಕ ಗಮನಸೆಳೆದವರು. ಏಶ್ಯನ್ ಗೇಮ್ಸ್ಗೆ ಆಯ್ಕೆ ಮಾಡಿರುವ ತಂಡದಲ್ಲಿ ಉಮ್ರಾನ್ ಸ್ಥಾನವನ್ನು ಗಳಿಸಿಕೊಳ್ಳದ ಕಾರಣ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿ ಇನ್ನು ಕೂಡ ಇದ್ದಾರೆ ಎಂಬ ಸುಳಿವು ದೊರೆತಿದೆ. ಆದರೆ ಆ ಅವಕಾಶವನ್ನು ಸಾಧ್ಯವಾಗಿರಬೇಕಾದರೆ ಉಮ್ರಾನ್ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ನೀಡಲೇಬೇಕಿದೆ. ಹೀಗಾಗಿ ಇದು ಉಮ್ರಾನ್ಗೆ ದೊರೆತ ಮತ್ತೊಂದು ಅವಕಾಶವಾಗಿದ್ದು ಈ ಸರಣಿಯನ್ನು ಜಮ್ಮು ಕಾಶ್ಮೀರದ ಯುವ ವೇಗಿ ಯಾವ ರೀತಿಯಾಗಿ ಬಳಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಟಿ20 ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ನಂಬರ್ 1 ಬ್ಯಾಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಏಕದಿನ ಮಾದರಿಯಲ್ಲಿ ಗಮನಸೆಳೆಯುವ ಪ್ರದರ್ಶನ ನೀಡಲು ವಿಫಲವಾಗಿರುದು ವಿಪರ್ಯಾಸ. ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ಟೀಮ್ ಇಂಡಿಯಾ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಕಮ್ಬ್ಯಾಕ್ ಮಾಡುವ ಹಾದಿಯಲ್ಲಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಯಾದವ್ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಪಡೆಯಲು ಹೆಚ್ಚಿನ ಶ್ರಮದ ಅಗತ್ಯವಿದೆ. ವೆಸ್ಟ್ ಇಂಡೀಸ್ ವಿರುದ್ಧದ ಈ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವುದು ಅನಿವಾರ್ಯವಾಗಿದ್ದು ಹಾಗಾದಲ್ಲಿ ಮಾತ್ರವೇ ಸೂರ್ಯಕುಮಾರ್ ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.
ಏಷ್ಯನ್ ಗೇಮ್ಸ್ಗೆ ಹೆಸರಿಸಿರು T20ಐ ತಂಡದಲ್ಲಿ ಅರ್ಶ್ದೀಪ್ ಸಿಂಗ್ ಸ್ಥಾನ ಪಡೆದಿರುವುದರಿಂದ ಟೀಮ್ ಇಂಡಿಯಾಗೆ ತಮ್ಮ ವಿಶ್ವಕಪ್ ತಂಡದಲ್ಲಿ ಎಡಗೈ ವೇಗಿಯ ಅಗತ್ಯವಿದೆ ಎಂದು ಅನಿಸಿದರೆ ಜಯದೇವ್ ಉನದ್ಕತ್ ಅವರತ್ತ ನೋಡಬೇಕಾಗಿದೆ. ಹೀಗಾಗಿ ಕೆರಿಬಿಯನ್ ನಾಡಿನಲ್ಲಿ ಜಯದೇವ್ ಉನಾದ್ಕಟ್ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದರೆ ಅದು ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಕಾರಣವಾಗಬಹುದು.