
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಬಳಗ ಜಯವನ್ನ ಸಮೀಪಿಸಿದೆ. ಭಾರತ ನೀಡಿರುವ 540 ರನ್ಗಳ ಬೃಹತ್ ಗುರಿ ಬೆನ್ನಟ್ಟಿರುವ ನ್ಯೂಜಿಲೆಂಡ್ ಅದಾಗಲೇ ಐದು ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿದೆ. ಆದ್ರೆ ಕಿವೀಸ್ ಗೆಲುವಿಗೆ ಇನ್ನೂ 400 ರನ್ ಬಾಕಿ ಇದೆ. ಹೀಗಾಗಿ ನಾಲ್ಕನೇ ದಿನವೇ ಭಾರತ ಉಳಿದ ಐದು ವಿಕೆಟ್ ಪಡೆದು ಗೆಲುವಿನ ಕೇಕೆ ಹಾಕಲು ರೆಡಿಯಾಗಿದೆ.
ಪಂದ್ಯದಲ್ಲಿ ಸಾಕಷ್ಟು ರೆಕಾರ್ಡ್ಗಳು ಧೂಳೀಪಟವಾಗಿವೆ. ಶತಕವೀರ ಮಯಾಂಕ್ ಅಗರ್ವಾಲ್ ಮೊದಲ ಇನ್ನಿಂಗ್ಸ್ನಲ್ಲಿ 150 ರನ್, ಎರಡನೇ ಇನ್ನಿಂಗ್ಸ್ನಲ್ಲಿ 50 ರನ್ ಕಲೆಹಾಕಿದ್ದಾರೆ. ಕಿವೀಸ್ ಪರ ಅಜಾಜ್ ಪಟೇಲ್ ಒಂದೇ ಇನ್ನಿಂಗ್ಸ್ನಲ್ಲಿ ಹತ್ತು ವಿಕೆಟ್ ಕಬಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಜೊತೆಗೆ ನ್ಯೂಜಿಲೆಂಡ್ ಪರ ಎರಡನೇ ಬೆಸ್ಟ್ ಬೌಲಿಂಗ್ ಪ್ರದರ್ಶಿಸಿದ್ದು, ವಿದೇಶಿ ಬೌಲರ್ ಭಾರತದಲ್ಲಿ ನೀಡಿದ ಬೆಸ್ಟ್ ಪರ್ಫಾಮೆನ್ಸ್ ಇದಾಗಿದೆ.
ಇನ್ನು ಭಾರತದ ಪರ ರವಿಚಂದ್ರನ್ ಅಶ್ವಿನ್ ಕ್ಯಾಲೆಂಡರ್ ಇಯರ್ ನಲ್ಲಿ ನಾಲ್ಕನೇ ಬಾರಿಗೆ 50 ವಿಕೆಟ್ ಗಡಿದಾಟಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎಂಬ ಸಾಧನೆ ಮಾಡಿದ್ದಾರೆ. ಈ ರೆಕಾರ್ಡ್ಗಳ ಜೊತೆಗೆ ಕೆಲವು ವಿವಾದಾತ್ಮಕ ಕ್ಷಣಗಳನ್ನು ಸಹ ಕಾಣಬಹುದು. ಭಾರತದ ಮೊದಲ ಇನ್ನಿಂಗ್ಸ್ನಲ್ಲಿ ಕೊಹ್ಲಿ ಔಟಾಗಿರುವುದು ಕ್ರಿಕೆಟ್ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಕಿವೀಸ್ ಅಜಾಜ್ ಪಟೇಲ್ ಸ್ಪಿನ್ ದಾಳಿಯಲ್ಲಿ ಕೊಹ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ರು. ಆದ್ರೀಗ ವಿರಾಟ್ ವಿಕೆಟ್ ಒಪ್ಪಿಸಿದ್ದು, ವಿವಾದಾತ್ಮಕ ತಿರುವು ಪಡೆದುಕೊಂಡಿತು. ಚೆಂಡು ಮೊದಲು ಬ್ಯಾಟ್ಗೆ ತಾಗಿ ನಂತರ ಪ್ಯಾಡ್ಗೆ ಬಡಿದಂತಿತ್ತು. ಆದರೆ ಥರ್ಡ್ ಅಂಪೈರ್ ಆನ್ ಫೀಲ್ಡ್ ಅಂಪೈರ್ ನಿರ್ಧಾರವನ್ನು ಎತ್ತಿ ಹಿಡಿದರು. ವಿರಾಟ್ ಕೊಹ್ಲಿ ಮತ್ತು ಭಾರತೀಯ ಪಾಳಯವು ರಿವೀವ್ ನೋಡಿದ ನಂತರ ಎಲ್ಲರೂ ಶಾಕ್ ಆದರು.
ಪಂದ್ಯದ 3 ನೇ ದಿನದಂದು ಭಾರತದ ನಾಯಕ ಅಂಪೈರ್ ಜೊತೆ ಸ್ವಲ್ಪ ಕಿರಿಕ್ ಮಾಡಿಕೊಂಡರು. ಭಾರತ ಫೀಲ್ಡಿಂಗ್ ಮಾಡುತ್ತಿದ್ದು, ನ್ಯೂಜಿಲೆಂಡ್ನ ಎರಡನೇ ಇನ್ನಿಂಗ್ಸ್ನ 16 ನೇ ಓವರ್ ಆಗಿತ್ತು. ಅಕ್ಷರ್ ಪಟೇಲ್ ಮೊದಲ ಓವರ್ ಬೌಲಿಂಗ್ ಮಾಡಲೆಂದು ಕಣಕ್ಕಿಳಿದರು.
ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಬೌಲಿಂಗ್ ಮಾಡಿದ ಸ್ಕಿಡ್ ಎಸೆತವು ಬ್ಯಾಟ್ಸ್ಮನ್ ರಾಸ್ ಟೇಲರ್ ಮತ್ತು ಕೀಪರ್ ವೃದ್ಧಿಮಾನ್ ಸಹಾ ಇಬ್ಬರನ್ನೂ ತಪ್ಪಿಸಿ, ಚೆಂಡು ಬೌಂಡರಿ ತಲುಪಿತು. ಆದ್ರೆ ಈ ಚೆಂಡನ್ನ ಟೇಲರ್ ಎಡ್ಜ್ ಮಾಡಿದ್ದಾರೆ ಎಂದು ಅಂಪೈರ್ ಪರಿಗಣಿಸಿ, ಬೈಸ್ ನೀಡುವ ಬದಲು ಟೇಲರ್ಗೆ ರನ್ ನೀಡುವಂತೆ ಸೂಚಿಸಿದ್ರು. ಈ ನಿರ್ಧಾರವು ಕೊಹ್ಲಿಯನ್ನು ದಿಗ್ಭ್ರಮೆಗೊಳಿಸಿತು ಮತ್ತು ತಕ್ಷಣವೇ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಹಿಂಜರಿಯಲಿಲ್ಲ.
ಅಂಪೈರ್ ಅನ್ನು ವ್ಯಂಗ್ಯವಾಗಿ ಕೈ ತೋರಿಸಿ ಮಾತಾಡಿದ ಕೊಹ್ಲಿಯ ಮಾತುಗಳು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದೆ. ಈಗ ಆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕ್ಟು ವೈರಲ್ ಆಗಿದೆ.
"ಯೇ ಕ್ಯಾ ಕರ್ತೇ ಹೈಂ ಯಾರ್ ಯೇ ಲೋಗ್ ಯಾರ್... ಮೇನ್ ಉಧರ್ ಆಜಾತಾ ಹು ತುಮ್ ಇಧರ್ ಆಜಾವೋ (ಹೇ ನೀವು ಏನು ಮಾಡುತ್ತಿದ್ದೀರಾ. ನಾನು ಅಲ್ಲಿಗೆ ಬರುತ್ತೇನೆ ಮತ್ತು ನೀವು ಇಲ್ಲಿಗೆ ಬನ್ನಿ)," ಎಂದು ಅಂಪೈರ್ ತಪ್ಪು ನಿರ್ಣಯಗಳ ವಿರುದ್ಧ ತಮಾಶೆಯಾಗಿ ವಿರಾಟ್ ತರಾಟೆಗೆ ತೆಗೆದುಕೊಳ್ಳುತ್ತಾರೆ.
ಅಂಪೈರ್ ನಿರ್ಧಾರ ನೋಡಿ, ನೀವು ಇಲ್ಲಿಗೆ ಬನ್ನಿ, ನಾನು ನಿಮ್ಮ ಕೆಲಸ ಮಾಡುತ್ತೀನಿ ಎನ್ನುವ ರೀತಿಯಲ್ಲಿ ವಿರಾಟ್ ಅಂಪೈರ್ ಕಾಲೆಳೆದರು.
ಏತನ್ಮಧ್ಯೆ, ಸರಣಿಯ ಮೊದಲ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಆದ್ದರಿಂದ ಈ ಪಂದ್ಯದಲ್ಲಿ ಗೆದ್ದವರು ಸರಣಿ ಗೆಲುವಿನೊಂದಿಗೆ ಸಂಭ್ರಮಿಸಲಿದ್ದಾರೆ. ಟೀಂ ಇಂಡಿಯಾ ಗೆಲುವಿಗೆ ಇನ್ನು ಐದು ಮೆಟ್ಟಿಲುಗಳಷ್ಟೇ ಬಾಕಿ ಉಳಿದಿದೆ.