
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಂಡರ್-19 ಏಷ್ಯಾ ಕಪ್ ಫೈನಲ್ನಲ್ಲಿ ಶ್ರೀಲಂಕಾ ತಂಡವನ್ನ ಭಾರತ ಅಂಡರ್-19 ತಂಡ ಮಣಿಸಿ ಟ್ರೋಫಿಯನ್ನ ತನ್ನದಾಗಿಸಿಕೊಂಡಿದೆ.
ಮಳೆಯಿಂದಾಗಿ 38 ಓವರ್ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 106ರನ್ಗಳಿಸಲಷ್ಟೇ ಶಕ್ತವಾಯ್ತು. ಶ್ರೀಲಂಕಾ ಪರ ಮೊದಲು ಮೂವರು ಬ್ಯಾಟ್ಸ್ಮನ್ಗಳು ಸಿಂಗಲ್ ಡಿಜಿಟ್ಗೆ ವಿಕೆಟ್ ಒಪ್ಪಿಸಿದ್ರು. ಸದೀಶ ರಾಜಪಕ್ಷ 14 ರನ್ಗಳಿಸಿ ತಂಡಕ್ಕೆ ಕೊಂಚ ಆಧಾರವಾದ್ರು. ಆದ್ರೆ ಮಧ್ಯಮ ಕ್ರಮಾಂಕದ ವೈಫಲ್ಯವು ಶ್ರೀಲಂಕಾವನ್ನ ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿಯುವಂತೆ ಮಾಡಿತು.
ಕೊನೆಯಲ್ಲಿ ಕೆಳಕ್ರಮಾಂಕದ ಬ್ಯಾಟ್ಸ್ಮನ್ಗಳಾದ ರವೀನ್ ಡಿ ಸಿಲ್ವಾ 15, ಯಸಿರು ರೋಡ್ರಿಗೊ 19, ಮತೀಶ ಪತಿರಾನ 14 ರನ್ಗಳನ್ನು ಕಲೆಹಾಕುವ ಮೂಲಕ ಲಂಕಾ ನಿಗದಿತ 38 ಓವರ್ಗಳಲ್ಲಿ 106ರನ್ ಕಲೆಹಾಕಿತು. ಭಾರತ ಪರ ವಿಕ್ಕಿ ಓಸ್ವಾಲ್ 3 ವಿಕೆಟ್ ಕಬಳಿಸಿದ್ರೆ, ಕೌಶಾಲ್ ತಾಂಬೆ 2 ವಿಕೆಟ್ ಮತ್ತು ಉಳಿದ ಮೂವರು ಬೌಲರ್ಗಳು ತಲಾ 1 ವಿಕೆಟ್ ಪಡೆದರು.
ಇನ್ನು ಲಂಕಾ ಬ್ಯಾಟಿಂಗ್ ಬಳಿಕ ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ ಭಾರತಕ್ಕೆ 102 ರನ್ಗಳ ಗುರಿಯನ್ನು ನೀಡಲಾಯಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ಅಂಡರ್-19 ತಂಡ ಕೇವಲ ಒಂದು ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಯಿತು.
ಭಾರತದ ಪರ ಎ. ರಘುವಂಶಿ 67 ಎಸೆತಗಳಲ್ಲಿ ಅಜೇಯ 56 ರನ್ ಕಲೆಹಾಕಿದ್ರೆ, ಶೈಕ್ ರಶೀದ್ ಅಜೇಯ 31 ರನ್ ಸಿಡಿಸುವಲ್ಲಿ ಯಶಸ್ವಿಯಾದ್ರು. ಇದರ ನಡುವೆ ಓಪನರ್ ಹರ್ನೂರ್ ಸಿಂಗ್ ಕೇವಲ 5ರನ್ಗೆ ವಿಕೆಟ್ ಒಪ್ಪಿಸಿದ್ರು.
ಭಾರತ ಶ್ರೀಲಂಕಾ ನೀಡಿದ ಸುಲಭ ಗುರಿಯನ್ನ ಕೇವಲ 21.3 ಓವರ್ಗಳಲ್ಲಿ ತಲುಪುವ ಮೂಲಕ ದಾಖಲೆಯ ಎಂಟನೇಯ ಬಾರಿಗೆ ಅಂಡರ್-19 ಏಷ್ಯಾ ಕಪ್ ಟ್ರೋಫಿಯನ್ನು ಗೆದ್ದು ಬೀಗಿದೆ. ಫೈನಲ್ನಲ್ಲಿ ನಿರಾಸೆಯಿಂದ ಶ್ರೀಲಂಕಾ ತವರಿನತ್ತ ಹೆಜ್ಜೆ ಇಟ್ಟಿದೆ.
ಶ್ರೀಲಂಕಾ ಸೆಮಿಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ್ರೆ, ಭಾರತ ಬಾಂಗ್ಲಾದೇಶವನ್ನ ಮಣಿಸಿ ಫೈನಲ್ ಪ್ರವೇಶಿಸಿ ಟ್ರೋಫಿ ಗೆದ್ದುಕೊಂಡಿದೆ.