
ಜೈಪುರ, ಮೇ 10: ಮಹಿಳಾ ಐಪಿಎಲ್ಗೆ ಮುನ್ನುಡಿಯಂತಿರುವ ಟಿ20 ಚಾಲೆಂಜ್ ತ್ರಿಕೋನ ಸರಣಿಯಲ್ಲಿ ಗೆಲುವಿಗಿಂತಲೂ ನೆಟ್ ರನ್ರೇಟ್ ಸಲುವಾಗಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಟೀಮ್ ವೆಲಾಸಿಟಿಯ ನಿರ್ಧಾರವನ್ನು ತಂಡದ ಸ್ಟಾರ್ ಬ್ಯಾಟರ್ ವೇದಾ ಕೃಷ್ಣಮೂರ್ತಿ ಸಮರ್ಥಿಸಿಕೊಂಡಿದ್ದಾರೆ.
ಇಲ್ಲಿನ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಮಹಿಳಾ ಟಿ20 ಚಾಲೆಂಜ್ನ ಅಂತಿಮ ರೌಂಡ್ ರಾಬಿನ್ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ಸಾರಥ್ಯದ ಸೂಪರ್ನೋವಾಸ್ ತಂಡ ಮಿಥಾಲಿ ರಾಜ್ ಮುಂದಾಳತ್ವದ ವೆಲಾಸಿಟಿ ತಂಡದ ಎದುರು 12 ರನ್ಗಳ ಜಯ ದಾಖಲಿಸಿ ಫೈನಲ್ಗೆ ಮುನ್ನಡೆಯಿತು. ಇನ್ನು ಪಂದ್ಯದಲ್ಲಿ ಸೋಲಿನ ಅಂತರವನ್ನು ತಗ್ಗಿಸಿ ನೆಟ್ ರನ್ರೇಟ್ ಕಾಯ್ದುಕೊಂಡ ವೆಲಾಸಿಟಿ ಕೂಡ ಫೈನಲ್ಗೆ ದಾಪುಗಾಲಿಟ್ಟಿತು.
"ಕಳೆದ ಪಂದ್ಯದಲ್ಲಿ ಗೆಲುವಿನ ದಡ ಮುಟ್ಟಲು ತೋರಿದ ಆತುರದಿಂದ ಅಂತ್ಯದಲ್ಲಿ ತ್ವರಿತವಾಗಿ ವಿಕೆಟ್ ಕಳೆದುಕೊಂಡು ಪೆಚ್ಚಾದೆವು. ಹೀಗಾಗಿ 2ನೇ ಪಂದ್ಯದಲ್ಲಿ ನೆಟ್ ರನ್ರೇಟ್ ಕಾಯ್ದುಕೊಂಡು ಫೈನಲ್ಗೆ ಅರ್ಹತೆ ಪಡೆಯುವುದು ನಮ್ಮ ಮೊದಲ ಉದ್ದೇಶವಾಗಿತ್ತು. 117 ರನ್ಗಳಿಸಿದ ಬಳಿಕವಷ್ಟೇ ಗೆಲುವಿಗಾಗಿ ಪ್ರಯತ್ನಿಸುವುದು ನಮ್ಮ ರಣತಂತ್ರವಾಗಿತ್ತು,'' ಎಂದು ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ 26 ವರ್ಷದ ಆಟಗಾರ್ತಿ ತಮ್ಮ ತಂಡದ ರಣತಂತ್ರವನ್ನು ಸಮರ್ಥಿಸಿಕೊಂಡರು.
ಪಂದ್ಯದಲ್ಲಿ ವೆಲಾಸಿಟಿ ಪರ ವೇದಾ 29 ಎಸೆತಗಳಲ್ಲಿ 3 ಫೋರ್ಗಳನ್ನು ಒಳಗೊಂಡ 30 ರನ್ಗಳನ್ನು ದಾಖಲಿಸಿ ಔಟಾಗದೆ ಉಳಿದರು. 143 ರನ್ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ವೆಲಾಸಿಟಿ ತಂಡ ಅಂತಿಮವಾಗಿ 51 ಎಸೆತಗಳಲ್ಲಿ 66 ರನ್ಗಳನ್ನು ಮಾತ್ರ ಗಳಿಸಬೇಕಿತ್ತು. ವೆಲಾಸಿಟಿಗೆ ಇದರಲ್ಲಿ 40 ರನ್ಗಳನ್ನು ಗಳಿಸಿದರೂ ಸ್ಮೃತಿ ಮಂಧಾನಾ ನಾಯಕತ್ವದ ಟ್ರಯಲ್ಬ್ಲೇಝರ್ಸ್ ತಂಡವನ್ನು ಹಿಂದಿಕ್ಕಿ ಫೈನಲ್ ಪ್ರವೇಶಿಸಲು ಸಾಧ್ಯವಾಗುತ್ತಿತ್ತು. ವೆಲಾಸಿಟಿ ಪಂದ್ಯ ಸೋತರೂ ಉತ್ತಮ ರನ್ರೇಟ್ ಮೂಲಕ ಫೈನಲ್ ಅರ್ಹತೆ ಪಡೆಯುವ ಉತ್ತಮ ಸ್ಥಿತಿಯಲ್ಲಿತ್ತು.
ಇನ್ನು 77ಕ್ಕೆ ಮೂರು ವಿಕೆಟ್ ಕಳೆದುಕೊಂಡಿದ್ದ ವೆಲಾಸಿಟಿ ತಂಡ, ಬಳಿಕ ಯಾವುದೇ ವಿಕೆಟ್ ಕಳೆದುಕೊಳ್ಳದೆ 51 ಎಸೆತಗಳಲ್ಲಿ 53 ರನ್ಗಳನ್ನು ಗಳಿಸಿತು. ಈ ಅವಧಿಯಲ್ಲಿ ತಂಡ ಗಳಿಸಿದ್ದು ಕೇವಲ 2 ಬೌಂಡರಿಗಳನ್ನು ಮಾತ್ರ. ವೆಲಾಸಿಟಿ ಎಲ್ಲಿಯೂ ಗೆಲುವಿಗಾಗಿ ಪ್ರಯತ್ನಿಸದೆ ಕೇವಲ ರನ್ರೇಟ್ ಕಾಯ್ದುಕೊಳ್ಳುವ ಕಡೆಗೆ ಹೆಚ್ಚಿನ ಮಹತ್ವ ನೀಡಿತ್ತು.
ವೆಲಾಸಿಟಿ ತಂಡ ತನ್ನ ಮೊದಲ ಪಂದ್ಯದಲ್ಲಿ ಟ್ರಯಲ್ಬ್ಲೇಝರ್ಸ್ ಎದುರು 3 ವಿಕೆಟ್ಗಳ ಜಯ ದಾಖಲಿಸಿತ್ತು. ಇದೀಗ ಮೇ 11ರಂದು ಜೈಪುರದಲ್ಲೇ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸೂಪರ್ನೋವಾಸ್ ವಿರುದ್ಧ ಮತ್ತೊಮ್ಮೆ ಸೆಣಸಾಡಲಿದೆ.