
ಕೋಲ್ಕತ್ತಾದ ಸಾಲ್ಟ್ ಲೇಕ್ನ 22 ಯಾರ್ಡ್ಸ್ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಗ್ರೂಪ್ B ಫೈಟ್ನಲ್ಲಿ ಅಸ್ಸಾಂ ವಿರುದ್ಧ ಕರ್ನಾಟಕ ತಂಡವು 6 ವಿಕೆಟ್ಗಳಿಂದ ಸೋಲನ್ನ ಅನುಭವಿಸಿದೆ. ಇದು ಪ್ರಸ್ತುತ ಟೂರ್ನಿಯಲ್ಲಿ ಕರ್ನಾಟಕದ ಮೊದಲ ಸೋಲಾಗಿದೆ.
ಕರ್ನಾಟಕ ನೀಡಿದ್ದ 297 ರನ್ಗಳ ಗುರಿಯನ್ನ ಯಶಸ್ವಿಯಾಗಿ ಬೆನ್ನತ್ತಿದ ಅಸ್ಸಾಂ 10 ಎಸೆತಗಳು ಬಾಕಿ ಇರುವಂತೆಯೇ ಆರು ವಿಕೆಟ್ಗಳ ಜಯ ಸಾಧಿಸಿತು. ರಾಹುಲ್ ಹಜರಿಕ ಅರ್ಧಶತಕ ಮತ್ತು ಸ್ವರೂಪಂ ಪುರಕಾಯಸ್ತ ಬೊಂಬಾಟ್ ಶತಕದ ನೆರವಿನಿಂದ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.
102 ಎಸೆತಗಳಲ್ಲಿ ಅಜೇಯ 112 ರನ್ ಕಲೆಹಾಕಿದ ಸ್ವರೂಪಂ ಪುರಕಾಯಸ್ತ ಇನ್ನಿಂಗ್ಸ್ನಲ್ಲಿ 17 ಸೊಗಸಾದ ಬೌಂಡರಿ ಒಳಗೊಂಡಿದ್ದವು. 109.80 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಸ್ವರೂಪಂ ವಿಕೆಟ್ ಪಡೆಯಲು ಕರ್ನಾಟಕದ ಬೌಲರ್ಗಳು ಹೆಣಗಾಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸಿಬ್ಶಂಕರ್ ರಾಯ್ 49 ಎಸೆತಗಳಲ್ಲಿ ಅಜೇಯ 66 ರನ್ ಕಲೆಹಾಕಿ ಉತ್ತಮ ಸಾಥ್ ನೀಡಿದರು. ಇವರ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿದ್ದವು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಪರ ನಾಯಕ ಮಯಾಂಕ್ ಅಗರ್ವಾಲ್ ಅರ್ಧಶತಕ (64), ನಿಕಿನ್ ಜೋಸ್ ಶತಕ(106) , ಮನೀಶ್ ಪಾಂಡೆ ಅರ್ಧಶತಕ (58) ಮನೋಜ್ ಬಂಡಾಜೆ 19 ಎಸೆತಗಳಲ್ಲಿ 35ರನ್ ನೆರವಿನಿಂದ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಕಲೆಹಾಕಿತು. ಆದ್ರೆ ಈ ಗುರಿಯನ್ನ ಡಿಫೆಂಡ್ ಮಾಡಿಕೊಳ್ಳುವಲ್ಲಿ ಮಯಾಂಕ್ ಪಡೆ ವಿಫಲಗೊಂಡಿದ್ದು, ಮೊದಲ ಸೋಲನ್ನ ಕಂಡಿದೆ.
48.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿದ ಅಸ್ಸಾಂ ಈ ಗೆಲುವಿನ ಮೂಲಕ ಗ್ರೂಪ್ ಬಿ ಪಾಯಿಂಟ್ಸ್ ಟೇಬಲ್ನಲ್ಲಿ 16 ಪಾಯಿಂಟ್ಸ್ನೊಂದಿಗೆ ಅಗ್ರಸ್ಥಾನಕ್ಕೇರಿದೆ. ಅಷ್ಟೇ ಅಂಕ ಕಲೆಹಾಕಿರುವ ಕರ್ನಾಟಕ ನೆಟ್ ರನ್ರೇಟ್ನಲ್ಲಿ ಸ್ವಲ್ಪ ಹಿಂದಿರುವ ಕಾರಣ ಎರಡನೇ ಸ್ಥಾನದಲ್ಲಿದೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಕರ್ನಾಟಕ: ಮಯಾಂಕ್ ಅಗರ್ವಾಲ್ (ನಾಯಕ), ರವಿಕುಮಾರ್ ಸಮರ್ಥ್, ನಿಕಿನ್ ಜೋಸ್, ಮನೀಶ್ ಪಾಂಡೆ, ನಿಹಾಲ್ ಉಳ್ಳಾಲ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಾಸುಕಿ ಕೌಶಿಕ್, ಮನೋಜ್ ಬಂಡಾಜೆ, ರೋನಿತ್ ಮೋರೆ, ಮುರಳೀಧರ ವೆಂಕಟೇಶ್
ಬೆಂಚ್: ಶರತ್ ಬಿ.ಆರ್., ಅಭಿನವ್ ಮನೋಹರ್, ವಿಧ್ವತ್ ಕಾವೇರಪ್ಪ, ಜಗದೀಶ ಸುಚಿತ್
ಅಸ್ಸಾಂ: ಕುನಾಲ್ ಸೈಕಿಯಾ (ನಾಯಕ ಮತ್ತು ವಿಕೆಟ್ ಕೀಪರ್), ಸಿಬ್ಶಂಕರ್ ರಾಯ್, ರಾಹುಲ್ ಹಜಾರಿಕಾ, ರಿಯಾನ್ ಪರಾಗ್, ಸಾಹಿಲ್ ಜೈನ್, ಆಮ್ಲನ್ಜ್ಯೋತಿ ಪರೇಶ್ ದಾಸ್, ಸ್ವರೂಪಂ ಪುರಕಾಯಸ್ತ, ರಜ್ಜಕುದ್ದೀನ್ ಅಹ್ಮದ್, ಮುಖ್ತಾರ್ ಹುಸೇನ್, ಸುನಿಲ್ ಲಚಿತ್, ಅವಿನೋವ್ ಚೌಧರಿ
ಬೆಂಚ್: ಶುಭಂ ಮಂಡಾಲ್, ರಿಶವ್ ದಾಸ್, ಮ್ರಿನ್ಮೋಯ್ ದತ್ತ, ಅಭಿಷೇಕ್ ಠಾಕೂರಿ