
ವಿಶ್ವ ಕ್ರಿಕೆಟ್ನ ಸ್ಪಿನ್ ದಿಗ್ಗಜ, ಮುತ್ತಯ್ಯ ಮುರಳಿಧರನ್ ಅವರ ಜೀವನಾಧಾರಿತ '800' ಚಿತ್ರದಿಂದ ಹೊರ ನಡೆಯುವಂತೆ ತಮಿಳುನಾಡು ಖ್ಯಾತ ನಟ ವಿಜಯ್ ಸೇತುಪತಿಗೆ ಮುತ್ತಯ್ಯ ಮನವಿ ಮಾಡಿದ್ದಾರೆ.
ಮುರಳಿಧರನ್ ಅವರ ಟ್ವೀಟ್ ಅನ್ನು ಶೇರ್ ಮಾಡಿರುವ ವಿಜಯ್ ಸೇತುಪತಿ ಅವರು ಥ್ಯಾಂಕ್ ಯು ಅಂಡ್ ಗುಡ್ ಬೈ ಎಂದು ಬರೆದುಕೊಂಡಿರುವುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಇನ್ನು ಸೇತುಪತಿ ಅವರು ಈ ಚಿತ್ರದಿಂದ ಹಿಂದೆ ಸರಿಯುತ್ತಾರಾ ಎಂಬ ಪ್ರಶ್ನೆಗಳು ಮೂಡಿವೆ.
ಬಯೋಪಿಕ್ 800 ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ತಮಿಳುನಾಡಿನಲ್ಲಿ ವಿಜಯ್ ಸೇತುಪತಿ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಯಿತು. ಹೀಗಾಗಿ ಚಿತ್ರದಿಂದ ಹೊರನಡೆಯುವಂತೆ ಮುತ್ತಯ್ಯ ಮುರಳಿಧರನ್ ಅವರು ವಿಜಯ್ ಸೇತುಪತಿಗೆ ಮನವಿ ಮಾಡಿದ್ದಾರೆ.
ಮುತ್ತಯ್ಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಎಂಎಸ್ ಶ್ರೀಪತಿ ನಿರ್ದೇಶನದ 800 ಸಿನಿಮಾದ ಕುರಿತಾಗಿ ತಮಿಳುನಾಡಿನಲ್ಲಿ ಸಾಕಷ್ಟು ವಿವಾದಗಳು ಉಂಟಾಗಿವೆ. ತಮಿಳಿನ ಅದ್ಭುತ ನಟರಲ್ಲಿ ಒಬ್ಬರಾದ ವಿಜಯ್ ಸೇತುಪತಿ ವಿವಾದಕ್ಕೆ ಸಿಲುಕಿರುವುದು ನನಗೆ ಇಷ್ಟವಿಲ್ಲ. ಇದರಿಂದ ವಿಜಯ್ ಅವರ ಮುಂದಿನ ಚಿತ್ರಗಳಿಗೆ ತೊಂದರೆಯಾಗಬಹುದು. ಆ ಭಯದಿಂದಲೇ ನಾನು ಈ ಚಿತ್ರದಿಂದ ಹೊರ ನಡೆಯುವಂತೆ ಅವರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ.
ಈ ಮನವಿಯ ಬಳಿಕ ವಿಜಯ್ ಸೇತುಪತಿ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.