ಬೆಂಗಳೂರು, ಆಗಸ್ಟ್ 23: ಟೀಂ ಇಂಡಿಯಾ ಸೇರಲು ವಿಫಲವಾಗಿರುವ ಸ್ಫೋಟಕ ಆರಂಭಿಕ ಅಟಗಾರ ವೀರೇಂದರ್ ಸೆಹ್ವಾಗ್ ಅವರು ದೆಹಲಿ ತಂಡಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಹಿಂದೆ ಒನ್ ಇಂಡಿಯಾದಲ್ಲಿ ವರದಿ ಮಾಡಿದಂತೆ ದೆಹಲಿಯ 'ನವಾಬ' ಸೆಹ್ವಾಗ್ ಅವರು ದೆಹಲಿ ತಂಡ ತೊರೆದು ಹರ್ಯಾಣ ಕ್ರಿಕೆಟ್ ತಂಡ ಸೇರಿದ್ದಾರೆ.
ಮುಂದಿನ ದೇಶಿ ಋತುವಿನಲ್ಲಿ ಹರಿಯಾಣ ತಂಡದ ಪರ ಸೆಹ್ವಾಗ್ ಬ್ಯಾಟ್ ಬೀಸಲಿದ್ದಾರೆ. 1997-98ರಿಂದ ದೆಹಲಿ ತಂಡದ ಭಾಗವಾಗಿದ್ದ ಸೆಹ್ವಾಗ್, 2 ದಿನಗಳ ಹಿಂದಷ್ಟೇ ದೆಹಲಿ ಕ್ರಿಕೆಟ್ ಸಂಸ್ಥೆಯಿಂದ ನಿರಾಕ್ಷೇಪಣಾ ಪತ್ರ (ಎನ್ಒಸಿ) ಪಡೆದುಕೊಂಡಿದ್ದಾರೆ ಎಂದು ಹರಿಯಾಣ ಕ್ರಿಕೆಟ್ ಸಂಸ್ಥೆ (ಎಚ್ಸಿಎ) ಕಾರ್ಯದರ್ಶಿ ಅನಿರುದ್ಧ್ ಚೌಧರಿ ತಿಳಿಸಿದ್ದಾರೆ.

ಮುಂದಿನ ಋತುವಿನಲ್ಲಿ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಲು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಬಯಸಿದೆ. ಹೀಗಾಗಿ ಸೆಹ್ವಾಗ್, ಗೌತಮ್ ಗಂಭೀರ್, ಮಿಥುನ್ ಮನ್ಹಾಸ್ ಹಾಗೂ ರಜತ್ ಭಾಟಿಯಾರಂಥ ಹಿರಿಯ ಆಟಗಾರರನ್ನು ಕೈಬಿಡಲಾಗುತ್ತದೆ.[ತಮಿಳುನಾಡು ಬಗ್ಗು ಬಡಿದು ಟ್ರೋಫಿ ಎತ್ತಿದ ಕರ್ನಾಟಕ]
ಕಳೆದ ರಣಜಿ ಟೂರ್ನಿಯಲ್ಲಿ ದೆಹಲಿ ಪರ ಸೆಹ್ವಾಗ್ 8 ಪಂದ್ಯಗಳಿಂದ 2 ಶತಕಗಳ ಸಹಿತ 51.63 ಸರಾಸರಿಯಲ್ಲಿ 568 ರನ್ ಪೇರಿಸಿದ್ದರು. ನಾಯಕ ಗೌತಮ್ಗಂಭೀರ್ ಬಳಿಕ ಅತಿ ಹೆಚ್ಚು ರನ್ಗಳಿಸಿದ ತಂಡದ 2ನೇ ಆಟಗಾರ ಎನಿಸಿಕೊಂಡಿದ್ದರು.
1997-98ರಿಂದ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ದೆಹಲಿ ತಂಡದ ಭಾಗವಾಗಿರುವ ಸೆಹ್ವಾಗ್, 17 ವರ್ಷಗಳ ದೇಶಿ ಕ್ರಿಕೆಟ್ ಬದುಕಿಗೆ ತವರಿನ ತಂಡದಲ್ಲಿ ವಿದಾಯ ಪಡೆದುಕೊಂಡಿದ್ದಾರೆ.. ಇನ್ನೂ ಎರಡು ಮೂರು ವರ್ಷ ದೆಹಲಿ ಪರ ಆಡುವ ಇಚ್ಛೆ ಹೊಂದಿದ್ದರು. 104 ಟೆಸ್ಟ್, 251 ಏಕದಿನ ಮತ್ತು 19 ಟಿ20 ಪಂದ್ಯಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ 17 ಸಾವಿರಕ್ಕೂ ಅಧಿಕ ರನ್ಗಳಿಸಿದ್ದಾರೆ.
36 ವರ್ಷ ವಯಸ್ಸಿನ ಸೆಹ್ವಾಗ್ ಅವರ ಅಂತಾರಾಷ್ಟ್ರೀಯ ವೃತ್ತಿ ಅನುಭವ ಹಾಗೂ ಐಪಿಎಲ್ ನಲ್ಲಿನ ಅನುಭವವನ್ನು ಹರ್ಯಾಣದ ಯುವ ತಂಡಕ್ಕೆ ಧಾರೆ ಎರೆಯಲು ಸಿದ್ಧರಾಗಿದ್ದಾರೆ. ಸೆಹ್ವಾಗ್ ಆಗಮನದಿಂದ ಹರ್ಯಾಣ ತಂಡಕ್ಕೆ ಹೆಚ್ಚಿನ ಬಲ ಬಂದಿದೆ ಎಂದು ಬಿಸಿಸಿಐ ಖಜಾಂಚಿಯೂ ಆಗಿರುವ ಹರ್ಯಾಣ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಅನಿರುದ್ಧ್ ಚೌಧರಿ ಅವರು ಪ್ರತಿಕ್ರಿಯಿಸಿದ್ದಾರೆ. (ಪಿಟಿಐ)