
ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಹಠಾತ್ ನಿಧನಕ್ಕೆ ಭಾರತೀಯ ಕ್ರಿಕೆಟ್ ದಿಗ್ಗಜರು ಸಂತಾಪ ಸೂಚಿಸಿದ್ದಾರೆ. ದಿಢೀರ್ ಸಾವಿನ ಸುದ್ದಿ ಕೇಳಿದ ತಕ್ಷಣ ಪ್ರತಿಯೊಬ್ಬ ಕ್ರಿಕೆಟಿಗನು ಸುದ್ದಿಯ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯ ಕ್ರಿಕೆಟ್ ದಿಗ್ಗಜ ರಾಡ್ ಮಾರ್ಷ್ ಕೂಡ ಶುಕ್ರವಾರ ನಿಧನರಾದ ಬೆನ್ನಲ್ಲೇ ಮತ್ತೊಬ್ಬ ದಿಗ್ಗಜ ಕ್ರಿಕೆಟಿಗರನ್ನ ಕಳೆದುಕೊಂಡ ಕ್ರಿಕೆಟ್ ಆಸ್ಟ್ರೇಲಿಯಾ ಅನಾಥವಾಗಿದೆ. ಭಾರತದ ಜೊತೆಗೆ ಮತ್ತು ಟೀಂ ಇಂಡಿಯಾದ ಅಭಿಮಾನಿಗಳ ಜೊತೆಗೆ ವಿಶೇಷ ಬಾಂದವ್ಯ ಹೊಂದಿದ್ದ ವಾರ್ನಿ ಕುರಿತು ಸಾಕಷ್ಟು ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
''ಜೀವನವು ತುಂಬಾ ಚಂಚಲ ಮತ್ತು ಅನಿರೀಕ್ಷಿತವಾಗಿದೆ. ನಮ್ಮ ಈ ಶ್ರೇಷ್ಠ ಕ್ರೀಡೆಯ ಅಂಗೀಕಾರವನ್ನು ನಾನು ಪ್ರಕ್ರಿಯೆಗೊಳಿಸಲು ಸಾಧ್ಯವಿಲ್ಲ ಮತ್ತು ಮೈದಾನದ ಹೊರಗೆ ನನಗೆ ಪರಿಚಯವಾದ ವ್ಯಕ್ತಿಯೂ ಸಹ. RIP #GOAT. ಕ್ರಿಕೆಟ್ ಚೆಂಡನ್ನು ತಿರುಗಿಸಿದ ಶ್ರೇಷ್ಠ ಆಟಗಾರ '' ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
"ನನಗೆ ಸಂಪೂರ್ಣ ಆಘಾತವಾಗಿದೆ. ಕ್ರಿಕೆಟ್ ಗೆ ತುಂಬಲಾರದ ನಷ್ಟ. ನನ್ನ ಬಳಿ ವಿವರಿಸಲು ಪದಗಳಿಲ್ಲ. ಕ್ರೀಡೆಗಾಗಿ ನೀವು ಮಾಡಿದ ಎಲ್ಲಾ ಕೆಲಸಕ್ಕೂ ಧನ್ಯವಾದಗಳು. ನಿಮ್ಮ ಪ್ರೀತಿಪಾತ್ರರಿಗೆ ನಮ್ಮ ಸಂತಾಪಗಳನ್ನು ತಿಳಿಸುತ್ತದ್ದೇನೆ' ಎಂದು ಶಿಖರ್ ಧವನ್ (Shikhar Dhawan) ಟ್ವೀಟ್ ಮಾಡಿದ್ದಾರೆ.
"ಇದೊಂದು ನಂಬಲು ಅಸಾಧ್ಯವಾದ ಸುದ್ದಿ. ನಿಜಕ್ಕೂ ಬಹಳ ಆಘಾತವಾಗಿದೆ. ಬಹುಶಃ ಈಗಲೂ ಇದು ನಿಜವಿರಲಾರದು ಎಂದುಕೊಳ್ಳುತ್ತೇನೆ. ಈ ಸುದ್ದಿಗಾಗಿ ನಾನು ಯಾವ ಸ್ಥಿತಿಯ ಅಚ್ಚರಿಯಲ್ಲಿದ್ದೇನೆ ಎಂದು ಹೇಳಲು ಸಾಧ್ಯವಾಗದು. ಕ್ರಿಕೆಟ್ ಗೆ ದೊಡ್ಡ ನಷ್ಟ" ಎಂದು ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ, ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ವಿವಿಯನ್ ರಿಚರ್ಡ್ಸ್ ಬರೆದಿದ್ದಾರೆ.
"ಈ ಸುದ್ದಿಯನ್ನು ನಂಬಲಾಗುತ್ತಿಲ್ಲ. ವಿಶ್ವ ಕ್ರಿಕೆಟ್ ನ ದಿಗ್ಗಜ ಸ್ಪಿನ್ನರ್ ಗಳಲ್ಲಿ ಒಬ್ಬರು. ಸ್ಪಿನ್ ಎಸೆತವನ್ನು ಕೂಲ್ ಆಗಿ ಎಸೆಯುತ್ತಿದ್ದ ವ್ಯಕ್ತಿ. ಸೂಪರ್ ಸ್ಟಾರ್ ಶೇನ್ ವಾರ್ನ್ ಇನ್ನಿಲ್ಲ. ಜೀವನ ತುಂಬಾ ಸೂಕ್ಷ್ಮ. ಆದರೆ, ಅದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಅವರ ಕುಟುಂಬ, ಸ್ನೇಹಿತರು ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ನನ್ನ ಸಂತಾಪಗಳನ್ನು ತಿಳಿಸುತ್ತಿದ್ದೇನೆ" ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಶೇನ್ ವಾರ್ನ್ ಎಸೆತಗಳನ್ನು ಎದುರಿಸಿದ್ದ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಕೂಡ ಈ ಕುರಿತಾಗಿ ಟ್ವೀಟ್ ಮಾಡಿದ್ದು, ವಾರ್ನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. "ನಿಜವಾಗಿಯೂ ಏನು ಹೇಳಬೇಕು ಎನ್ನಲು ಪದಗಳಿಲ್ಲ. ಇದು ಅತ್ಯಂತ ದುಃಖದ ವಿಚಾರ. ನಮ್ಮ ಕ್ರೀಡೆಯ ಅಪ್ರತಿಮ ದಿಗ್ಗಜ ಮತ್ತು ಚಾಂಪಿಯನ್ ಇಂದು ನಮ್ಮನ್ನು ಅಗಲಿದ್ದಾರೆ. ಶೇನ್ ವಾರ್ನ್ ನಿಧನಕ್ಕೆ ಸಂತಾಪಗಳು.. ಇನ್ನೂ ಇದನ್ನು ನಂಬಲಾಗುತ್ತಿಲ್ಲ' ಎಂದು ಬರೆದಿದ್ದಾರೆ.
ಶೇನ್ವಾರ್ನ್ನ ಆನ್ಫೀಲ್ಡ್ ಬದ್ಧ ಎದುರಾಳಿ ಸಚಿನ್ ತೆಂಡೂಲ್ಕರ್ ತನ್ನ ಸ್ನೇಹಿತನ ಸಾವಿನ ಸುದ್ದಿ ಕೇಳಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇದರಲ್ಲಿ, ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಭಾರತೀಯರಿಗೆ ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಹಾಗೆಯೇ ಭಾರತೀಯರ ಹೃದಯದಲ್ಲೂ ನೀವು ವಿಶೇಷ ಸ್ಥಾನ ಗಳಿಸಿದ್ದೀರಿ. ನೀವಿದ್ದ ಜಾಗದಲ್ಲಿ ಹರುಷಕ್ಕೆ ಕೊರತೆ ಇರುತ್ತಿರಲಿಲ್ಲ. ನಿಮ್ಮ ಸಾವು ತುಂಬಾ ದುಃಖ ತಂದಿದೆ. ವಿಲ್ ಮಿಸ್ ಯು ವಾರ್ನಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮೈದಾನದಲ್ಲಿ ನಮ್ಮ ಸ್ಪರ್ಧೆ ಮತ್ತು ಮೈದಾನದ ಹೊರಗೆ ನಮ್ಮ ಹಾಸ್ಯಮಯ ಕ್ಷಣಗಳನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ.