ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಅರಿಯಾಗಿ ಒಂದು ತಿಂಗಳು ಮಾತ್ರವೇ ಬಾಕಿಯಿರುವಾಗ ಭಾರತದ 15 ಆಟಗಾರರ ಪಡೆಯನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ನಾಯಕತ್ವದ ತಂಡವನ್ನು ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಮಾಧ್ಯಮಗೋಷ್ಠಿ ನಡೆಸಿ ಪ್ರಕಟಿಸಿದ್ದಾರೆ. ಕೆಎಲ್ ರಾಹುಲ್ ಫಿಟ್ ಆಗಿದ್ದು ಈ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
ಆದರೆ ಕೆಲ ಆಟಗಾರರಿಗೆ ಅದೃಷ್ಟ ಕೈಕೊಟ್ಟಿದೆ. ಏಷ್ಯಾಕಪ್ನಲ್ಲಿ ಮೀಸಲು ಆಟಗಾರನಾಗಿದ್ದ ಸಂಜು ಸ್ಯಾಮ್ಸನ್, ಏಷ್ಯಾಕಪ್ನ 17 ಆಟಗಾರರ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದ ತಿಲಕ್ ವರ್ಮಾ ಹಾಗೂ ಪ್ರಸಿದ್ಧ್ ಕೃಷ್ಣ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಆದರೆ ಟೀಮ್ ಇಂಡಿಯಾದ ವಿಶ್ವಕಪ್ ತಂಡದಲ್ಲಿ ಮೂವರು ಆಟಗಾರರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಅದೃಷ್ಟವೇ ಅವರನ್ನು ಕಾಪಾಡಿದಂತಿದೆ. ಹಾಗಾದರೆ ಆ ಮೂವರು ಅದೃಷ್ಟವಂತ ಕ್ರಿಕೆಟಿಗರು ಯಾರು? ಮುಂದೆ ಓದಿ..

ವಿಶ್ವಕಪ್ ಭಾರತದಲ್ಲಿ ನಡೆಯಲಿರುವ ಕಾರಣ ಇಲ್ಲಿನ ಪಿಚ್ಗಳು ಸ್ಪಿನ್ನರ್ಗಳಿಗೆ ನೆರವು ನೀಡುವ ಪಿಚ್ಗಳು ಎನ್ನುವುದು ತಿಳಿಯದ ಸಂಗತಿಯೇನಲ್ಲ. ಭಾರತ ಈ ವಿಶ್ವಕಪ್ ತಂಡದಲ್ಲಿ ಮೂವರು ಸ್ಪಿನ್ನರ್ಗಳನ್ನು ಆಯ್ಕೆ ಮಾಡಿದೆ. ಇವರನ್ನು ಹೊರತುಪಡಿಸಿ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಆಗಿ ವೇಗದ ಬೌಲಿಂಗ್ ವಿಭಾಗಕ್ಕೆ ನೆರವು ನೀಡುವ ಸಾಮರ್ಥ್ಯ ಹೊಂದಿದ್ದರೂ ನಾಲ್ವರು ಪೂರ್ಣಕಾಲಿಕ ವೇಗಿಗಳನ್ನು ಆಯ್ಕೆ ಮಾಡಲಾಗಿದೆ. ಸಾಮಾನ್ಯವಾಗಿ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್ಗಳು ಈ ಸಂಯೋಜನೆಯಲ್ಲಿ ತಂಡ ಕಣಕ್ಕಿಳಿಯುತ್ತದೆ.
ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ತಂಡದಲ್ಲಿದ್ದಾಗ ಶಾರ್ದೂಲ್ಗೆ ಹೆಚ್ಚಿನ ಅವಕಾಶ ದೊರೆಯುವುದು ಸಾಧ್ಯವಿಲ್ಲ. ಹಾಗಿದ್ದರೂ ಶಾರ್ದೂಲ್ ಸ್ವಲ್ಪ ಪ್ರಮಾಣದಲ್ಲಿ ಬ್ಯಾಟ್ನಿಂದಲೂ ಕೊಡುಗೆ ನೀಡಬಲ್ಲರು ಎನ್ನುವ ಕಾರಣಕ್ಕೆ ಅವರಿಗೆ ತಂಡದಲ್ಲಿ ಅವಕಾಶ ದೊರೆತಿದೆ. ಆದರೆ ಅವರಿಗಾಗಿ ಪ್ರಸಿದ್ಧ್ ಕೃಷ್ಣ ಅವರಂಥಾ ಉತ್ತಮ ಹಾಗೂ ಅರ್ಃ ಬೌಲರ್ ಅವಕಾಶ ಕಳೆದುಕೊಳ್ಳಬೇಕಾಯಿತು.
ಅಕ್ಷರ್ ಪಟೇಲ್ ಇತ್ತೀಚೆಗೆ ಎಲ್ಲಾ ಮಾದರಿಯಲ್ಲಿಯೂ ಭಾರತ ತಂಡದ ಭಾಗವಾಗಿದ್ದರಾದರೂ ಅವರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿಲ್ಲ. ಅದಕ್ಕೆ ಕಾರಣ ರವೀಂದ್ರ ಜಡೇಜಾ. ಈ ಇಬ್ಬರು ಆಟಗಾರರು ಕೂಡ ಕೌಶಲ್ಯದ ವಿಚಾರವಾಗಿ ಎಲ್ಲಾ ವಿಭಾಗದಲ್ಲಿಯೂ ಸಮಾನವಾಗಿದ್ದಾರೆ. ಆದರೆ ರವೀಂದ್ರ ಜಡೇಜಾ ಹಲವಾರು ಸಂದರ್ಭಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿರುವ ಕಾರಣದಿಂದಾಗಿ ಅವರನ್ನು ಮೊದಲ ಆದ್ಯತೆಯಾಗಿಯೇ ಪರಿಗಣಿಸಲಾಗುತ್ತದೆ. ಇನ್ನು ಈ ಇಬ್ಬರು ಆಟಗಾರರಿಗೂ ಕೂಡ ಜೊತೆಯಾಗಿ ಆಡುವ ಬಳಗದಲ್ಲಿ ಸ್ಥಾನವನ್ನು ನೀಡುವುದು ಕಷ್ಟ ಸಾಧ್ಯ. ಹಾಗಾಗಿಯೇ ಅಕ್ಷರ್ ಪಟೇಲ್ ಬಹುತೇಕ ಬೆಂಚ್ ಕಾಯಬೇಕಾಗುವ ಸಾಧ್ಯತೆಯಿದೆ. ಇವರ ಬದಲಿಗೆ ಪೂರ್ಣಪ್ರಮಾಣದ ಸ್ಪಿನ್ನರ್ಗಳಾದ ಆರ್ ಅಶ್ವಿನ್ ಅಥವಾ ಯುಜುವೇಂದ್ರ ಚಾಹಲ್ ಅವರಿಗೆ ಅವಕಾಶ ನೀಡಬಹುದಾಗಿತ್ತು.
ಏಕದಿನ ಮಾದರಿಯಲ್ಲಿ 55.71ರಷ್ಟು ಸರಾಸರಿಯನ್ನು ಹೊಂದಿರುವ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಟ್ಟು 50 ಓವರ್ಗಳ ಆಟದಲ್ಲಿ ಸತತವಾಗಿ ವೈಫಲ್ಯ ಅನುಭವಿಸಿರುವ 24.33ರ ಸರಾಸರಿ ಹೊಂದಿರುವ ಸೂರ್ಯಕುಮಾರ್ ಯಾದವ್ಗೆ ಅವಕಾಶ ನೀಡಿರುವುದು ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಸೂರ್ಯಕುಮಾರ್ ಯಾದವ್ಗೆ ಸಾಕಷ್ಟು ಅವಕಾಶಗಳನ್ನು ಸತತವಾಗಿ ನೀಡಿದ್ದರೂ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಿದ್ದರೂ ಕೂಡ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಗಾಗಿಯೇ ಸೂರ್ಯಕುಮಾರ್ ಯಾದವ್ ಭಾರತ ತಂಡದಲ್ಲಿ ಸ್ಥಾನವನ್ನು ಪಡೆಯಲು ಅದೃಷ್ಟವನ್ನು ಹೊಂದಿದ್ದಾರೆ ಎಂದರೆ ತಪ್ಪಿಲ್ಲ.