
2023ರ ಏಕದಿನ ವಿಶ್ವಕಪ್ವರೆಗೆ ರಾಹುಲ್ ದ್ರಾವಿಡ್ ಅವರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆ ಅಬಾಧಿತವಾಗಿದ್ದು, ಒಪ್ಪಂದದ ಅವಧಿ ಮುಗಿದ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿವಿಎಸ್ ಲಕ್ಷ್ಮಣ್ ಅವರನ್ನು ಭಾರತ ತಂಡದ ಮುಂದಿನ ಮುಖ್ಯ ಕೋಚ್ ಆಗಿ ನೇಮಿಸುವ ಸಾಧ್ಯತೆ ದಟ್ಟವಾಗಿದೆ.
ನ್ಯೂಸ್ 18 ಕ್ರಿಕೆಟ್ ನೆಕ್ಸ್ಟ್ ರಿಪೋರ್ಟ್ ಪ್ರಕಾರ, ರಾಹುಲ್ ದ್ರಾವಿಡ್ ಅವರ ವಿಸ್ತರಣೆಯನ್ನು ಬಿಸಿಸಿಐ ನಿರಾಕರಿಸಿದರೆ, ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರು ಪುರುಷರ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಬಹುದು.
ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ವಿವಿಎಸ್ ಲಕ್ಷ್ಮಣ್ ಹಲವು ಬಾರಿ ಭಾರತ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಜಿಂಬಾಬ್ವೆಯ ಕಿರು ಪ್ರವಾಸ, ಜೂನ್ 2022ರಲ್ಲಿ ಐರ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕಾಗಿ ತಮಡದೊಂದಿಗೆ ಪ್ರಯಾಣಿಸಿದ್ದರು.

2022ರಲ್ಲಿ ಯುಎಇಯಲ್ಲಿ ನಡೆದ ಟಿ20 ಏಷ್ಯಾ ಕಪ್ನಲ್ಲಿ ರಾಹುಲ್ ದ್ರಾವಿಡ್ ಕೋವಿಡ್-19 ಅನಾರೋಗ್ಯದಿಂದ ಬಳಲುತ್ತಿದ್ದಾಗ, ಲಕ್ಷ್ಮಣ್ ಸಹ ಭಾರತೀಯ ತಂಡದ ಜೊತೆಯಲ್ಲಿದ್ದರು. ಇನ್ನು ನವೆಂಬರ್ 2022ರಲ್ಲಿ ಟಿ20 ವಿಶ್ವಕಪ್ ಮುಗಿದ ನಂತರ ವೈಟ್-ಬಾಲ್ ಪ್ರವಾಸಕ್ಕಾಗಿ ಭಾರತ ತಂಡದ ಮುಖ್ಯ ಕೋಚ್ ಆಗಿ ನ್ಯೂಜಿಲೆಂಡ್ಗೆ ಪ್ರಯಾಣಿಸಿದರು.
ವಿವಿಎಸ್ ಲಕ್ಷ್ಮಣ್ ಕೇವಲ ಭವಿಷ್ಯದ ಪೀಳಿಗೆಯ ಅಥ್ಲೀಟ್ಗಳ ತರಬೇತಿಗೊಳಿಸಲು ಎನ್ಸಿಎನಲ್ಲಿ ಕೆಲಸ ಮಾಡಲಿಲ್ಲ. ಅವರು ಭಾರತದ ಯಶಸ್ವಿ ಅಂಡರ್-19 ತಂಡದೊಂದಿಗೆ 2022ರ ವಿಶ್ವಕಪ್ಗೆ ಪ್ರಯಾಣಿಸಿದರು ಮತ್ತು ಯುವ ತಂಡದ ಪ್ರದರ್ಶನದಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಿದ್ದರು.

ನವೆಂಬರ್ 2021ರಲ್ಲಿ ರವಿಶಾಸ್ತ್ರಿ ಉತ್ತರಾಧಿಕಾರಿಯಾದ ನಂತರ ರಾಹುಲ್ ದ್ರಾವಿಡ್ ಅವರು ಭಾರತದ ತಂಡದ ಮುಖ್ಯ ಕೋಚ್ ಆಗಿ ಮಿಶ್ರ ಪ್ರತಿಫಲ ಸಮಯವನ್ನು ಹೊಂದಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಸೋತರು ಮತ್ತು ಬರ್ಮಿಂಗ್ಹ್ಯಾಮ್ನಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯವನ್ನು ಸಹ ಕಳೆದುಕೊಂಡರು. ಇನ್ನು 2022ರ ಟಿ20 ಏಷ್ಯಾ ಕಪ್ನ ಫೈನಲ್ ತಲುಪಲು ಸಾಧ್ಯವಾಗಲಿಲ್ಲ ಮತ್ತು ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಬೇಕಾಯಿತು.
ಹೀಗಾಗಿ ರಾಹುಲ್ ದ್ರಾವಿಡ್ ಅವರ ಅವಧಿ ಮುಗಿದ ನಂತರ, ಕೋಚ್ ಸ್ಥಾನದಲ್ಲಿ ಅವರನ್ನು ಮತ್ತೆ ಮುಂದುವರೆಸದೆ, ವಿವಿಎಸ್ ಲಕ್ಷ್ಮಣ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸುವ ಸುಳಿವು ಈಗಿನಿಂದಲೇ ಸಿಕ್ಕಿದೆ ಎಂದು ಹೇಳಬಹುದು.